ಛಾಯಾಗ್ರಾಹಕರು ತಮ್ಮ ವೃತ್ತಿಜೀವನದಲ್ಲಿ ಎದುರಿಸುವ ಹಲವು ಸವಾಲುಗಳ ನಡುವೆ ಅನಿರೀಕ್ಷಿತವಾಗಿ ನಿಧನರಾದ ಸಂದರ್ಭದಲ್ಲಿ ಅವರ ಕುಟುಂಬ ಆರ್ಥಿಕಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುವುದರಿಂದ, ಅಂತಹ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘವು ಆಸರೆ ಯೋಜನೆ ಆರಂಭಿಸಿದೆ. ಆಸರೆ ಯೋಜನೆಯು ಛಾಯಾಗ್ರಾಹಕರ ಕುಟುಂಬಕ್ಕೆ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ಬೆಂಬಲ ನೀಡುವ ಮಹತ್ವದ ಯೋಜನೆಯಾಗಿದ್ದು, ಜಿಲ್ಲೆಯ ಪ್ರತಿಯೊಬ್ಬ ಛಾಯಾಗ್ರಾಹಕರೂ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಮೂಲಕ ತಮ್ಮ ಕುಟುಂಬಕ್ಕೆ ಭದ್ರತೆ ಕಲ್ಪಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಇತ್ತೀಚೆಗೆ ನಿಧನರಾದ ಹಿರಿಯ ಛಾಯಾಗ್ರಾಹಕ ನಂದಕುಮಾರ್ ಅವರ ಕುಟುಂಬಕ್ಕೆ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ (ಕೆಪಿಎ) ಆಸರೆ ಯೋಜನೆಯಡಿ ₹75 ಸಾವಿರ ಆರ್ಥಿಕ ಸಹಾಯಧನ ನೀಡಲಾಯಿತು. ಹಾಸನ ಜಿಲ್ಲಾ ಛಾಯಾಗ್ರಾಹಕರ ಸಂಘ ಹಾಗೂ ಚನ್ನರಾಯಪಟ್ಟಣ ತಾಲೂಕು ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು ನಂದ ಕುಮಾರ್‌ ಅವರ ನಿವಾಸಕ್ಕೆ ಗುರುವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮೃತರ ಪತ್ನಿ ಸಿ. ಆರ್‌. ಗಾಯತ್ರಿ ಅವರಿಗೆ ಆಸರೆ ಯೋಜನೆಯ ಆರ್ಥಿಕ ಸಹಾಯಧನದ ₹75 ಸಾವಿರದ ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನಿಂಗರಾಜು ಮಾತನಾಡಿ, ಛಾಯಾಗ್ರಾಹಕರು ತಮ್ಮ ವೃತ್ತಿಜೀವನದಲ್ಲಿ ಎದುರಿಸುವ ಹಲವು ಸವಾಲುಗಳ ನಡುವೆ ಅನಿರೀಕ್ಷಿತವಾಗಿ ನಿಧನರಾದ ಸಂದರ್ಭದಲ್ಲಿ ಅವರ ಕುಟುಂಬ ಆರ್ಥಿಕಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇರುವುದರಿಂದ, ಅಂತಹ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘವು ಆಸರೆ ಯೋಜನೆ ಆರಂಭಿಸಿದೆ. ಆಸರೆ ಯೋಜನೆಯು ಛಾಯಾಗ್ರಾಹಕರ ಕುಟುಂಬಕ್ಕೆ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ಬೆಂಬಲ ನೀಡುವ ಮಹತ್ವದ ಯೋಜನೆಯಾಗಿದ್ದು, ಜಿಲ್ಲೆಯ ಪ್ರತಿಯೊಬ್ಬ ಛಾಯಾಗ್ರಾಹಕರೂ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಮೂಲಕ ತಮ್ಮ ಕುಟುಂಬಕ್ಕೆ ಭದ್ರತೆ ಕಲ್ಪಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎ. ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ 164 ಛಾಯಾಗ್ರಾಹಕರು ಆಸರೆ ಯೋಜನೆಗೆ ನೋಂದಣಿಯಾಗಿದ್ದಾರೆ. ಇನ್ನೂ ನೋಂದಣಿಯಾಗದವರು ಕೂಡಲೇ ಸದಸ್ಯತ್ವ ಪಡೆದು ಯೋಜನೆಗೆ ನೋಂದಣಿಯಾಗಬೇಕು. ಛಾಯಾಗ್ರಾಹಕರ ಕುಟುಂಬದ ಭವಿಷ್ಯದ ದೃಷ್ಟಿಯಿಂದ ಆಸರೆ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು, ವೃತ್ತಿಬಾಂಧವರ ಸಂಕಷ್ಟದ ಸಂದರ್ಭದಲ್ಲಿ ಸಂಘಟನೆಯ ಮೂಲಕ ನೆರವಿನ ಹಸ್ತ ಚಾಚುವುದು ಸಂಘದ ಪ್ರಮುಖ ಉದ್ದೇಶವಾಗಿದೆ. ವೃತ್ತಿಬಾಂಧವರ ಕಷ್ಟ-ಸುಖಗಳಲ್ಲಿ ಸಂಘ ಸದಾ ಸ್ಪಂದಿಸಲಿದ್ದು, ಛಾಯಾಗ್ರಾಹಕರ ಕುಟುಂಬಗಳ ಹಿತ ಕಾಪಾಡಲು ಸಂಘಟಿತ ಪ್ರಯತ್ನ ಮುಂದುವರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಛಾಯಾಗ್ರಾಹಕರ ಸಂಘದ ಆಸರೆ ಯೋಜನೆಯ ಉಸ್ತುವಾರಿ ಲೋಕೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನೀಲೇಶ್, ತಾಲೂಕು ಸಂಘದ ಕಾರ್ಯದರ್ಶಿ ನಾಗೇಂದ್ರ ರಾ.ಯ., ಖಜಾಂಚಿ ರಾಘವೇಂದ್ರ, ನಿರ್ದೇಶಕರಾದ ಡಿ.ಆರ್. ಕಾಂತರಾಜ್, ಸಿ.ಎನ್. ಪ್ರಕಾಶ್, ಎಚ್.ಕೆ. ಮಂಜೇಗೌಡ (ಸ್ವಾಮಿ ಹಡೆನಹಳ್ಳಿ) ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಛಾಯಾಗ್ರಾಹಕರು ಉಪಸ್ಥಿತರಿದ್ದರು.