ಕನ್ನಡಪ್ರಭವಾರ್ತೆ ಸುಂಟಿಕೊಪ್ಪ

ಕಳೆದ 11 ದಿನಗಳಿಂದ ಸುಂಟಿಕೊಪ್ಪ ಪಂಚಾಯಿತಿ ಕಸ ವಿಲೇವಾರಿ ಟ್ರ್ಯಾಕ್ಟರ್ ಚಾಲಕನಿಲ್ಲದೆ ನಿಂತಿದ್ದು, ಪಕ್ಕದ 2 ಪಂಚಾಯಿತಿಗಳ ವಾಹನದ ಮೂಲಕ ಕಸ ವಿಲೇವಾರಿ ನಡೆಯುತ್ತಿದೆ. ಕಸದ್ದೇ ಸಮಸ್ಯೆ: ಸುಂಟಿಕೊಪ್ಪ ಪಟ್ಟಣ ಪಂಚಾಯಿತಿ 7 ವಾರ್ಡ್‌ ಹೊಂದಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಾಕಷ್ಟು ಬಡಾವಣೆಗಳು ನಿರ್ಮಾಣಗೊಂಡಿದ್ದು ದಿನದಿಂದ ದಿನಕ್ಕೆ ಮನೆ ಮತ್ತು ಜನ ಸಂಖ್ಯೆ ದ್ವಿಗುಣಗೊಳ್ಳುತ್ತಿವೆ. ವಾರಂತ್ಯದಲ್ಲಿ ನೂರಾರು ಪ್ರವಾಸಿಗಾರು ಇಲ್ಲಿಗೆ ಲಗ್ಗೆಯಿಡುತ್ತಿದ್ದಾರೆ. ಈ ಪ್ರದೇಶದಲ್ಲಿ ಕಸವಿಲೇವಾರಿ ನಡೆಯದಿದ್ದಲ್ಲಿ ಮಳೆಗಾಲದಲ್ಲಿ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿಯಿದೆ. ಹಿಂದಿನ ಆಡಳಿತ ಮಂಡಳಿಯು ಸತತ ಪ್ರಯತ್ನ ಫಲವಾಗಿ ಕಸ ವಿಲೇವಾರಿಗಾಗಿ ನೂತನ ಟ್ರ್ಯಾಕ್ಟರ್‌ ಖರೀದಿಸಲಾಗಿತ್ತು. ದಿನಗೂಲಿ ಆಧಾರದ ಮೇಲೆ ಓರ್ವ ಚಾಲಕನನ್ನು ನೇಮಿಸಿ ಕಸ ವಿಲೇವಾರಿ ಮಾಡಲಾಗುತ್ತಿತು. ಆದರೆ 10 ದಿನಗಳ ಹಿಂದೆ ಟ್ರ್ಯಾಕ್ಟರ್‌ ದಿನಗೂಲಿ ಚಾಲಕ ಕೆಲಸವನ್ನು ಬಿಟ್ಟು ಹೋಗಿದ್ದು, ಪರ‍್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ಗ್ರಾಮಸ್ಥರು ಆಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಸುಂಟಿಕೊಪ್ಪ ವ್ಯಾಪ್ತಿಯ ಸುತ್ತ ಮುತ್ತಲಿನ ಕೀಡಿಗೇಡಿಗಳು ಕಸ ತ್ಯಾಜ್ಯ ತಂದು ಸುರಿಯುತ್ತಿದ್ದು, ಈ ಬಗ್ಗೆ ಪಂಚಾಯಿತಿ ವತಿಯಿಂದ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶೀಘ್ರ ನೇಮಕ: ಪಕ್ಕದ 2 ಪಂಚಾಯಿತಿಗಳಿಂದ ಕಸ ವಿಲೇವಾರಿಗಾಗಿ 2 ಗೂಡ್ಸ್ ಆಟೋ ಪಡೆಯಲಾಗಿದೆ. ಅದರೂ ನಿರೀಕ್ಷಿತ ಮಟ್ಟದಲ್ಲಿ ಕಸ ವಿಲೇವಾರಿ ಸಾಧ್ಯವಾಗುತ್ತಿಲ್ಲ. ಶೀಘ್ರದಲ್ಲಿ ಟ್ರ್ಯಾಕ್ಟರ್‌ ಚಾಲಕನ ನೇಮಕ ಶೀಘ್ರ ನಡೆಯಲಿದೆ ಎಂದು ಸುಂಟಿಕೊಪ್ಪ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಹೇಳಿದರು.

ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಸಂಬಂಧಿಸಿದ ಮೇಲಾಧಿಕಾರಿಗಳು ಚಾಲಕನ ನೇಮಕಗೊಳಿಸುವ ಸ್ವಚ್ಛತೆಗೆ ಆದ್ಯತೆ ನೀಡಬೇಕು. ತ್ಯಾಜ್ಯ ವಿಲೇವಾರಿ ಸರಿಯಾದ ರೀತಿಯಲ್ಲಿ ನಡೆಯದಿದ್ದಲ್ಲಿ ಸಾಕ್ರಾಮಿಕ ರೋಗ ಉಂಟಾಗಲಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು.

-ಪಿ.ಆರ್‌.ಸುನಿಲ್‌ ಕುಮಾರ್ ಗ್ರಾ.ಪಂ. ಮಾಜಿ ಅಧ್ಯಕ್ಷ.