ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಬೇಸಿಗೆ ಬಿಸಿಲಿನ ತಾಪಮಾನ ಅಧಿಕವಾಗುತ್ತಿರುವುದರಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಬೀರುತ್ತಿದೆ. ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ್ ಹೇಳಿದರು.

ತಾಲೂಕಿನ ಬಲ್ಲೆನಹಳ್ಳಿ ಡೈರಿ ಬಳಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಸಾರ್ವಜನಿಕರಿಗೆ ಬಿಸಿಲಿನ ತಾಪದಿಂದ ರಕ್ಷಣೆ ಪಡೆಯುವ ಕುರಿತು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧಿಕ ತಾಪಮಾನ ಹಾಗೂ ತಾಪಾಘಾತದಂತಹ ಪರಿಸ್ಥಿತಿಯು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಎಲ್ಲರೂ ಅನಗತ್ಯವಾಗಿ ಬೆಳಗ್ಗೆ 11 ರಿಂದ ಸಂಜೆ 4ರ ವರೆಗೆ ಬಿಸಿಲಿನಲ್ಲಿ ಹೊರ ಹೋಗುವುದನ್ನು ತಪ್ಪಿಸಬೇಕು ಎಂದರು.

ರೈತರು ಅನಿವಾರ್ಯವಾಗಿ ಗದ್ದೆ ಕೆಲಸ ಮಾಡಬೇಕಾದ ಸಂದರ್ಭದಲ್ಲಿ ಗಂಟೆಗೊಮ್ಮೆ ನೆರಳಿನಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ನಂತರ ಕೆಲಸ ಮುಂದುವರೆಸಬೇಕು. ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯಬೇಕು. ಹಗುರವಾದ ತಿಳಿ ಬಣ್ಣದ ಸಡಿಲ ಬಟ್ಟೆ ಧರಿಸಬೇಕು, ಬಿಸಿಲಿನಲ್ಲಿ ಹೊರ ಹೋಗುವಾಗ ರಕ್ಷಣೆಗೆ ತಂಪು ಕನ್ನಡಕ, ಛತ್ರಿ, ಟೋಪಿ ಅಥವಾ ಟವಲ್ ಹಾಗೂ ಪಾದರಕ್ಷೆ ಧರಿಸಬೇಕು ಎಂದು ತಿಳಿಸಿದರು.

ಪ್ರಯಾಣಿಸುವಾಗ ನೀರಿನ ಬಾಟಲಿ ಜೊತೆಯಲ್ಲಿ ಒಯ್ಯಬೇಕು ಸಾಧ್ಯವಾದಷ್ಟು ಬಿಸಿ ಆಹಾರ ಸೇವಿಸಿ ತಾಜಾ ಹಣ್ಣಿನ ರಸ, ಕಲ್ಲಂಗಡಿ, ಸೌತೆಕಾಯಿ, ನಿಂಬೆ ಹಣ್ಣಿನ ಪಾನಕ, ಮಜ್ಜಿಗೆ ಸೇರಿದಂತೆ ಆದಷ್ಟು ಮನೆಯಲ್ಲೇ ತಯಾರಿಸಿದ ಪಾನೀಯಗಳನ್ನು ಮತ್ತು ಓ ಆರ್ ಎಸ್ ಬಳಸಿ ಎಂದು ಹೇಳಿದರು.


ಈ ವೇಳೆ ಗ್ರಾಮದ ಮುಖಂಡರಾದ ಕಣ್ಣೇಗೌಡ, ಕುಮಾರ, ವಿಜಯೇಂದ್ರ, ಕಿಟ್ಟಣ್ಣ, ನಾಗಣ್ಣ, ಸ್ವಾಮಣ್ಣ, ರಮೇಶ್, ನಟೇಶ್, ಸ್ವಾಮಿಗೌಡ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪದ್ಮಾ, ಸಮುದಾಯ ಆರೋಗ್ಯ ಅಧಿಕಾರಿ ವಿಜಯ್, ಆರೋಗ್ಯ ನಿರೀಕ್ಷಣಾಧಿಕಾರಿ ಸುವರ್ಣ, ಆಶಾ ಕಾರ್ಯಕರ್ತೆ ಸುಗುಣಾ, ಲೀಲಾಮಣಿ, ರತ್ನಾ, ವಸಂತ, ಗಾಯತ್ರಿ ಸೇರಿದಂತೆ ಇತರರು ಇದ್ದರು.