ಪರಿಷತ್ತಿನ ಘನತೆಯನ್ನು ಎತ್ತಿ ಹಿಡಿಯುವ ಆರ್ಥಿಕ ಪರಿಶುದ್ಧತೆಯನ್ನು ಕಾಪಾಡುವ ವ್ಯಕ್ತಿತ್ವದವರು ಆ ಸ್ಥಾನಕ್ಕೆ ಬರಬೇಕೆಂಬುದು ನನ್ನ ಆಸೆ. ಆ ನಿಟ್ಟಿನಲ್ಲಿ ಎಲ್ಲರೊಂದಿಗೆ ಚರ್ಚೆ ನಡೆಸಿ ಕ್ರಿಯಾಶೀಲ ವ್ಯಕ್ತಿತ್ವದ ಲೋಕೇಶ್ ಅವರನ್ನು ಮುಂಬರುವ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬೆಂಬಲಿಸಲು ನಿರ್ಧರಿಸಿದ್ದೇನೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಚ್.ಎಲ್ ಮಲ್ಲೇಶಗೌಡ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಗೌರವ ತಂದುಕೊಡುವವರು ಅಧ್ಯಕ್ಷ ಸ್ಥಾನಕ್ಕೆ ಬರಬೇಕು. ಬೇರೆ ಯಾವುದೋ ಉದ್ದೇಶದಿಂದ ಬರುವವರನ್ನು ಮತದಾರರು ದೂರ ಇಡಬೇಕು ಎಂದರು. ಸಂಘಟನೆಯಲ್ಲಿ ಕ್ರಿಯಾತ್ಮಕವಾಗಿರುವವರು ಯಾರೇ ಇರಲಿ ಅವರನ್ನು ಎಲ್ಲರೂ ಗೌರವಿಸೋಣ ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ಪರಿಷತ್ತಿನ ಘನತೆಯನ್ನು ಎತ್ತಿ ಹಿಡಿಯುವ ಆರ್ಥಿಕ ಪರಿಶುದ್ಧತೆಯನ್ನು ಕಾಪಾಡುವ ವ್ಯಕ್ತಿತ್ವದವರು ಆ ಸ್ಥಾನಕ್ಕೆ ಬರಬೇಕೆಂಬುದು ನನ್ನ ಆಸೆ. ಆ ನಿಟ್ಟಿನಲ್ಲಿ ಎಲ್ಲರೊಂದಿಗೆ ಚರ್ಚೆ ನಡೆಸಿ ಕ್ರಿಯಾಶೀಲ ವ್ಯಕ್ತಿತ್ವದ ಲೋಕೇಶ್ ಅವರನ್ನು ಮುಂಬರುವ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬೆಂಬಲಿಸಲು ನಿರ್ಧರಿಸಿದ್ದೇನೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಚ್.ಎಲ್ ಮಲ್ಲೇಶಗೌಡ ಹೇಳಿದರು. ನಗರದ ಖಾಸಗಿ ಹೋಟೇಲಿನಲ್ಲಿ ಮಂಗಳವಾರ ಸಂಜೆ ನಡೆದ ಮುಂಬರುವ ಕಸಾಪ ಚುನಾವಣೆಯ ಜಿಲ್ಲಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಚ್. ಎನ್ ಲೋಕೇಶ್ ಹಡೇನಹಳ್ಳಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಡಾ. ರಾಜ್ ಕುಮಾರ್ ಸಂಘದ ಜಿಲ್ಲಾಧ್ಯಕ್ಷ ಬಾಳ್ಳುಗೋಪಾಲ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಗೌರವ ತಂದುಕೊಡುವವರು ಅಧ್ಯಕ್ಷ ಸ್ಥಾನಕ್ಕೆ ಬರಬೇಕು. ಬೇರೆ ಯಾವುದೋ ಉದ್ದೇಶದಿಂದ ಬರುವವರನ್ನು ಮತದಾರರು ದೂರ ಇಡಬೇಕು ಎಂದರು. ಸಂಘಟನೆಯಲ್ಲಿ ಕ್ರಿಯಾತ್ಮಕವಾಗಿರುವವರು ಯಾರೇ ಇರಲಿ ಅವರನ್ನು ಎಲ್ಲರೂ ಗೌರವಿಸೋಣ ಎಂದರು.ಕಸಾಪ ಮಾಜಿ ಅಧ್ಯಕ್ಷ ಡಾ.ಎಚ್ ಎಲ್ ಜನಾರ್ಧನ್ ಮಾತನಾಡಿ, ಹಡೇನಹಳ್ಳಿ ಲೋಕೇಶ್ ಅವರು ಎರಡು ಬಾರಿ ತಾಲೂಕು ಅಧ್ಯಕ್ಷರಾಗಿ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ. 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಿಕ್ಕ ಕಡಿಮೆ ಅವಧಿಯಲ್ಲಿ ಇಡೀ ತಾಲೂಕಿನಾದ್ಯಂತ ಯುವ ಜನತೆಯನ್ನು ಸಂಘಟಿಸಿ ಶ್ರವಣಬೆಳಗೊಳದಲ್ಲಿ ನಡೆದ ಸಮ್ಮೇಳನವನ್ನು ಯಶಸ್ವಿಗೊಳಿಸಿದ ಕೀರ್ತಿ ಲೋಕೇಶ್ ಅವರಿಗೆ ಸಲ್ಲುತ್ತದೆ ಎಂದರು.ಸಾಹಿತಿ ಹುಲ್ಲೇನಹಳ್ಳಿ ರಾಜೇಶ್ವರಿ ಮಾತನಾಡಿ, ಕನ್ನಡದ ಕೆಲಸವನ್ನು ನಿಸ್ವಾರ್ಥವಾಗಿ ಮಾಡುವವರಿಗೆ ಎಲ್ಲರೂ ಬೆಂಬಲಿಸಬೇಕು. ಲೋಕೇಶ್ ಅವರ ವ್ಯಕ್ತಿತ್ವ ಅವರನ್ನು ಎಲ್ಲರೂ ಬೆಂಬಲಿಸಲು ಕಾರಣವಾಗಬಹುದು ಈ ಬಾರಿ ಹಡೇನಹಳ್ಳಿ ಲೋಕೇಶ್ಗೆ ಬೆಂಬಲ ನೀಡೋಣ ಎಂದು ತಿಳಿಸಿದರು.ಡಾ. ಐಚನಹಳ್ಳಿ ಕೃಷ್ಣಪ್ಪ ಮಾತನಾಡಿ, ಈ ಹಿಂದೆಯು ಲೋಕೇಶ್ ಅವರೊಂದಿಗೆ ಕೆಲಸ ಮಾಡಿದ್ದೆ, ಅವರು ಸ್ನೇಹಜೀವಿ, ಬಹಳ ವಿಶ್ವಾಸದಿಂದ ಮುನ್ನಡೆಸಿಕೊಂಡು ಹೋಗುವ ಗುಣ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟರು. ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ಲೋಕೇಶ್ ಹಡೇನಹಳ್ಳಿ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಾಗೂ ನೌಕರರ ಸಂಘದಲ್ಲಿ ಹಿರಿಯ ಸಲಹೆಯೊಂದಿಗೆ ಇಲ್ಲಿಯವರೆಗೂ ಒಳ್ಳೆಯ ಕೆಲಸವನ್ನು ಮಾಡಿಕೊಂಡು ಬಂದಿದ್ದೇನೆ. ಮತದಾರರು ನನ್ನನ್ನು ಆಯ್ಕೆ ಮಾಡಿದರೆ ಪರಿಷತ್ತಿನ ಘನತೆಗೆ ಚ್ಯುತಿ ಬರದಂತೆ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದರು.ಸಭೆಯಲ್ಲಿ ನೌಕರರ ಸಂಘದ ಮಾಜಿ ನಿರ್ದೇಶಕ ಬಸವರಾಜು, ಡಯಟ್ ಉಪನ್ಯಾಸಕ ಸಿ.ಕೆ ಹರೀಶ್, ರೈತ ಸಂಘದ ಯೋಗೇಶ್, ಜನಪದ ಕಲಾವಿದ ದೊಡ್ಡಳ್ಳಿ ರಮೇಶ್, ನೌಕರರ ಸಂಘದ ನಿರ್ದೇಶಕರಾದ ಪಾರ್ಥೇಶ್, ಆಶಾ, ವೆಂಕಟೇಶ್, ರವೀಂದ್ರ, ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರಾದ ಭರತಗೌಡ, ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ, ಶಿಕ್ಷಕರ ಸಂಘದ ಪದಾಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಮುಖಂಡರು ಇತರರು ಹಾಜರಿದ್ದರು.