ಸುಳ್ಯ: ಇತ್ತೀಚೆಗೆ ನಿಧನರಾದ ತೂಗುಸೇತುವೆಗಳ ಸರದಾರ, ಕನ್ನಡಪ್ರಭ ಸುವರ್ಣ ನ್ಯೂಸ್‌ನ ಅಸಮಾನ್ಯ ಕನ್ನಡಿಗ ಪ್ರಶಸ್ತಿ, ಪದ್ಮಶ್ರೀ ಪುರಸ್ಕೃತ ದಿ.ಡಾ.ಗಿರೀಶ್ ಭಾರದ್ವಾಜರ ನುಡಿನಮನ - ಗಿರೀಶ ಸ್ಮೃತಿ ಸೇತು - ಸೇವೆ ಸಾಧನೆ ಮತ್ತು ಆದರ್ಶಗಳಿಗೆ ಗೌರವ ನಮನ ಕಾರ್ಯಕ್ರಮ ಸೋಮವಾರ ಕುಂಭಕೋಡು ಕಸ್ತೂರಿ ಅಚ್ಯುತ‌ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು.ದಿ. ಡಾ. ಗಿರೀಶ್ ಭಾರದ್ವಾಜರ ಭಾವಚಿತ್ರದೆದುರು ಅವರ ಪುತ್ರರಾದ ಪತಂಜಲಿ ಭಾರದ್ವಾಜ - ಸುದರ್ಶನ ಭಾರದ್ವಾಜ ದೀಪ ಬೆಳಗಿದರು. ಗಿರೀಶ್ ಭಾರದ್ವಾಜರ ಮಗಳು, ಭಾರದ್ವಾಜರ ಸಹೋದರರು, ಕುಟುಂಬಸ್ಥರು ಈ ಸಂದರ್ಭದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಗಿರೀಶ್ ಭಾರದ್ವಾಜರಿಗೆ ನುಡಿನಮನ ನಡೆಯಿತು.

ಗಿರೀಶ್ ಭಾರದ್ವಾಜರ ಬಾಲ್ಯದ ಕುರಿತು ಕುಮಾರಸ್ವಾಮಿ ತೆಕ್ಕುಂಜ, ಸ್ನೇಹತ್ವದ ಕುರಿತು ಉದ್ಯಮಿ ಆಗ್ರೋ ರಾಮಚಂದ್ರ, ಉದ್ಯಮಿಯಾಗಿ ಗಿರೀಶಣ್ಣ ಎಂಬ ವಿಷಯದಲ್ಲಿ ಬಯಂಬು ಭಾಸ್ಕರ್ ರಾವ್, ಅನ್ವೇಷಣೆ ಗಿರೀಶಣ್ಣ ವಿಷಯದಲ್ಲಿ ಉದ್ಯಮಿ ಎಂ.ಬಿ.ಸದಾಶಿವ, ದೂರದರ್ಶಿತ್ವ ಗಿರೀಶಣ್ಣ ವಿಷಯದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಡಾ.ಚಂದ್ರಶೇಖರ ದಾಮ್ಲೆ, ಸರ್ವಧರ್ಮ ಗಿರೀಶಣ್ಣ ವಿಷಯದಲ್ಲಿ ಸುಳ್ಯ ಸೈಂಟ್‌ ಬ್ರಿಜಿಡ್ಸ್ ನ ಧರ್ಮಗುರು ಫಾ.ಆಲ್ವಿನ್ ಎಡ್ವರ್ಡ್ ಡಿ.ಕುನ್ಹ, ಸಮಾಜಮುಖಿ ಗಿರೀಶಣ್ಣ ವಿಷಯದಲ್ಲಿ ಸೂಡಾ ಅಧ್ಯಕ್ಷ ಕೆ.ಎಂ.ಮುಸ್ತಫಾ, ರಾಷ್ಟ್ರ ಭಕ್ತರಾಗಿ ಗಿರೀಶಣ್ಣ ವಿಷಯದಲ್ಲಿ ಕಾರ್ಮಿಕ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್, ಅಣ್ಣ ಗಿರೀಶಣ್ಣ ವಿಷಯದಲ್ಲಿ ಸುಳ್ಯ ರೋಟರಿ ‌ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್, ಪದ್ಮಶ್ರೀ ಗಿರೀಶಣ್ಣ ವಿಷಯದಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ. ಶಿವಾನಂದ, ಭಾರದ್ವಾಜರ ಮನೆಯವರ ಪರವಾಗಿ ವೇ.ಮೂ.ಗಿರಿಧರ ಭಟ್ ಅವರು ಮಾತನಾಡಿದರು.ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ನಿರ್ವಹಿಸಿದರು. ಸಾವಿರಾರು ಮಂದಿ ಆಗಮಿಸಿ ಭಾವಚಿತ್ರಕ್ಕೆ ಪುಷ್ಪನಮನ ‌ಸಲ್ಲಿಸಿದರು ರವೀಂದ್ರ‌ ಪ್ರಭು ಮೂಲ್ಕಿ‌ ಮತ್ತು ಬಳಗದವರಿಂದ ಭಾವಗಾನ ನಡೆಯಿತು.