ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲುವು ಖಚಿತ : ಸುಮಲತಾ ಅಂಬರೀಷ್

| Published : Apr 29 2024, 01:38 AM IST / Updated: Apr 29 2024, 01:25 PM IST

sumalatha ambareesh

ಸಾರಾಂಶ

ದಾವಣಗೆರೆ ಜಿಲ್ಲೆಯೊಂದಿಗೆ ತಮ್ಮ ಕುಟುಂಬಕ್ಕೆ ಪ್ರೀತಿಯ ಒಡನಾಟವಿದ್ದು, ಅಂಬರೀಷ್‌ ಅವರಿಗೆ ಅತ್ಯಂತ ಪ್ರೀತಿಯ ಉಪಹಾರವೆಂದರೆ ಇಲ್ಲಿನ ಬೆಣ್ಣೆದೋಸೆಯಾಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ ತಿಳಿಸಿದರು.

  ದಾವಣಗೆರೆ :  ದಾವಣಗೆರೆ ಜಿಲ್ಲೆಯೊಂದಿಗೆ ತಮ್ಮ ಕುಟುಂಬಕ್ಕೆ ಪ್ರೀತಿಯ ಒಡನಾಟವಿದ್ದು, ಅಂಬರೀಷ್‌ ಅವರಿಗೆ ಅತ್ಯಂತ ಪ್ರೀತಿಯ ಉಪಹಾರವೆಂದರೆ ಇಲ್ಲಿನ ಬೆಣ್ಣೆದೋಸೆಯಾಗಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ ತಿಳಿಸಿದರು. 

ನಗರದಲ್ಲಿ ಭಾನುವಾರ ವಿಕಿಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಸಂಸದಳಾದಾಗ ಸಂಸದ ಜಿ.ಎಂ.ಸಿದ್ದೇಶ್ವರ್ ಮೊದಲು ಆಶೀರ್ವಾದ ಮಾಡಿದ್ದರು. ಚುನಾವಣೆ ದಿನ ಗಾಯತ್ರಿ ಸಿದ್ದೇಶ್ವರ ಸೇರಿದಂತೆ ಇಡೀ ಕುಟುಂಬ ತಮ್ಮ ಫಲಿತಾಂಶಕ್ಕಿಂತ ನನ್ನ ಫಲಿತಾಂಶದ ಬಗ್ಗೆ ಹೆಚ್ಚು ಕುತೂಹಲ ಹೊಂದಿದ್ದರು ಎಂದರು. 

ನರೇಂದ್ರ ಮೋದಿಯವರನ್ನು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸಿದೆ. 

ನಾವೆಲ್ಲರೂ ಮೋದಿ ನಾಯಕತ್ವಕ್ಕೆ ಮತ ನೀಡಬೇಕು. ಒಂದು ಸದೃಢ ಭಾರತ ಕಟ್ಟುವ ಉದ್ದೇಶದ ಮೋದಿಯವರಿಗೆ ಮತ್ತಷ್ಟು ಶಕ್ತಿ ತುಂಬಬೇಕು. ದಲಿತರು, ರೈತರು, ಯುವಕರು, ಮಹಿಳೆಯರು ಹೀಗೆ ಎಲ್ಲಾ ವರ್ಗ, ಜನರ ಪರವಾಗಿರುವ ಸರ್ಕಾರವೆಂದರೆ ಅದು ಮೋದಿ ಸರ್ಕಾರ. ಇಡೀ ದೇಶದ ಜನರ ಮುಂದಿರುವ ಒಂದೇ ಅಯ್ಕೆ ಅದು ಬಿಜೆಪಿ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ, ದೇಶ ಮತ್ತು ಜನರ ಭವಿಷ್ಯ ಸುಭದ್ರವಾಗಿರುತ್ತದೆ ಎಂದು ಹೇಳಿದರು.

 ಹಿಂದೆ ಆಳಿದವರೆಲ್ಲರೂ ಮಾತನಾಡಿ ಹೋದರು. ಆದರೆ, ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಿದರು. ಶ್ರೀರಾಮ 14 ವರ್ಷ ವನವಾಸಕ್ಕೆ ಹೋಗಿದ್ದರು. ಆದರೆ, ನಮ್ಮದೇ ದೇಶ, ನಮ್ಮದೇ ನೆಲದಲ್ಲಿ ಶ್ರೀರಾಮಚಂದ್ರನಿಗೆ ನಾವು 500 ವರ್ಷಗಳ ವನವಾಸಕ್ಕೆ ಕಳಿಸಿದ್ದೆವು. ಅಂತಹ ರಾಮನನ್ನು ಮೋದಿ ಮತ್ತೆ ಕರೆ ತಂದಿದ್ದಾರೆ. ರೈಲ್ವೆ ಇಲಾಖೆ, ಕ್ರೀಡಾ ಕ್ಷೇತ್ರ, ತಂತ್ರಜ್ಞಾನ, ವಸತಿ ಹೀಗೆ ಪ್ರತಿ ಕ್ಷೇತ್ರದಲ್ಲಿ ಬದಲಾವಣೆಯನ್ನು ನರೇಂದ್ರ ಮೋದಿ ತಂದಿದ್ದಾರೆ ಎಂದು ತಿಳಿಸಿದರು. 

ಮಂಡ್ಯದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲುತ್ತಾರೆ: ಮಂಡ್ಯದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲುತ್ತಾರೆ. ನಮ್ಮ ಬೆಂಬಲಿಗರೂ ಸಹ ಎನ್‌ಡಿಎ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಷ ತಿಳಿಸಿದರು. ನಗರದ ಜಿಎಂಐಟಿ ಹೆಲಿಪ್ಯಾಡ್‌ನಲ್ಲಿ ಸಮಾವೇಶಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ಪ್ರಚಾರಕ್ಕೆ ದಿನವನ್ನು ನಿಗದಿ ಮಾಡಿ, ನನಗೆ ಆಹ್ವಾನಿಸಲಿಲ್ಲ. ಮಾಹಿತಿ ಕೊರತೆ ಇತ್ತು . ಹಾಗಾಗಿ ಪ್ರಚಾರಕ್ಕೆ ಹೋಗಲಿಲ್ಲ ಎಂದರು. 

ಸದ್ಯ ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕು. ನನ್ನ ರಾಜಕೀಯ ನಡೆಯ ಬಗ್ಗೆ ಈಗಲೇ ಏನೂ ಹೇಳುವುದಕ್ಕೆ ಆಗುವುದಿಲ್ಲ. ನೋಡೋಣ ಇನ್ನೂ ಕಾಲ ಇದೆ. ಸದ್ಯ ಜನರ ಮನಸ್ಸಿನಲ್ಲಿ ಒಳ್ಳೆಯ ಸ್ಥಾನಮಾನ ಇದೆ. ರಾಜ್ಯ ರಾಜಕಾರಣ ಅಥವಾ ರಾಜಕೀಯ ಸ್ಥಾನಮಾನದ ಬಗ್ಗೆ ಇನ್ನೂ ಯಾವುದೇ ನಿರ್ಧಾರವೂ ಆಗಿಲ್ಲ ಎಂದು ಅವರು ಹೇಳಿದರು. ನಂತರ ಸಂಸದ‌ ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಬಿ.ಸಿ‌.ಪಾಟೀಲ್ ಸೇರಿದಂತೆ ಪ್ರಮುಖರ ಜೊತೆ ಸುಮಲತಾ ಅಂಬರೀಷ ಮಾತುಕತೆ ನಡೆಸಿದರು.