ಎಸ್‌ಯುಸಿಐ ಪಕ್ಷದ ಅಭ್ಯರ್ಥಿ ಸುಮಾ ನಾಮಪತ್ರ ಸಲ್ಲಿಕೆ

| Published : Mar 31 2024, 02:01 AM IST

ಸಾರಾಂಶ

ಲೋಕಸಭಾ ಕ್ಷೇತ್ರದ ಎಸ್‌.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಸುಮಾ ಶನಿವಾರ ನಗರದ ಭುವನೇಶ್ವರಿ ವೃತ್ತದಿಂದ (ಪಚ್ಚಪ್ಪ ವೃತ್ತ) ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಲೋಕಸಭಾ ಕ್ಷೇತ್ರದ ಎಸ್‌.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಸುಮಾ ಶನಿವಾರ ನಗರದ ಭುವನೇಶ್ವರಿ ವೃತ್ತದಿಂದ (ಪಚ್ಚಪ್ಪ ವೃತ್ತ) ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿಯ ಸದಸ್ಯ ಬಿ.ರವಿ‌ ಮಾತನಾಡಿ, ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ಬೆಲೆ ಏರಿಕೆ, ನಿರುದ್ಯೋಗ, ಬಡತನ ಹೆಚ್ಚಾಗುತ್ತಲೇ ಇದ್ದು, ದುಡಿಯುವ ಜನಗಳು ಸಂಕಷ್ಟದಲ್ಲಿದ್ದಾರೆ. ಶ್ರೀಮಂತರು ಬಡವರ ನಡುವಿನ ಅಂತರ ಹೆಚ್ಚಾಗುತ್ತಲೇ ಇದೆ. NDA ಮತ್ತು INDIA ಎರಡೂ ಕೂಡಾ ಬಂಡವಾಳಶಾಹಿ ಮಾಲೀಕರ ಸೇವೆಯಲ್ಲಿ ನಿರತವಾಗಿರುವ ಕೂಟಗಳಾಗಿವೆ. ಚುನಾವಣಾ ಬಾಂಡ್‌ಗಳ ಹೆಸರಿನಲ್ಲಿ ವ್ಯಾಪಕವಾದ ಭ್ರಷ್ಟಾಚಾರವಾಗಿದ್ದು, ಎಲ್ಲಾ ಪಕ್ಷಗಳು ಇದರ ಫಲಾನುಭವಿಗಳಾಗಿವೆ. ಇವರುಗಳಿಂದ ‌ಜನತೆಯು ಏನನ್ನು ನೀರಿಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಇವರಿಗೆ ಪರ್ಯಾಯವಾಗಿ ದುಡಿಯುವ ಜನಗಳ ರಾಜಕೀಯವನ್ನು ಬಲಪಡಿಸಲು, ಜನ ಹೋರಾಟಗಳನ್ನು ಕಟ್ಟುತ್ತಿರುವ ನಮ್ಮ ಪಕ್ಷದಿಂದ ಸ್ಪರ್ಧಿಸುತ್ತಿದ್ದೇವೆ. ಇದನ್ನು ಮನಗಂಡು ನಮ್ಮ ಪಕ್ಷವನ್ನು ಚುನಾಯಿಸಬೇಕು ಎಂದು ಮನವಿ ಮಾಡಿದರು.ಇಂದಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜಾತಿ ಧರ್ಮ ದ ಹೆಸರಿನಲ್ಲಿ ಜನರ ಒಗ್ಗಟ್ಟನ್ನು ಮುರಿಯುತ್ತಿದೆ. ದಿನೇ ದಿನೇ ಆರೋಗ್ಯ ಖಾಸಗೀಕರಣ, ಶಿಕ್ಷಣದ ವ್ಯಾಪಾರೀಕರಣ, ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಲೇ ಇದೆ. ಇದರ ವಿರುದ್ಧ ನಮ್ಮ ಪಕ್ಷ ಮತ್ತು ಮುಂದಳಗಳು‌ ಹೋರಾಟ ಮಾಡುತ್ತಿವೆ. ಕಾಡಂಚಿನ ಪ್ರದೇಶಗಳಲ್ಲಿ ವನ್ಯಜೀವಿಗಳ ಹಾವಳಿ ಮತ್ತು ಅರಣ್ಯ ಹಕ್ಕು ಕಾಯ್ದೆ, ಭೂ ಸಂತ್ರಸ್ತರಿಗೆ ಉದ್ಯೋಗ, ಕಾರ್ಮಿಕರ ಸಮಸ್ಯೆಗಳು ಹೀಗೆ ಹಲವು ಸಮಸ್ಯೆಗಳಿದ್ದು ಇವುಗಳನ್ನು ಸಂಸತ್ತಿನಲ್ಲಿ ಎತ್ತಲು ನನ್ನನ್ನು ಚುನಾಯಿಸಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸೆಕ್ರಟೇರಿಯೇಟ್ ಸದಸ್ಯರಾದ ಚಂದ್ರಶೇಖರ ‌ಮೇಟಿ, ಜಿಲ್ಲಾ ಸಮಿತಿ ಸದಸ್ಯರಾದ ಸಂಧ್ಯಾ.ಪಿ.ಎಸ್, ಸೀಮಾ , ಹರೀಶ್, ಸದಸ್ಯ ಬಸವರಾಜು, ಸುನೀಲ್ ಸುಭಾಷ್, ಚಂದ್ರಕಲಾ, ನೀತುಶ್ರೀ, ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗವಹಿಸಿದ್ದರು.