ಸಾರಾಂಶ
ತಾಲೂಕಿನ ತಾಳೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿದ್ಯಾನಗರದ ಜೀವನ್ ಸಂಗೀತ್ ಸೇವಾ ಸಂಸ್ಥೆ, ತಾಳೂರಿನ ಹೊಂಗಿರಣ ಜ್ಞಾನ ಕೇಂದ್ರ ಹಾಗೂ ಸರ್ಕಾರಿ ಪ್ರೌಢಶಾಲೆಯ ಸಹಯೋಗದಲ್ಲಿ ಎರಡು ತಿಂಗಳ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಕನ್ನಡಪ್ರಭ ವಾರ್ತೆ ಸಂಡೂರು
ತಾಲೂಕಿನ ತಾಳೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿದ್ಯಾನಗರದ ಜೀವನ್ ಸಂಗೀತ್ ಸೇವಾ ಸಂಸ್ಥೆ, ತಾಳೂರಿನ ಹೊಂಗಿರಣ ಜ್ಞಾನ ಕೇಂದ್ರ ಹಾಗೂ ಸರ್ಕಾರಿ ಪ್ರೌಢಶಾಲೆಯ ಸಹಯೋಗದಲ್ಲಿ ಎರಡು ತಿಂಗಳ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.ಶಿಬಿರದಲ್ಲಿ ಅನುಭವಿ ಶಿಕ್ಷಕರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಆರು ವಿಷಯಗಳ ಬೋಧನೆ, ಪಠ್ಯದ ಜೊತೆಗೆ ವಿದ್ಯಾರ್ಥಿಗಳಿಗೆ ಡ್ರಾಯಿಂಗ್, ಮೆಹಂದಿ, ಸೌಂದರ್ಯ ಪ್ರಜ್ಞೆ, ಅಬಾಕಸ್, ಕಂಪ್ಯೂಟರ್ ಕಲಿಕೆ, ಪೇಪರ್ ಕ್ರಾಫ್ಟ್, ಕ್ರೀಡೆ, ವ್ಯಕ್ತಿತ್ವ ವಿಕಸನ ಹಾಗೂ ಒಂದು ದಿನ ಹೊರ ಸಂಚಾರ ಆಯೋಜಿಸಲಾಗಿದೆ.
ಸಂಜೀವಿನಿ ಆಸ್ಪತ್ರೆಯ ಮೆಡಿಕಲ್ ಹೆಡ್ ಸನ್ನಿ ಎಪಾನ್ ಗುರುವಾರ ಶಿಬಿರ ಉದ್ಘಾಟಿಸಿ, ತಾವೂ ಸರ್ಕಾರಿ ಶಾಲೆಯಲ್ಲಿ ಓದಿದ್ದನ್ನು ಸ್ಮರಿಸಿದರಲ್ಲದೆ, ವಿದ್ಯಾರ್ಥಿಗಳು ಉತ್ತಮ ಸಾಧನೆಯ ಕನಸು ಕಾಣಬೇಕು ಮತ್ತು ಕನಸನ್ನು ನನಸು ಮಾಡಿಕೊಳ್ಳಲು ಶ್ರಮಿಸಬೇಕು. ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಸಂಜೀವಿನಿ ಆಸ್ಪತ್ರೆಯ ಫೆಸಿಲಿಟಿ ಹೆಡ್ ಮಂಜುನಾಥ್, ಮುಖಂಡರಾದ ಸುವರ್ಣ ರಾಜಶೇಖರ್ ಪಟ್ಟಣಶೆಟ್ಟಿ, ಜೀವನ್ ಸಂಗೀತ್ ಸೇವಾ ಸಂಸ್ಥೆಯ ಅಧ್ಯಕ್ಷೆ ಗೀತಾ ವೀರೇಶ್ ಹಾಗೂ ಮುಖ್ಯ ಶಿಕ್ಷಕ ಬಸವರಾಜ್ ಮಾತನಾಡಿ, ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ರಾಘವೇಂದ್ರ ಹಾಗೂ ನಿರ್ಮಲ ಹಕ್ಕಿಪಕ್ಕಿ ಕಾರ್ಯಕ್ರಮ ನಿರೂಪಿಸಿದರು. ಆಕಾಂಕ್ಷ ಲೇಡಿಸ್ ಕ್ಲಬ್ನ ಸದಸ್ಯರಾದ ಸೀತಾ ಪಲ್ಲುಡು, ಜೀವನ್ ಸಂಗೀತ್ ಸೇವಾ ಸಂಸ್ಥೆಯ ಕಾರ್ಯದರ್ಶಿ ಸತೀಶ್ ಸೇಟ್, ಸದಸ್ಯರಾದ ಮಧುಮುರಳಿ, ನಿರ್ಮಲ ನಾಗೇಂದ್ರ, ಹೊಂಗಿರಣ ಜ್ಞಾನ ಕೇಂದ್ರದ ವೀರೇಂದ್ರಗೌಡ, ಸುದೀಪ್, ತಾಳೂರು ಗ್ರಾಪಂ ಜನಪ್ರತಿನಿಧಿಗಳು, ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.