ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಭಾರತ ಸರ್ಕಾರ ಮುಂಚೂಣಿಯಲ್ಲಿ ನಿಂತು ಬಿಗ್ ಕ್ಯಾಟ್ ಅಲಯನ್ಸ್ ನಡೆಸುತ್ತಿದ್ದು, ಪ್ರಪಂಚದ ಏಳು ದೊಡ್ಡ ಜಾತಿಗಳ ಬೆಕ್ಕುಗಳ ಸಂರಕ್ಷಣೆಯೇ ಶೃಂಗಸಭೆ ಪ್ರಮುಖ ಗುರಿ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಐಜಿಪಿ ಎಸ್.ಪಿ. ಯಾದವ್ ಹೇಳಿದ್ದಾರೆ.ಬಂಡೀಪುರ ಬಳಿಯ ಮೇಲುಕಾಮನಹಳ್ಳಿ ಬಳಿಯ ಅರಣ್ಯ ಕಚೇರಿಯಲ್ಲಿ ಬಂಡೀಪುರ ಅರಣ್ಯ ಇಲಾಖೆ ಆಯೋಜಿಸಿದ್ದ ಕಾರ್ಯಾಗಾರ ಹಾಗೂ ಶೃಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿ, 95 ದೇಶಗಳಲ್ಲಿ ದೊಡ್ಡ ಬೆಕ್ಕು ಪ್ರಾಣಿಗಳಿವೆ.
ಪ್ರಪಂಚದಲ್ಲಿ ಏಳು ಬಗೆಯ ದೊಡ್ಡ ಬೆಕ್ಕು ಜಾತಿಯ ಪ್ರಾಣಿಗಳಿವೆ. ಭಾರತದಲ್ಲಿ ಈ ಜಾತಿಯ ದೊಡ್ಡ ಬೆಕ್ಕು ಜಾತಿಯ ಪ್ರಾಣಿಗಳಿವೆ. ಬೇರೆ ಬೇರೆ ದೇಶಗಳಲ್ಲಿ ಬಿಗ್ ಕ್ಯಾಟ್ ಸಂರಕ್ಷಣೆ ಹೇಗೆ ನಡೆಯುತ್ತಿದೆ, ಟೆಕ್ನಾಲಜಿ ಹೇಗೆ ಬಳಕೆಯಾಗುತ್ತಿದೆ ಎಂಬ ಜ್ಞಾನವು ಈ ಕಾರ್ಯಾಗಾರದಲ್ಲಿ ತಿಳಿಯಲಿದೆ ಎಂದರು.ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ನಡೆಯುವ ಶೃಂಗ ಸಭೆ ಹಾಗೂ ಕಾರ್ಯಾಗಾರದಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ಎಷ್ಟು ಮಹತ್ವ ಭಾರತ ಸರ್ಕಾರ ಕೊಟ್ಟಿದೆ ಎಂಬ ವಿಚಾರವೂ ಬಹಿರಂಗವಾಗಲಿದೆ ಎಂದರು.
ಇಂದಿನ ಶೃಂಗಸಭೆ ಹಾಗೂ ಕಾರ್ಯಾಗಾರದಲ್ಲಿ 23 ವಿವಿಧ ದೇಶಗಳಿಂದ 39 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಶೃಂಗಸಭೆ ಹಾಗೂ ಕಾರ್ಯಾಗಾರ ನಡೆಯಲಿದೆ ಎಂದರು.
ಭಾರತದಲ್ಲಿ ಅತೀ ಹೆಚ್ಚು ಹುಲಿ ಹಾಗೂ ಚಿರತೆಗಳಿವೆ ಅಲ್ಲದೆ ಸಂರಕ್ಷಣೆ ಕೂಡ ಆಗುತ್ತಿದೆ. ಅಲ್ಲದೆ ಗುಜರಾತ್ ನಲ್ಲೂ ಕೂಡ ಸಿಂಹದ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಹುಲಿ,ಚಿರತೆ,ಆನೆ ಸೇರಿದಂತೆ ಇತರೆ ವನ್ಯಜೀವಿಗಳ ಸಂರಕ್ಷಣೆಯಿಂದ ಹೆಚ್ಚಳವಾಗಿವೆ ಎಂದರು.
ಶೃಂಗಸಭೆ ಹಾಗೂ ಕಾರ್ಯಾಗಾರದಲ್ಲಿ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಮಾತನಾಡಿದರು. ಕಾರ್ಯಾಗಾರದಲ್ಲಿ ನಿವೃತ್ತ ಪಿಸಿಸಿಎಫ್ ಸುಭಾಷ್ ಮಾಲ್ಕಡೆ, ಹಿರಿಯ ಅರಣ್ಯಾಧಿಕಾರಿಗಳಾದ, ಡಾ.ರಮೇಶ ಕುಮಾರ್, ಮಾಲತಿ ಪ್ರಿಯ ಸೇರಿದಂತೆ ರಾಜ್ಯದ ಅರಣ್ಯ ಅಧಿಕಾರಿಗಳಿದ್ದರು.ಶೃಂಗಸಭೆಯಲ್ಲಿ ವಿಚಾರ ವಿನಿಮಯ:ಬಂಡೀಪುರ ಬಳಿಯ ಮೇಲುಕಾಮನಹಳ್ಳಿ ಬಳಿ ಕ್ಯಾಂಪಸ್ನಲ್ಲಿ ನಡೆದ ಶೃಂಗಸಭೆ ಹಾಗೂ ಕಾರ್ಯಾಗಾರದಲ್ಲಿ ಪ್ರಪಂಚದ 23 ವಿವಿಧ ದೇಶಗಳ ಪ್ರತಿನಿಧಿಗಳು, ಅರಣ್ಯಾಧಿಕಾರಿಗಳು ಹಾಗೂ ವನ್ಯಜೀವಿ ತಜ್ಞರು ಭಾಗಿದ್ದು, ಹುಲಿ, ಚಿರತೆ ಸಿಂಹ ಸೇರಿದಂತೆ ಏಳು ದೊಡ್ಡ ಬೆಕ್ಕು ಜಾತಿಯ ಪ್ರಾಣಿಗಳ ಸಂರಕ್ಷಣೆ ಕುರಿತು ಚರ್ಚೆ, ಮಾಹಿತಿ ವಿನಿಮಯವಾಯಿತು.
ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಕೈಗೊಂಡಿರುವ ಸಂರಕ್ಷಣಾ ವಿಧಾನ,ಸಮುದಾಯಗಳ ಒಳಗೊಳ್ಳುವಿಕೆ, ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಣ ಕುರಿತು ಸುಧೀರ್ಘವಾಗಿ ಚರ್ಚೆ ನಡೆಯಿತು.ಆಧುನಿಕ ತಂತ್ರಜ್ಞಾನ ಬಳಕೆ,ಅಂತರಾಷ್ಟ್ರೀಯ ಸಹಕಾರ ಹಾಗು ಗಿರಿಜನರ ಪುನರ್ವಸತಿ ಕುರಿತು ತಜ್ಞರಿಂದ ವಿಷಯದ ಮಂಡನೆಯಲ್ಲಿ ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ಯಾವ ರೀತಿಯಲ್ಲಿ ಹುಲಿ ಸೇರಿದಂತೆ ಇತರೆ ಪ್ರಾಣಿಗಳ ಸಂರಕ್ಷಣೆ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಕಾರ್ಯಾಗಾರ ನಡೆಯಿತು.