ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರುಅಡಕೆಗೆ ಹಳದಿ ರೋಗ ಬಂದ ಕಾರಣದಿಂದಾಗಿ ಕೃಷಿಯಲ್ಲಿ ಆಗಿರುವ ನಷ್ಟಕ್ಕೆ ಮನನೊಂದು ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಬಡ್ಡಡ್ಕ ಎಂಬಲ್ಲಿನ ನಿವಾಸಿ, ರೈತ ಜಗದೀಶ ಚಳ್ಳಂಗಾರು ಎಂಬವರು ಆತ್ಮಹತ್ಯೆಗೆ ಶರಣಾಗಿದ್ದು, ಈ ಬಲಿಗೆ ಸರ್ಕಾರ, ಕೃಷಿ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ನೇರ ಹೊಣೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫರ್ನಾಂಡಿಸ್ ಆರೋಪಿಸಿದ್ದಾರೆ.
ಅವರು ಶುಕ್ರವಾರ ಪುತ್ತೂರು ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಷ್ಟೋ ವರ್ಷದ ಮೊದಲೇ ಕಾಣಿಸಿಕೊಂಡ ಅಡಕೆ ಹಳದಿ ರೋಗವನ್ನು ನಿಯಂತ್ರಿಸುವಲ್ಲಿ ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸುವುದರಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಸರ್ಕಾರ ಈ ಆತ್ಮಹತ್ಯೆಯ ಜವಾಬ್ದಾರಿ ಹೊತ್ತು ಮೃತರ ಕುಟುಂಬಕ್ಕೆ ಕೋಮು ಘರ್ಷಣೆಗಳಲ್ಲಿ ಮೃತಪಟ್ಟ ಕುಟುಂಬಗಳಿಗೆ ನೀಡಿದ ಪರಿಹಾರ ಮಾದರಿಯಲ್ಲಿ 25 ಲಕ್ಷ ರೂಪಾಯಿ ನೀಡಬೇಕಾಗಿ ರೈತ ಸಂಘ ಒತ್ತಾಯಿಸುತ್ತದೆ. ಅಡಕೆ ಹಳದಿ ರೋಗ ಬಂದ ರೈತರಿಗೆ ಪರ್ಯಾಯ ಬೆಳೆ ಬೆಳೆಸಲು ಎಕ್ರೆಗೆ ರುಪಾಯಿ ಇಪ್ಪತ್ತೈದು ಸಾವಿರವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.ರಾಜ್ಯ ಸಮಿತಿ ಕಾಯಂ ಆಹ್ವಾನಿತ ಸದಸ್ಯ ಸನ್ನಿ ಡಿಸೋಜ ಮಾತನಾಡಿ, ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ್ ಅವರು ಬರ ಪರಿಹಾರದ ವಿಚಾರದಲ್ಲಿ ರೈತಕುಲವನ್ನು ಅವಮಾನ ಮಾಡಿರುವ ಹೇಳಿಕೆಯನ್ನು ನೀಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ಇಂತಹ ಮನಸ್ಥಿತಿವುಳ್ಳ ಸಚಿವರನ್ನು ರೈತರಿಗೆ ಸಂಬಂಧಪಟ್ಟ ಸಕ್ಕರೆ ಇಲಾಖೆಯಿಂದ ವಜಾ ಮಾಡಿ, ರೈತರ ಬಗ್ಗೆ ಕಾಳಜಿ ಹಾಗೂ ಒಳ್ಳೆಯ ಮನಸ್ಥಿತಿ ಇರುವ ಮಂತ್ರಿಗೆ ಒಪ್ಪಿಸಬೇಕು. ಕೃಷಿ ಸಾಲಬಾಧೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಬಂಟ್ವಾಳದ ಇಡ್ಕಿದು ಗ್ರಾಮದ ವೀರಪ್ಪ ಗೌಡ ಅವರ ಕುಟುಂಬಕ್ಕೆ ಐದು ಲಕ್ಷ ರು. ಪರಿಹಾರ ಕೊಡದೆ ಅನ್ಯಾಯ ಎಸಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆಲ್ವಿನ್ ಮಿನೇಜಸ್, ಸುಳ್ಯ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ಪ್ರಧಾನ ಕಾರ್ಯದರ್ಶಿ ಭರತ್ ಉಪಸ್ಥಿತರಿದ್ದರು.