ಸಾರಾಂಶ
ಪ್ರತಿ ಟನ್ ಕಬ್ಬಿಗೆ ₹3500 ದರ ಕೊಡಬೇಕೆಂದು ಆಗ್ರಹಿಸಿ ಮುಧೋಳ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ನಡೆಯುತ್ತಿರುವ ರೈತರ ಹೋರಾಟ ಬುಧವಾರವೂ ಮುಂದುವರೆದಿದ್ದು, ಬುಧವಾರ ಬೆಳಗ್ಗೆಯೇ ರೈತರು ಮುಧೋಳ-ಬೆಳಗಾವಿ, ಮುಧೋಳ-ಧಾರವಾಡ, ಮುಧೋಳ-ನಿಪ್ಪಾಣಿ, ಮುಧೋಳ-ವಿಜಯಪುರ ರಾಜ್ಯ ಹೆದ್ದಾರಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಕನ್ನಡ ಪ್ರಭ ವಾರ್ತೆ ಮುಧೋಳ
ಪ್ರತಿ ಟನ್ ಕಬ್ಬಿಗೆ ₹3500 ದರ ಕೊಡಬೇಕೆಂದು ಆಗ್ರಹಿಸಿ ಮುಧೋಳ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ನಡೆಯುತ್ತಿರುವ ರೈತರ ಹೋರಾಟ ಬುಧವಾರವೂ ಮುಂದುವರೆದಿದ್ದು, ಬುಧವಾರ ಬೆಳಗ್ಗೆಯೇ ರೈತರು ಮುಧೋಳ-ಬೆಳಗಾವಿ, ಮುಧೋಳ-ಧಾರವಾಡ, ಮುಧೋಳ-ನಿಪ್ಪಾಣಿ, ಮುಧೋಳ-ವಿಜಯಪುರ ರಾಜ್ಯ ಹೆದ್ದಾರಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ನೇತೃತ್ವದಲ್ಲಿ ಮಂಗಳವಾರ ತಡರಾತ್ರಿವರೆಗೆ ನಡೆದ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಮಾಲೀಕರೊಂದಿಗಿನ ಸಂಧಾನ ಸಭೆ ವಿಫಲವಾಗಿದ್ದರಿಂದ ರೈತರು ಆಕ್ರೋಶಗೊಂಡು ಹೆದ್ದಾರಿ ತಡೆ ನಡೆಸಿ ಆಕ್ರೋಶ ಹೊರಹಾಕಿದರು.ಶಾಲಾ, ಕಾಲೇಜುಗಳ ಬಸ್, ಅಂಬ್ಯುಲೆನ್ಸ್, ಪತ್ರಿಕೆ ಸರಬರಾಜು ಮತ್ತು ಹಾಲಿನ ವಾಹನ ಸಂಚಾರಕ್ಕೆ ರಸ್ತೆ ಮುಕ್ತಗೊಳಿಸಲಾಗಿತ್ತು, ಮುಧೋಳದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು, ಶಾಲಾ-ಕಾಲೇಜು, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಕಾರ್ಯ ನಿರ್ವಹಿಸಿದವು. ಮುಧೋಳ ಶ್ರೀ ಬಸವೇಶ್ವರ ಕಿರಾಣಾ ವರ್ತಕರ ಸಂಘ ಸೇರಿದಂತೆ ವಿವಿಧ ಸಂಘಟನೆಯವರು ಹೋರಾಟ ಸ್ಥಳಕ್ಕೆ ಆಗಮಿಸಿ ತಮ್ಮ ಬೆಂಬಲ ಸೂಚಿಸಿದರಲ್ಲದೆ, ಹೋರಾಟಗಾರರಿಗೆ ಊಟದ ವ್ಯವಸ್ಥೆಗಾಗಿ ಹಣಕಾಸಿನ ನೆರವು ನೀಡಿದರು. ₹3500 ಬೆಲೆ ಸಿಗುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿರುವ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಯವರು ಕ್ಯಾರೆ ಅನ್ನುತ್ತಿಲ್ಲ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಲವು ಭಾರಿ ಸಭೆ ನಡೆಸಿದರೂ ಇಬ್ಬರು ತಮ್ಮ ತಮ್ಮ ಪಟ್ಟು ಸಡಿಲಿಸುತ್ತಿಲ್ಲ. ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಿದೆ. ಮತ್ತೊಂದೆಡೆ ಸರ್ಕಾರ ₹3300 ದರ ಘೋಷಣೆ ಮಾಡಿದ ಬಳಿಕ ಜಿಲ್ಲೆಯ ಇತರೆಡೆ ತಣ್ಣಗಾಗಿದ್ದ ಹೋರಾಟ ಮತ್ತೆ ಕಾವು ಪಡೆಯುತ್ತಿದೆ. ತಾಲೂಕಿನ ಹುಲ್ಯಾಳ, ಹಿಪ್ಪರಗಿ ಗ್ರಾಮಗಳಲ್ಲಿ ರೈತರು ಬುಧವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ಸರ್ಕಾರ ನಿಗದಿ ಪಡಿಸಿರುವ ₹3300 ದರ ನೀಡುವಲ್ಲಿ ಕಾರ್ಖಾನೆ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ರಿಕವರಿ ವಿಷಯದಲ್ಲಿ ಪಾರದರ್ಶಕತೆ ಇಲ್ಲ. 10.25 ರಿಕವರಿಗೆ ₹3150 ಹಾಗೂ 11.25 ಕ್ಕೆ ₹3300 ನೀಡುವುದಾಗಿ ಹೇಳುತ್ತಿರುವ ಕಾರ್ಖಾನೆ ಮಾಲೀಕರು ರೈತರ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.;Resize=(128,128))
;Resize=(128,128))
;Resize=(128,128))
;Resize=(128,128))