ಸಾರಾಂಶ
ರಸ್ತೆ ಸುರಕ್ಷತೆ ಕುರಿತು ಸುಂಟಿಕೊಪ್ಪ ಆಟೋ ಚಾಲಕ ಮತ್ತು ವಾಹನ ಚಾಲಕರಿಗೆ ಮಾಹಿತಿ ಕಾರ್ಯಾಗಾರವನ್ನು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ನಡೆಸಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ರಸ್ತೆ ಸುರಕ್ಷತೆ ಕುರಿತು ಸುಂಟಿಕೊಪ್ಪ ಆಟೋ ಚಾಲಕ ಮತ್ತು ವಾಹನ ಚಾಲಕರಿಗೆ ಮಾಹಿತಿ ಕಾರ್ಯಾಗಾರವನ್ನು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ನಡೆಸಿದರು.ಬುಧವಾರ ಆಟೋ ಚಾಲಕರ ಸಭಾಂಗಣದಲ್ಲಿ ಪಟ್ಟಣದಲ್ಲಿ ಕಾರ್ಯಾಚರಿಸುತ್ತಿರುವ ಆಟೋ ಚಾಲಕರು ಮತ್ತು ವಾಹನ ಚಾಲಕರ ರಸ್ತೆ ಸುರಕ್ಷತೆಯ ದಿಸೆಯಲ್ಲಿ ವಾಹನಗಳಲ್ಲಿ ಮಿತಿಗಿಂತ ಅಧಿಕ ಜನರನ್ನು ಕರೆದೋಯ್ಯವ ಸಂದರ್ಭದಲ್ಲಿ ಅವಘಡಗಳು ಸಂಭವಿಸಿದರೆ ಅಕ್ಷಮ್ಯ ಅಪರಾಧವಾಗುತ್ತದೆ. ಅಲ್ಲದೆ ವಿಮೆ ಪಡೆದುಕೊಳ್ಳಲು ಕಷ್ಟವಾಗುತ್ತದೆ. ವಾಹನಗಳ ಚಲಾಯಿಸುವಾಗ ರಸ್ತೆಯ ನಿಯಮಗಳನ್ನು ಚಾಲಕರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಅತಿಯಾದ ವೇಗದ ಚಾಲನೆಗೆ ಕಡಿವಾಣ ಹಾಕಿದರೆ ಅಪಘಾತ ತಡೆಯಬಹುದು. ವಾಹನಗಳನ್ನು ಚಲಾಯಿಸುವ ಸಂದರ್ಭ ಪ್ರತಿಯೊಬ್ಬ ಚಾಲಕರು ಚಾಲಕರಿಗೆ ನೀಡಲಾಗಿರುವ ಪರವಾನಗಿ, ವಿಮೆ, ವಾಹನದ ದಾಖಲಾತಿಗಳನ್ನು ಕಡ್ಡಾಯವಾಗಿ ತಮ್ಮ ಬಳಿ ಇರಿಕೊಳ್ಳುವುದು, ಕಾಲಕ್ಕೆ ಅದನ್ನು ನವೀಕರಿಸಿಕೊಳ್ಳುವುದು ತಮ್ಮನ್ನು ರಕ್ಷಿಸಿಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ ಎಂದು ಮಾಹಿತಿ ನೀಡಿದರು.ಆಟೋ ಮತ್ತು ವಾಹನಗಳಲ್ಲಿ ಶಾಲಾ ಮಕ್ಕಳನ್ನು ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕರೆದೊಯ್ಯಬಾರದು. ಪ್ರಯಾಣಿಕರಿಂದ ದುಪ್ಪಟ್ಟು ಬಾಡಿಗೆ ವಸೂಲಿ ಮಾಡುವುದು, ಸಮವಸ್ತ್ರ ಧರಿಸದೆ ಮತ್ತು ವಾಹನ ನಿಲುಗಡೆ ನಿಷೇಧಿತ ಪ್ರದೇಶದಲ್ಲಿ ನಿಲ್ಲಿಸುವುದ್ದರಿಂದ ಕಾನೂನು ಉಲ್ಲಂಘನೆ ಅಡಿಯಲ್ಲಿ ಅಪರಾಧ ದಂಡವನ್ನು ಚಾಲಕರು ತೆರಬೇಕಾಗುತ್ತದೆ ಎಂದು ಚಾಲಕರಿಗೆ ಮನವರಿಕೆ ಮಾಡಿಕೊಟ್ಟರು.
ಎ.ಎಸ್.ಐ. ಸುರೇಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಸಿ.ಸಿ.ಸುನಿಲ್ಕುಮಾರ್, ಸಿಬ್ಬಂದಿ, ಆಟೋ ಮತ್ತು ವಾಹನ ಚಾಲಕರು ಇದ್ದರು.