ರಾಮನಗರ ನಗರಸಭೆ ವ್ಯಾಪ್ತಿಯ 31 ವಾರ್ಡುಗಳ ವ್ಯಾಪ್ತಿಯ ಪ್ರತಿಯೊಂದು ಬಡಾವಣೆಗೂ ತಂಡ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದು, ಇದಕ್ಕೆ ಆಯಾಯ ವಾರ್ಡಿನ ನಗರಸಭಾ ಸದಸ್ಯರು ಸಹಕಾರ ನೀಡಲಿದ್ದಾರೆ. ಅಸಂಘಟಿತ ವಲಯದ ಕಾರ್ಮಿಕರು ಸಮೀಕ್ಷೆ ಕಾರ್ಯದಲ್ಲಿ ಹೆಸರು ನೋಂದಾಯಿಸಿಕೊಂಡು ಯೋಜನೆಗಳ ಲಾಭ ಪಡೆಯಬೇಕು.

-77 ಮಂದಿವುಳ್ಳ 8 ತಂಡಗಳಿಂದ 10 ದಿನಗಳವರೆಗೆ ಸಮೀಕ್ಷೆ ಕಾರ್ಯ

- ನಗರಸಭೆಯಿಂದ 2026- 27ನೇ ಸಾಲಿನ ಬಜೆಟ್ ನಲ್ಲಿ ₹30 ಲಕ್ಷ ಅನುದಾನ ನಿಗದಿ

-ಪ್ರಾರಂಭಿಕ ವರ್ಷದ ವಂತಿಕೆಯನ್ನು ನಗರಸಭೆಯೇ ಭರಿಸಲಿದೆಕನ್ನಡಪ್ರಭ ವಾರ್ತೆ ರಾಮನಗರ

ನಗರಸಭಾ ವ್ಯಾಪ್ತಿಯಲ್ಲಿನ ಅಸಂಘಟಿತ ಕಾರ್ಮಿಕರನ್ನು ಪಿಎಂಜೆಜೆವೈ ಜೀವ ವಿಮೆ, ಪಿಎಂಎಸ್ ಬಿವೈ ಅಪಘಾತ ವಿಮೆ ಹಾಗೂ ಪಿಎಂ - ವೈಎಂ ಪಿಂಚಣಿ ಯೋಜನೆ ಅಡಿಯಲ್ಲಿ ಸೇರಿಸಲು ಇಂದಿನಿಂದಲೇ (ಏ.2) ಸಮೀಕ್ಷೆ ಕಾರ್ಯ ನಡೆಯಲಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ತಿಳಿಸಿದರು.

ನಗರಸಭಾ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮೀಕ್ಷೆ ಕಾರ್ಯ 10 ದಿನಗಳವರೆಗೆ ನಡೆಯಲಿದ್ದು, ಇದಕ್ಕಾಗಿ 85 ಮಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ 77 ಮಂದಿಯನ್ನು 8 ತಂಡಗಳನ್ನು ರಚಿಸಲಾಗಿದ್ದರೆ, 8 ಮಂದಿ ಮೇಲ್ವಿಚಾರಣೆ ಮಾಡಲಿದ್ದಾರೆ ಎಂದರು.

ನಗರಸಭೆ ವ್ಯಾಪ್ತಿಯ 31 ವಾರ್ಡುಗಳ ವ್ಯಾಪ್ತಿಯ ಪ್ರತಿಯೊಂದು ಬಡಾವಣೆಗೂ ತಂಡ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದು, ಇದಕ್ಕೆ ಆಯಾಯ ವಾರ್ಡಿನ ನಗರಸಭಾ ಸದಸ್ಯರು ಸಹಕಾರ ನೀಡಲಿದ್ದಾರೆ. ಅಸಂಘಟಿತ ವಲಯದ ಕಾರ್ಮಿಕರು ಸಮೀಕ್ಷೆ ಕಾರ್ಯದಲ್ಲಿ ಹೆಸರು ನೋಂದಾಯಿಸಿಕೊಂಡು ಯೋಜನೆಗಳ ಲಾಭ ಪಡೆಯಬೇಕು ಎಂದು ಮನವಿ ಮಾಡಿದರು.

₹30 ಲಕ್ಷ ಅನುದಾನ ನಿಗದಿ:

ದುಡಿಯುವ ವರ್ಗಗಳಿಗೆ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ 2026-27ನೇ ಸಾಲಿನ ಆಯವ್ಯಯದಲ್ಲಿ ನಗರಸಭಾ ವ್ಯಾಪ್ತಿಯಲ್ಲಿನ ಅಸಂಘಟಿತ ಕಾರ್ಮಿಕ ವಲಯದ ಸುಮಾರು 17 ಸಾವಿರ ಜನರ ಸುರಕ್ಷತೆಗಾಗಿ ಜೀವ ವಿಮೆ, ಅಪಘಾತ ವಿಮೆ ಹಾಗೂ ಪಿಂಚಣಿ ಯೋಜನೆ ವಂತಿಕೆಗಾಗಿ ₹30 ಲಕ್ಷ ಅನುದಾನ ನಿಗದಿ ಪಡಿಸಲಾಗಿದೆ ಎಂದರು.

ಯಾವ್ಯಾವ ಕಾರ್ಮಿಕರು ಅರ್ಹರು?:

ಅಸಂಘಟಿತ ವಲಯದಲ್ಲಿ ಬರುವ ಆಟೋ ಚಾಲಕರು, ಇತರೆ ವಾಹನ ಚಾಲಕರು, ಗಾರೆ ಕೆಲಸ, ಕಾರ್ಪೆಂಟರ್, ಕೂಲಿ ಕೆಲಸ, ಪಿಲೆಚೇರ್ಸ್ - ಹುರಿಮಿಷನ್ ಕಾರ್ಮಿಕರು, ಹೋಟೆಲ್ ಕೆಲಸಗಾರರು, ಚಿಂದಿ ಆಯುವವರು, ಕುಲಶ ಕರ್ಮಿಗಳು, ಸವಿತಾ ಸಮಾಜದ ವೃತ್ತಿ ನಿರತರು, ಮಡಿವಾಳರು, ಅಕ್ಕಸಾಲಿಗರು, ಪೇಯಿಂಟಿಂಗ್ ಕೆಲಸಗಾರರು, ಕಟ್ಟಡ ಕಾರ್ಮಿಕರು, ಪ್ಲಂಬರ್ಸ್ , ಟೈಲರಿಂಗ್ ವೃತ್ತಿನಿರತರು ಸೇರಿದಂತೆ ಇತ್ಯಾದಿ ಕಸುಬುಗಳನ್ನು ಮಾಡುತ್ತಿರುವವರು ಈ ಯೋಜನೆಗಳ ಫಲಾನುಭವಿಗಳಾಗಲು ಅರ್ಹರಾಗಿದ್ದಾರೆ ಎಂದರು.

ಈ ಮೂರು ಯೋಜನೆಗಳ ಲಾಭ ಪಡೆಯಬೇಕಾದರೆ ಫಲಾನುಭವಿಗಳು ಕಡ್ಡಾಯವಾಗಿ ರಾಮನಗರ ನಗರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಪ್ರಾರಂಭಿಕವಾಗಿ ಜೀವ ವಿಮೆ 1 ವರ್ಷ, ಅಪಘಾತ ವಿಮೆ 5 ವರ್ಷ ಹಾಗೂ ಪಿಂಚಣಿ ಯೋಜನೆ 1 ವರ್ಷವರೆಗಿನ ವಂತಿಕೆಯನ್ನು ನಗರಸಭೆ ವತಿಯಿಂದಲೇ ಭರಿಸಲಾಗುವುದು ಎಂದು ಕೆ.ಶೇಷಾದ್ರಿ ತಿಳಿಸಿದರು.

ಈ ಸಂದರ್ಭದಲ್ಲಿ ಸಮೀಕ್ಷೆದಾರರಿಗೆ ಅಗತ್ಯವಾದ ಪರಿಕರಗಳನ್ನು ವಿತರಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ನಿಜಾಮುದ್ದೀನ್ ಷರೀಫ್, ಮೊಯಿನ್, ಅಜ್ಮತ್ ಉಲ್ಲಾ ಖಾನ್, ಪವಿತ್ರ, ಪಾರ್ವತಮ್ಮ, ಮಂಜುನಾಥ್, ಮುನಜಿಲ್ ಆಗಾ, ಸಮದ್, ಗ್ಯಾಬ್ರಿಯಲ್, ಮಜಹತ್ ಜ್ಹಾ, ನಾಗಮ್ಮ, ಆಯುಕ್ತ ಜಯಣ್ಣ ಉಪಸ್ಥಿತರಿದ್ದರು.ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) :

ಭಾರತ ಸರ್ಕಾರದ ಅಗ್ಗದ ಜೀವ ವಿಮಾ ಯೋಜನೆಯಾಗಿದೆ. 18- 50 ವರ್ಷದ ಬ್ಯಾಂಕ್ ಖಾತೆದಾರರಿಗೆ ಲಭ್ಯವಿರುವ ಈ ಯೋಜನೆಯಲ್ಲಿ, ವಾರ್ಷಿಕ ಕೇವಲ ₹436 ಪ್ರೀಮಿಯಂನೊಂದಿಗೆ ₹2 ಲಕ್ಷ ಜೀವ ವಿಮಾ ರಕ್ಷಣೆ ಸಿಗುತ್ತದೆ. ಇದು ಯಾವುದೇ ಕಾರಣದಿಂದ ಮರಣ ಸಂಭವಿಸಿದರೂ ಅನ್ವಯವಾಗುತ್ತದೆ ಮತ್ತು ಪ್ರತಿ ವರ್ಷ ನವೀಕರಿಸಬಹುದು.

ಅರ್ಹತೆ: 18 ರಿಂದ 50 ವರ್ಷದೊಳಗಿನ ವಯಸ್ಕರು.

ಪ್ರೀಮಿಯಂ: ವರ್ಷಕ್ಕೆ ₹436 (ಬ್ಯಾಂಕ್ ಖಾತೆಯಿಂದ ಸ್ವಯಂ-ಡೆಬಿಟ್).

ವಿಮಾ ಮೊತ್ತ: ₹2 ಲಕ್ಷ (ಮರಣ ಸಂಭವಿಸಿದಲ್ಲಿ).

ಅವಧಿ: ಜೂನ್ 1 ರಿಂದ ಮೇ 31 ರವರೆಗೆ (ನವೀಕರಿಸಬಹುದಾದ).

ಅಗತ್ಯ ದಾಖಲೆ: ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ಸಂಖ್ಯೆ.

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY)

ಒಂದು ವರ್ಷದ ಅಪಘಾತ ವಿಮಾ ಯೋಜನೆಯಾಗಿದ್ದು, ವಾರ್ಷಿಕ ಕೇವಲ ₹20 ಪ್ರೀಮಿಯಂನಲ್ಲಿ ₹2 ಲಕ್ಷದವರೆಗೆ ಅಪಘಾತ ವಿಮಾ ರಕ್ಷಣೆ ನೀಡುವ ಭಾರತ ಸರ್ಕಾರದ ಯೋಜನೆಯಾಗಿದೆ. 18-70 ವರ್ಷದೊಳಗಿನ ಬ್ಯಾಂಕ್ ಖಾತೆ ಹೊಂದಿರುವವರು ಇದಕ್ಕೆ ಅರ್ಹರು. ಅಪಘಾತದಿಂದ ಮರಣ ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದಾಗ ಈ ಸೌಲಭ್ಯ ಲಭ್ಯವಾಗುತ್ತದೆ.

ವಿಮಾ ರಕ್ಷಣೆ: ಅಪಘಾತದಿಂದ ಸಾವು ಅಥವಾ ಪೂರ್ಣ ಅಂಗವೈಕಲ್ಯಕ್ಕೆ ₹2 ಲಕ್ಷ, ಭಾಗಶಃ ಅಂಗವೈಕಲ್ಯಕ್ಕೆ ₹1 ಲಕ್ಷ.

ಪ್ರೀಮಿಯಂ: ವಾರ್ಷಿಕ ₹20 (ಬ್ಯಾಂಕ್ ಖಾತೆಯಿಂದ ಸ್ವಯಂ-ಡೆಬಿಟ್).

ಅರ್ಹತೆ: 18 ರಿಂದ 70 ವರ್ಷ ವಯಸ್ಸಿನವರು.

ನವೀಕರಣ: ಪ್ರತಿ ವರ್ಷ ಜೂನ್ 1 ರಂದು ನವೀಕರಿಸಲಾಗುತ್ತದೆ.

ಅಗತ್ಯ ದಾಖಲೆ: ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ಸಂಖ್ಯೆ.

ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (PM-SYM) :

ಈ ಯೋಜನೆಯು ಅಸಂಘಟಿತ ವಲಯದ ಕಾರ್ಮಿಕರಿಗೆ 60 ವರ್ಷದ ನಂತರ ಮಾಸಿಕ ₹3 ಸಾವಿರ ಖಚಿತ ಪಿಂಚಣಿ ನೀಡುವ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. 18-40 ವರ್ಷದೊಳಗಿನ, ಮಾಸಿಕ ₹15 ಸಾವಿರಕ್ಕಿಂತ ಕಡಿಮೆ ಆದಾಯವಿರುವ ಕಾರ್ಮಿಕರು, ₹55 ರಿಂದ ₹200 ವರೆಗಿನ ಮಾಸಿಕ ವಂತಿಗೆಯನ್ನು (ವಯಸ್ಸಿನ ಆಧಾರದ ಮೇಲೆ) ಪಾವತಿಸುವ ಮೂಲಕ ಇದರಲ್ಲಿ ಭಾಗವಹಿಸಬಹುದು.

ಅರ್ಹತೆ: ಬೀದಿಬದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ನಿರ್ಮಾಣ ಕಾರ್ಮಿಕರು, ಮನೆಗೆಲಸದವರು, ಕೃಷಿ ಕಾರ್ಮಿಕರು ಸೇರಿ ಅಸಂಘಟಿತ ವಲಯದ ಕಾರ್ಮಿಕರಾಗಿರಬೇಕು.

ವಂತಿಗೆ: ಫಲಾನುಭವಿ ಪಾವತಿಸುವಷ್ಟೇ ಮೊತ್ತವನ್ನು (50:50) ಕೇಂದ್ರ ಸರ್ಕಾರವೂ ವಂತಿಗೆ ನೀಡುತ್ತದೆ.

ಪ್ರಯೋಜನಗಳು: 60 ವರ್ಷದ ನಂತರ ಮಾಸಿಕ ₹3,000 ಪಿಂಚಣಿ. ಫಲಾನುಭವಿಯ ಮರಣದ ನಂತರ, ಸಂಗಾತಿಗೆ ₹1,500 ಕುಟುಂಬ ಪಿಂಚಣಿ ಸಿಗುತ್ತದೆ.

ಅರ್ಹತೆಯ ಮಾನದಂಡಗಳು: ಮಾಸಿಕ ಆದಾಯ ₹15 ಸಾವಿರ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಆದಾಯ ತೆರಿಗೆ, ಇಎಸ್ ಐ, ಪಿಎಫ್ , ಎನ್ ಪಿಎಸ್ ಯೋಜನೆ ವ್ಯಾಪ್ತಿಗೆ ಒಳಪಟ್ಟಿರಬಾರದು.