ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದ್ವೇಷ ಭಾಷಣ ಮಸೂದೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಭಾರೀ ಧಕ್ಕೆ ತರುವಂತಹದ್ದು

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ದ್ವೇಷ ಭಾಷಣ ಮಸೂದೆ ತರಲು ಉದ್ದೇಶಿಸಿದೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಸುರಭಿ ಹೊದಿಗೆರೆ ಆರೋಪಿಸಿದ್ದಾರೆ.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದ್ವೇಷ ಭಾಷಣ ಮಸೂದೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಭಾರೀ ಧಕ್ಕೆ ತರುವಂತಹದ್ದು ಎಂದು ಆರೋಪಿಸಿದ ಅವರು, ಈ ಮಸೂದೆಯನ್ನು ಸೂಕ್ತ ಚಿಂತನೆ, ಸಮಾಲೋಚನೆ ಹಾಗೂ ತಜ್ಞರ ಸಲಹೆ ಇಲ್ಲದೆ, ಏಕಪಕ್ಷೀಯವಾಗಿ ರೂಪಿಸಲಾಗಿದೆ ಎಂದು ಹೇಳಿದರು. ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಅತ್ಯಂತ ಗಂಭೀರ ವಿಷಯದ ಬಗ್ಗೆ ಮಸೂದೆ ತರಬೇಕಾದರೆ ಸಾಕಷ್ಟು ಚಿಂತನೆ ನಡೆಸಬೇಕಿತ್ತು. ಯಾರೊಂದಿಗೂ ಸಮಾಲೋಚನೆ ಮಾಡಿಲ್ಲ. ದ್ವೇಷ ಭಾಷಣ ಮತ್ತು ಅಪರಾಧ ಎರಡನ್ನೂ ಒಂದೇ ಎಂದು ಪರಿಗಣಿಸಲಾಗುತ್ತಿದೆ. ಮಸೂದೆಯ ವ್ಯಾಖ್ಯಾನವೇ ಸರಿಯಾಗಿಲ್ಲ. ಇದು ಭಾವನಾತ್ಮಕವಾಗಿ ರೂಪಿಸಿದ ಮಸೂದೆ. ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿಲ್ಲ ಎಂದು ಅವರು ಟೀಕಿಸಿದರು.

ಈಗಾಗಲೇ ಭಾರತೀಯ ನ್ಯಾಯ ಸಂಹಿತೆ ಅಸ್ತಿತ್ವದಲ್ಲಿರುವಾಗ ಹೆಚ್ಚುವರಿಯಾಗಿ ಹೊಸ ಮಸೂದೆ ತರಬೇಕಾದ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ ಅವರು, ದ್ವೇಷ ಭಾಷಣ ಮಾಡುವ ಶಂಕೆಯ ಆಧಾರದ ಮೇಲೆ ಮುಂಚಿತವಾಗಿ ಬಂಧಿಸುವ ಉದ್ದೇಶ ಈ ಮಸೂದೆಯಲ್ಲಿ ಅಡಗಿದೆ. ಇದು ಭಾರೀ ದುರುಪಯೋಗಕ್ಕೆ ಕಾರಣವಾಗಲಿದೆ ಎಂದು ಅವರು ಹೇಳಿದರು.ಬಿಜೆಪಿ ಜಿಲ್ಲಾ ವಕ್ತಾರರಾದ ಅರುಣ್ ಶೆಟ್ಟಿ, ಮಾಧವ ಮೋರೆ, ಮಾಧ್ಯಮ ಸಂಚಾಲಕ ವಸಂತ್ ಪೂಜಾರಿ ಹಾಗೂ ಮಾಧ್ಯಮ ಸಹ ಸಂಚಾಲಕ ಹೇಮಂತ್ ಶೆಟ್ಟಿ ಇದ್ದರು.