ಸಾರಾಂಶ
ಮೂಲ್ಕಿ: ಪಕ್ಷಿಕೆರೆ ಸಮೀಪದ ಕೆಮ್ರಾಲ್ ಗ್ರಾಮದ ಪಲ್ಲೆಕುದ್ರು ನಿವಾಸಿ 80ರ ಹರೆಯ ಸುಮತಿ ಶೆಟ್ಟಿ ಕಳೆದ ಹಲವು ವರ್ಷಗಳಿಂದ ಹಳೆಯ ತ್ಯಾಜ್ಯ ವಸ್ತುಗಳನ್ನು ಉಪಯೋಗಿಸಿ ಅನೇಕ ರೀತಿಯಲ್ಲಿ ತಮ್ಮದೇ ಕಲ್ಪನೆಯಲ್ಲಿ ಜೀವ ಕಳೆ ನೀಡುತ್ತಿದ್ದಾರೆ.
ಮಿನರಲ್ ವಾಟರ್ ಬಾಟಲ್ ಗಳನ್ನು ತುಂಡರಿಸಿ ಹೂವಾಗಿ ಪರಿವರ್ತಿಸಿದರೆ, ಹಾಳಾದ ಸಿಪ್ಪೆಯಿಂದ ತೆಂಗಿನ ಕಾಯಿಯಗಳಿಗೆ ಸಿಲ್ವರ್ ಗೋಲ್ಡ್ ಬಣ್ಣ ಬಳಿದು, ಒಂದಕ್ಕೊಂದು ಪೋಣಿಸಿ ಅಕರ್ಷಕವಾಗಿ ಕಾಣುವಂತೆ ಮಾಡಿದ್ದಾರೆ, ತೆಂಗಿನ ಕಾಯಿ ತುರಿದ ನಂತರ ಉಳಿಯುವ ಸಿಪ್ಪೆಯನ್ನು ಗಮ್ ಬಳಸಿ ಅಂಟಿಸಿ ಬಣ್ಣ ಬಳಿದು ಹೊಸ ರೂಪ ನೀಡಿದ್ದಾರೆ. ಹಳೆಯ ಟಯರ್, ಮಣ್ಣಿನ ಮಡಕೆಗಳಿಗೆ ಬಣ್ಣ ಬಳಿದು ಮನೆಯ ಮುಂಭಾಗ ಇರಿಸಿದ್ದು, ಒಂದು ಜಾತಿಯ ಹುಲ್ಲನ್ನು ತಂದು ಅದನ್ನು ಒಣಗಿಸಿ ಬೇರೆ ಬೇರೆ ಆಕೃತಿಯ ಬುಟ್ಟಿಗಳನ್ನು ಎಣೆದು ಇಟ್ಟಿದ್ದಾರೆ, ಹಳೆಯ ಮನೆಯ ಹೆಂಚು ಸಂಗ್ರಹಿಸಿ ಅದಕ್ಕೆ ಬೇರೆ ಬೇರೆ ರೀತಿಯ ಬಣ್ಣ ಬಳಿದು ಮನೆಯ ಸುತ್ತ ಅಳವಡಿಸಿದ್ದು ಇನ್ನೂ ಅನೇಕ ವಸ್ತುಗಳು ಸುಮತಿ ಶೆಟ್ಟಿ ಕೈಯಿಂದ ಹೊಸ ರೂಪ ಪಡೆದಿದೆ.
ಕೇವಲ 5 ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವ ಸುಮತಿ ಶೆಟ್ಟಿ ಮದುವೆಯ ಬಳಿಕ ಕೆಲವು ವರ್ಷ ಮುಂಬೈಯಲ್ಲಿ ನೆಲೆಸಿದ್ದು ಊರಿಗೆ ವಾಪಸಾದ ಬಳಿಗೆ ಈ ಕಲಾಕೃತಿಗಳನ್ನು ರಚಿಸಲು ಪ್ರಾರಂಭಿಸಿದ್ದಾರೆ. ತಮ್ಮ ಇಬ್ಬರು ಮಕ್ಕಳು ಹೊರ ರಾಜ್ಯದಲ್ಲಿ ನೆಲೆಸಿದ್ದು ತಾಯಿ ಸಾಧನೆಗೆ ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು ಸಹಕಾರ ನೀಡುತ್ತಿದ್ದಾರೆ.
ಇವರ ಈ ಕಲಾಕೃತಿಗಳನ್ನು ನೋಡಲೆಂದೇ ಹಲವಾರು ಮಂದಿ ಇವರ ಮನೆಗೆ ಬೇಟಿ ನೀಡುತ್ತಿದ್ದಾರೆ, ಇವರ ಈ ಸಾಧನೆಯನ್ನು ಕಂಡು ಹಲವಾರು ಸಂಘ ಸಂಸ್ಥೆಗಳು ಸನ್ಮಾನಗಳನ್ನು ಮಾಡಿದ್ದಾರೆ. ಇಳಿ ವಯಸ್ಸಿನಲ್ಲೂ ಉತ್ಸಾಹದಿಂದ ಹವ್ಯಾಸವನ್ನು ಪೋಷಿಸುತ್ತಾ ಬಂದಿದ್ದಾರೆ.
ನಿರುಪಯುಕ್ತ ವಸ್ತುಗಳಿಗೆ ಕಳೆದ ಹಲವು ವರ್ಷಗಳಿಂದ ಜೀವ ನೀಡಿ ಮನೆಯ ಮುಂಭಾಗ ಇರಿಸಿದ್ದೇನೆ, ಬಿಯರ್ ಮತ್ತು ಮಿನರಲ್ ವಾಟರ್ ಬಾಟಲ್ಗಳನ್ನು ಬಳಸಿ ಬೇರೆ ಬೇರೆ ರೂಪ ನೀಡಿದ್ದೇನೆ, ಹಳೆಯ ಯಾವುದೇ ವಸ್ತುಗಳಿಗೆ ನನ್ನದೇ ಕಲ್ಪನೆಯಲ್ಲಿ ರೂಪ ನೀಡುತ್ತಿದ್ದೇನೆ. ಇದರಿಂದ ನಾನು ತೃಪ್ತಿ ಪಡೆಯುತ್ತಿದ್ದೇನೆ.
-ಸುಮತಿ ಶೆಟ್ಟಿ.