ಸುಲೋಚನಾಗೆ ಸಂಜೀವಿನಿ ಪ್ರಶಸ್ತಿ, ದಾಸಪ್ಪ ರೈ, ಉಮಾವತಿಗೆ ಸಂಜೀವಿನಿ ಶತಮಾನೋತ್ಸವ ಪ್ರಶಸ್ತಿ

| Published : Aug 19 2025, 01:00 AM IST

ಸುಲೋಚನಾಗೆ ಸಂಜೀವಿನಿ ಪ್ರಶಸ್ತಿ, ದಾಸಪ್ಪ ರೈ, ಉಮಾವತಿಗೆ ಸಂಜೀವಿನಿ ಶತಮಾನೋತ್ಸವ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕರಾವಳಿ ಲೇಖಕಿಯರ- ವಾಚಕಿಯರ ಸಂಘವು ಸಂಜೀವಿ ನಾರಾಯಣ ಅಡ್ಯಂತಾಯರ ಸ್ಮರಣಾರ್ಥ ಕೊಡಮಾಡುವ 2025ನೇ ಸಾಲಿನ ‘ಸಂಜೀವಿನಿ ಪ್ರಶಸ್ತಿ’ಗೆ ಕಾಸರಗೋಡು ಸೀತಾಂಗೋಳಿ ನಿವಾಸಿ ಸುಲೋಚನಾ ಬೆದ್ರಡಿ ಅವರನ್ನು ಆಯ್ಕೆ ಮಾಡಲಾಗಿದೆ.

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕರಾವಳಿ ಲೇಖಕಿಯರ- ವಾಚಕಿಯರ ಸಂಘವು ಸಂಜೀವಿ ನಾರಾಯಣ ಅಡ್ಯಂತಾಯರ ಸ್ಮರಣಾರ್ಥ ಕೊಡಮಾಡುವ 2025ನೇ ಸಾಲಿನ ‘ಸಂಜೀವಿನಿ ಪ್ರಶಸ್ತಿ’ಗೆ ಕಾಸರಗೋಡು ಸೀತಾಂಗೋಳಿ ನಿವಾಸಿ ಸುಲೋಚನಾ ಬೆದ್ರಡಿ ಅವರನ್ನು ಆಯ್ಕೆ ಮಾಡಲಾಗಿದೆ.

ಕುಟುಂಬಕ್ಕೆ ಸಂಜೀವಿನಿ ಆಗುವ ಅಮ್ಮಂದಿರನ್ನು ‘ಸಂಜೀವಿನಿ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗುತ್ತದೆ. “ಸಂಜೀವಿನಿ ಶತಮಾನೋತ್ಸವ”ದ ಪ್ರಯುಕ್ತ ಈ ವರ್ಷ ಎರಡು ವಿಶೇಷ ಪ್ರಶಸ್ತಿಗಳನ್ನು ಆಯೋಜಿಸಲಾಗಿದ್ದು, ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್. ದಾಸಪ್ಪ ರೈ ಪುತ್ತೂರು ಹಾಗೂ ಮತ್ತು ಬತ್ತ ಬೇಸಾಯದ ಸಾಧಕಿ ಉಮಾವತಿ ವೆಂಕಪ್ಪ ಪೂಜಾರಿ ಬೊಂಡಂತಿಲ ಅವರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ 10 ಸಾವಿರ ರು. ನಗದು, ಪ್ರಶಸ್ತಿ ಪತ್ರ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ 30ರಂದು ಮಧ್ಯಾಹ್ನ 2ರಿಂದ ಸಂಘದ ಕಚೇರಿ ಉರ್ವಾ ಸ್ಟೋರಿನ ಸಾಹಿತ್ಯ ಸದನದಲ್ಲಿ ನಡೆಯಲಿದೆ.

ವಿಶ್ರಾಂತ ಶಿಕ್ಷಕಿ ಕೆ.ಎ.ರೋಹಿಣಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಹಾವೇರಿ ವಿವಿ ವಿಶ್ರಾಂತ ಕುಲಪತಿ ಡಾ.ಕೆ. ಚಿನ್ನಪ್ಪ ಗೌಡ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಆಕಾಶವಾಣಿ ಕಲುಬುರಗಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ.ಸದಾನಂದ ಪೆರ್ಲ ಸಂಸ್ಮರಣೆ ಮಾಡಲಿದ್ದಾರೆ. ಕ.ಲೇ.ವಾ. ಸಂಘದ ಅಧ್ಯಕ್ಷೆ ಶಕುಂತಲಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಚೆನ್ನೈ ಉದ್ಯಮಿ ಶಶಿಕಲಾ ಆರ್. ಶೆಟ್ಟಿ ಹಾಜರಿರುತ್ತಾರೆ. ಜರ್ನಿ ಥೇಟರ್ ಗ್ರೂಪ್ ಮಂಗಳೂರು ಇವರಿಂದ ರಂಗ ಸಂಗೀತ ಹಾಗೂ ಜನಪದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.