ಅಧೀಕ್ಷಕ ಆತ್ಮಹತ್ಯೆ ಪ್ರಕರಣ ತಾರ್ಕಿಕ ಅಂತ್ಯದವರೆಗೂ ಕೈ ಬಿಡಲ್ಲ: ಬಿ.ವೈ.ವಿಜಯೇಂದ್ರ

| Published : May 30 2024, 12:55 AM IST

ಅಧೀಕ್ಷಕ ಆತ್ಮಹತ್ಯೆ ಪ್ರಕರಣ ತಾರ್ಕಿಕ ಅಂತ್ಯದವರೆಗೂ ಕೈ ಬಿಡಲ್ಲ: ಬಿ.ವೈ.ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಪದವೀಧರ ಹಾಗೂ ಶಿಕ್ಷಕರ 6 ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ 4 ಹಾಗೂ ಜೆಡಿಎಸ್ 2 ಸ್ಥಾನಕ್ಕೆ ಸ್ಪರ್ಧಿಸಿದ್ದು ಈ ಚುನಾವಣೆಯ ಲೋಕಸಭಾ ಚುನಾವಣೆ ರೀತಿಯಲ್ಲೇ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಈ ಬಾರಿ ಆಡಳಿತ ಪಕ್ಷದ ಅಲೆಯ ವಿರುದ್ಧ ಪ್ರಬುದ್ಧ ಮತದಾರರು ಮೈತ್ರಿಕೂಟದ ಅಭ್ಯರ್ಥಿಯ ಬೆಂಬಲಿಸಲಿದ್ದಾರೆ. ಸಣ್ಣಪುಟ್ಟ ಗೊಂದಲ ಮಧ್ಯೆ ಶಾಸಕರು, ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಸರ್ಕಾರ ಎಟಿಎಂ ಆಗಲು ಬಿಡುವುದಿಲ್ಲ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆಯ ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು ಸಚಿವರು ರಾಜೀನಾಮೆ ನೀಡುವ ಮೂಲಕ ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೂ ಕೈ ಬಿಡುವುದಿಲ್ಲ ಈ ಬಗ್ಗೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಪಟ್ಟಣದ ಮಾಳೇರಕೇರಿಯಲ್ಲಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪದವೀಧರ ಹಾಗೂ ಶಿಕ್ಷಕರ 6 ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ 4 ಹಾಗೂ ಜೆಡಿಎಸ್ 2 ಸ್ಥಾನಕ್ಕೆ ಸ್ಪರ್ಧಿಸಿದ್ದು ಈ ಚುನಾವಣೆಯ ಲೋಕಸಭಾ ಚುನಾವಣೆ ರೀತಿಯಲ್ಲೇ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಈ ಬಾರಿ ಆಡಳಿತ ಪಕ್ಷದ ಅಲೆಯ ವಿರುದ್ಧ ಪ್ರಬುದ್ಧ ಮತದಾರರು ಮೈತ್ರಿಕೂಟದ ಅಭ್ಯರ್ಥಿಯ ಬೆಂಬಲಿಸಲಿದ್ದಾರೆ. ಸಣ್ಣಪುಟ್ಟ ಗೊಂದಲ ಮಧ್ಯೆ ಶಾಸಕರು, ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹಾಗೂ ಜೆಡಿಎಸ್ ಅಭ್ಯರ್ಥಿ ಭೋಜೇಗೌಡ ಪ್ರಥಮ ಪ್ರಾಶಸ್ತ್ಯದ ಮತದಲ್ಲಿ ದೊಡ್ಡ ಅಂತರದಿಂದ ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜೂ.4ಕ್ಕೆ ಕಾಂಗ್ರೆಸ್‌ಗೆ ಜ್ಞಾನೋದಯ:

ರಾಜ್ಯದ ಜನರು ಲೋಕಸಭಾ ಚುನಾವಣೆ ಫಲಿತಾಂಶ ಎದುರು ನೋಡುತ್ತಿದ್ದು, ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಮುಖಂಡರಿಗಿದ್ದ 15-20 ಸ್ಥಾನದ ಗೆಲುವಿನ ವಿಶ್ವಾಸ ಇದೀಗ ಭ್ರಮೆ ಎಂದು ಮನವರಿಕೆಯಾಗಿ ನಿರೀಕ್ಷೆ, ಉತ್ಸಾಹ ಕ್ರಮೇಣ ಕಡಿಮೆಯಾಗುತ್ತಿದೆ. ಜೂ.4 ರಂದು ಮತಎಣಿಕೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರಿಗೆ ಜ್ಞಾನೋದಯವಾಗಲಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಿಂದ ಪಕ್ಷಕ್ಕೆ ಎಟಿಎಂ ರೀತಿಯಾಗಿದೆ ಎಂಬ ಆರೋಪಕ್ಕೆ ಮುಖ್ಯಮಂತ್ರಿಯವರು ಯಾವುದೇ ಪುರಾವೆ ಇಲ್ಲ ಎನ್ನುತ್ತಿದ್ದು ಇದೀಗ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್, ಸಚಿವರ, ಹಿರಿಯ ಅಧಿಕಾರಿಗಳ ಒತ್ತಡ ಕಿರುಕುಳ ಅವ್ಯವಹಾರದ ಬಗ್ಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದು ನಾಳೆ ಮೃತರ ಮನೆಗೆ ಭೇಟಿ ನೀಡುವುದಾಗಿ ತಿಳಿಸಿದರು.

ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ವ್ಯಾಪ್ತಿಯಲ್ಲಿನ ಪಕ್ಷದ ದೇವದುರ್ಲಭ ಕಾರ್ಯಕರ್ತರ ತಂಡ ಗೆಲುವಿಗೆ ಶ್ರಮಿಸುತ್ತಿದ್ದು ಮನೆಮನೆಗೆ ತೆರಳಿ ಮತದಾರರ ಬೇಟಿ ಮಾಡಿ ಮನವೊಲಿಸಲಾಗುತ್ತಿದೆ ಮತದಾರರ ಆಶೀರ್ವಾದದಿಂದ ಶೇ.100 ಪ್ರಥಮ ಪ್ರಾಶಸ್ತ್ಯದ ಮತದಿಂದ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಈ ವ್ಯಾಪ್ತಿಯ14 ಮೆಡಿಕಲ್ ಕಾಲೇಜು, 30 ಇಂಜಿನಿಯರಿಂಗ್ ಕಾಲೇಜು,100 ಕ್ಕೂ ಅಧಿಕ ಪದವಿ ಕಾಲೇಜುಗಳ ಪದವೀಧರರ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.

ಗೋಷ್ಠಿಯಲ್ಲಿ ತಾ.ಬಿಜೆಪಿ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ವಸಂತಗೌಡ ಮುಖಂಡ ಗುರುಮೂರ್ತಿ, ಎಚ್.ಟಿ ಬಳಿಗಾರ್, ಚನ್ನವೀರಪ್ಪ, ಗಾಯತ್ರಿದೇವಿ, ಮಹೇಶ್ ಹುಲ್ಮಾರ್, ವೀರೇಂದ್ರ ಪಾಟೀಲ್, ಶೇಖರಪ್ಪ, ಪಾಲಾಕ್ಷಪ್ಪ, ಎಸ್.ಎಸ್ ರಾಘವೇಂದ್ರ, ದಿವಾಕರ್, ಮಲ್ಲಿಕಾರ್ಜುನಾಚಾರ್ ಜೆಡಿಎಸ್ ಅಧ್ಯಕ್ಷ ಯೋಗೀಶ ಬೆಂಕಿ, ಜಯಣ್ಣ, ಈರಾನಾಯ್ಕ ಮತ್ತಿತರರಿದ್ದರು.ಸರ್ಕಾರದ ಸಾಧನೆ ಶೂನ್ಯ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು 1 ವರ್ಷ ಕಳೆದರೂ ಯಾವುದೇ ಗುದ್ದಲಿ ಪೂಜೆ, ಶಿಲಾನ್ಯಾಸ, ಉದ್ಘಾಟನೆ, ಹೊಸ ಯೋಜನೆ ಆರಂಭಿಸದೆ ಸರ್ಕಾರದ ಸಾಧನೆ ಶೂನ್ಯವಾಗಿದೆ. ಚನ್ನಗಿರಿ ಘಟನೆಯಿಂದಾಗಿ ಪೊಲೀಸರಿಗೆ ರಕ್ಷಣೆ ಇಲ್ಲವಾಗಿದೆ ರಾಜ್ಯದಲ್ಲಿ ಚುನಾಯಿತ ಸರ್ಕಾರ, ಮುಖ್ಯಮಂತ್ರಿ, ಗೃಹಸಚಿವರು ಇದ್ದಾರಾ ಎಂಬ ಬಗ್ಗೆ ಜನರಿಗೆ ಅನುಮಾನ ಉಂಟಾಗಿದೆ. ಇಂತಹ ದುಸ್ಥಿತಿಗೆ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಕಾರಣವಾಗಿದ್ದು ಜನಸಾಮಾನ್ಯರು ಪರಿತಪಿಸುವಂತಾಗಿದೆ.

ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ