ಯುವಶಕ್ತಿ ದಾರಿ ತಪ್ಪದಂತೆ ಹಿರಿಯರು ಮತ್ತು ಸಮಾಜ ಇಂತಹ ನಿಸ್ವಾರ್ಥ ಸಂಘಟನೆಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು ಜಾತಿ, ಧರ್ಮ ಹಾಗೂ ರಾಜಕೀಯ ರಹಿತವಾಗಿ ಯುವಕರನ್ನು ಒಗ್ಗೂಡಿಸಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸುವ ಉದ್ದೇಶದಿಂದ ನೂತನವಾಗಿ ‘ವೇವ್’ ಸಂಘಟನೆಯ ಅಧಿಕೃತ ಉದ್ಘಾಟನೆಯನ್ನು ಸುಂಟಿಕೊಪ್ಪದಲ್ಲಿ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸಿ. ದಿನೇಶ್ ಅವರು ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಯುವಶಕ್ತಿ ದಾರಿ ತಪ್ಪದಂತೆ ಹಿರಿಯರು ಮತ್ತು ಸಮಾಜ ಇಂತಹ ನಿಸ್ವಾರ್ಥ ಸಂಘಟನೆಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು ಜಾತಿ, ಧರ್ಮ ಹಾಗೂ ರಾಜಕೀಯ ರಹಿತವಾಗಿ ಯುವಕರನ್ನು ಒಗ್ಗೂಡಿಸಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸುವ ಉದ್ದೇಶದಿಂದ ನೂತನವಾಗಿ ‘ವೇವ್’ ಸಂಘಟನೆಯ ಅಧಿಕೃತ ಉದ್ಘಾಟನೆಯನ್ನು ಸುಂಟಿಕೊಪ್ಪದಲ್ಲಿ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸಿ. ದಿನೇಶ್ ಅವರು ನೆರವೇರಿಸಿದರು.ವೇವ್ ಸಂಘಟನೆಗೆ ಚಾಲನೆ ನೀಡಿ ಮಾತನಾಡಿದ ಬಿ.ಸಿ. ದಿನೇಶ್, ‘ಸುಂಟಿಕೊಪ್ಪದ ನೆಲದಲ್ಲಿ ಇಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಕೊರೊನಾ ಮಹಾಮಾರಿ ಹಾಗೂ ಪ್ರಕೃತಿ ವಿಕೋಪದ ಭೂಕುಸಿತದ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು 300-400 ಕುಟುಂಬಗಳಿಗೆ ನೆರವಾದ ಈ ಕರುಣಾಮಯಿ ಯುವಕರ ತಂಡವಿಂದು ‘ವೇವ್’ ಎಂಬ ಅಧಿಕೃತ ರೂಪ ಪಡೆದುಕೊಂಡಿದೆ. ಕಡಲಿನ ಅಲೆಯಂತೆ ಈ ಬಳಗದ ನಿಸ್ವಾರ್ಥ ಸೇವೆಯು ನಿರಂತರವಾಗಿರಲಿ’ ಎಂದು ತಿಳಿಸಿದರು.
ಸಂಘಟನೆಯ ಸಂಚಾಲಕರಾಗಿ ಕೆ.ಎ. ಲತೀಫ್ ಹಾಗೂ ವಕೀಲ ಫರಾಝ್ ಉಸ್ಮಾನ್ ಅವರನ್ನು ನೇಮಕಗೊಳಿಸಲಾಯಿತು.ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಎಂ.ಬಿ. ವಿನ್ಸೆಂಟ್, ಕೋಶಾಧಿಕಾರಿ ಕೆ.ಎಸ್. ಅನಿಲ್ ಕುಮಾರ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಬಿ.ಡಿ. ರಾಜು ರೈ ಸಂಸ್ಥೆಯ ನಿರ್ದೇಶಕರಾದ ಶರೀಫ್ ಎ., ಮುದಸ್ಸಿರ್, ಫಿರೋಜ್ ಖಾನ್ ಸೇರಿದಂತೆ ಸಂಘಟನೆಯ ನೂರಾರು ಸದಸ್ಯರು ಪಾಲ್ಗೊಂಡಿದ್ದರು.