ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ: ನ್ಯಾ. ಸವಿತಾ

| Published : Sep 12 2024, 01:51 AM IST

ಸಾರಾಂಶ

ರಾಮನಗರ: ಮಕ್ಕಳು ಎದುರಿಸುವ ಮಾನಸಿಕ ಒತ್ತಡಗಳ ಲಕ್ಷಣಗಳನ್ನು ಆರಂಭದಲ್ಲಿಯೇ ಗುರುತಿಸಿ, ಯಾವುದೇ ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತದೆ ಎಂಬ ಆತ್ಮವಿಶ್ವಾಸವನ್ನು ತುಂಬಬೇಕು. ಆ ಮೂಲಕ ಆತ್ಮಹತ್ಯೆಯಂತಹ ಯತ್ನಗಳಿಗೆ ಪ್ರಯತ್ನಿಸುವುದನ್ನು ತಪ್ಪಿಸಬಹುದಾಗಿದೆ. ಇದಕ್ಕಾಗಿ ಪೋಷಕರು ಸದಾ ಜಾಗೃತರಾಗಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್. ಸವಿತಾ ಕರೆ ನೀಡಿದರು.

ರಾಮನಗರ: ಮಕ್ಕಳು ಎದುರಿಸುವ ಮಾನಸಿಕ ಒತ್ತಡಗಳ ಲಕ್ಷಣಗಳನ್ನು ಆರಂಭದಲ್ಲಿಯೇ ಗುರುತಿಸಿ, ಯಾವುದೇ ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತದೆ ಎಂಬ ಆತ್ಮವಿಶ್ವಾಸವನ್ನು ತುಂಬಬೇಕು. ಆ ಮೂಲಕ ಆತ್ಮಹತ್ಯೆಯಂತಹ ಯತ್ನಗಳಿಗೆ ಪ್ರಯತ್ನಿಸುವುದನ್ನು ತಪ್ಪಿಸಬಹುದಾಗಿದೆ. ಇದಕ್ಕಾಗಿ ಪೋಷಕರು ಸದಾ ಜಾಗೃತರಾಗಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್. ಸವಿತಾ ಕರೆ ನೀಡಿದರು.

ನಗರದ ಕಂದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನಿಮ್ಹಾನ್ಸ್ ಸಂಸ್ಥೆ, ಸುರಕ್ಷಾ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಅಂಗವಾಗಿ ಕಂದಾಯ ಭವನದಲ್ಲಿ ಆಯೋಜಿಸಿದ್ದ ಮನೋಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಯಾವುದೇ ಸಮಸ್ಯೆಗಳನ್ನು ಹಂಚಿಕೊಳ್ಳುವ ಮುಕ್ತ ವಾತಾವರಣವನ್ನು ಪೋಕಷರು ಕಲ್ಪಿಸಿಕೊಡಬೇಕು. ಮುಖ್ಯವಾಗಿ ಮಕ್ಕಳು ಹೇಳುವುದನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ಪೋಷಕರು ಕೇಳಿಸಿಕೊಳ್ಳಬೇಕು. ಅಂತಹ ಸಂದರ್ಭಗಳಲ್ಲಿ ಮಕ್ಕಳು ತಪ್ಪು ನಿರ್ಧಾರ ತೆಗೆದುಕೊಳ್ಳುವುದನ್ನು ತಡೆಗಟ್ಟಬಹುದು. ಮಾನಸಿಕ ಒತ್ತಡವನ್ನು ನಿರ್ವಹಿಸಲು ಮುಖ್ಯವಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಪ್ರತಿದಿನ ಕಡ್ಡಾಯವಾಗಿ ಯೋಗ, ಧ್ಯಾನ, ವ್ಯಾಯಾಮ, ಕ್ರೀಡೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು, ಇದಕ್ಕೆ ಶಾಲೆಯಲ್ಲಿಯೂ ಉತ್ತಮ ವಾತಾವರಣ ಕಲ್ಪಿಸಿಕೊಡಬೇಕು ಎಂದು ಅವರು ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ, ಸಮಸ್ಯೆಗಳಿದ್ದವರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲೂ ಕಾನೂನಾತ್ಮಕ ಸಲಹೆ ಹಾಗೂ ನೆರವು ನೀಡಲಾಗುವುದು. ಸಮಾಜದಲ್ಲಿ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಜಾಗತಿಕವಾಗಿ ಸೆಪ್ಟೆಂಬರ್ 10 ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನವನ್ನು ಆಚರಿಸಲಾಗುತ್ತಿದೆ. ಈ ಮೂಲಕ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಜನರು ಆತ್ಮಹತ್ಯೆ ಮಾಡಿಕೊಳ್ಳದಂತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ, ಇದಕ್ಕೆ ಸಮಾಜದ ನೆರವು ಅತ್ಯಗತ್ಯ, ಮಾನಸಿಕವಾಗಿ ಖಿನ್ನತೆ ಒಳಗಾದವರಿಗೆ ನೆರವು ನೀಡಿ ಅವರ ಮನಃ ಪರಿವರ್ತನೆ ಮಾಡಬೇಕು ಎಂದು ಸವಿತಾ ಸಲಹೆ ನೀಡಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಕೆ.ಕುಮಾರ್ ಮಾತನಾಡಿ, ಯಾವುದೇ ರೀತಿಯ ಮಾನಸಿಕ ಅನಾರೋಗ್ಯವಿದ್ದರೆ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಯಾವುದೇ ರೀತಿ ಮಾನಸಿಕ ಆರೋಗ್ಯ ಕಾಯಿಲೆಯಿಂದ ಬಳಲುತ್ತಿದರೆ ಉಚಿತ ಆಪ್ತ ಸಮಾಲೋಚನೆಗಾಗಿ 14416 ಟೇಲಿ ಮಾನಸ್ ಗೆ ಉಚಿತ ಸಹಾಯವಾಣಿಗೆ ಕರೆಮಾಡುವಂತೆ ತಿಳಿಸಿದರು.

ಮನೋವೈದ್ಯಕೀಯ ಕಾರ್ಯಕರ್ತೆ ಪದ್ಮರೇಖಾ ಮಾತನಾಡಿ, ಮಾನಸಿಕ ಆರೋಗ್ಯ ಸಮಸ್ಯೆ ಇರುವವರು, ಪರೀಕ್ಷಾ ಒತ್ತಡಕ್ಕೆ ಒಳಗಾದವರು, ಕೌಟುಂಬಿಕ ಸಮಸ್ಯೆಯಲ್ಲಿರುವವರು, ಆತ್ಮಹತ್ಯೆ ಆಲೋಚನೆಯಲ್ಲಿರುವವರು, ಮಾದಕ ವಸ್ತು ವ್ಯಸನದಿಂದ ಮುಕ್ತರಾಗಲು ಬಯಸುವವರು ಟೆಲಿ ಮನಸ್ ಶುಲ್ಕ ರಹಿತ ದೂರವಾಣಿ 14416ಗೆ ಕರೆ ಮಾಡಿ ಆಪ್ತ ಸಮಾಲೋಚನೆ ಪಡೆಯಬಹುದು, ಇದು 24/7 ಹಾಗೂ 365 ದಿನಗಳು ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮಂಜುನಾಥ್, ಜಿಲ್ಲಾ ಗ್ರಂಥಪಾಲಕ ಅಧಿಕಾರಿ ಚನ್ನಕೇಶವ, ಮನೋವೈದ್ಯ ಡಾ. ಆದರ್ಶ್, ನಿಮ್ಹಾನ್ಸ್ ಪ್ರಾಂಶುಪಾಲರು ನರ್ಸಿಂಗ್ ಕಾಲೇಜು ಡಾ. ಕಾತ್ಯಾಯಿನಿ, ಬೆಂಗಳೂರು ನಿಮ್ಹಾನ್ಸ್ ಮನೋವೈದ್ಯಕೀಯ ಸಮಾಜಕಾರ್ಯ ಪ್ರಾಧ್ಯಾಪಕ ಡಾ. ಅನೀಶ್. ವಿ ಚೆರಿಯನ್, ಮನೋರೋಗ ತಜ್ಞ ಡಾ. ಶಿವಸ್ವಾಮಿ, ಮನೋರೋಗ ವಿಭಾಗದ ಮುಖ್ಯಸ್ಥರು ಡಾ.ಕೆ. ಜಾನ್ ವಿಜಯ್ ಸಾಗರ್, ನಿಮ್ಹಾನ್ಸ್ ಮನೋರೋಗ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಎಂ.ರಾಜೇಂದ್ರ ಮತ್ತಿತರರು ಹಾಜರಿದ್ದರು.

11ಕೆಆರ್ ಎಂಎನ್ 6.ಜೆಪಿಜಿ

ರಾಮನಗರದ ಕಂದಾಯ ಭವನದಲ್ಲಿ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಅಂಗವಾಗಿ ಕಂದಾಯ ಭವನದಲ್ಲಿ ಆಯೋಜಿಸಿದ್ದ ಮನೋಸಂಗಮ ಕಾರ್ಯಕ್ರಮದಲ್ಲಿ ಅತಿಥಿಗಳು ಮಾದಕ ವಸ್ತು ವ್ಯಸನದಿಂದ ಮುಕ್ತರಾಗಲು ಬಯಸುವವರು ಟೆಲಿ ಮನಸ್ ಶುಲ್ಕ ರಹಿತ ದೂರವಾಣಿ 14416ನ ಭಿತ್ತಿ ಪತ್ರ ಪ್ರದರ್ಶಿಸಿದರು.