ಮನೆಯಲ್ಲಿ 3 ವರ್ಷದ ಹೆಣ್ಣು ಮಗುವೊಂದು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆಯಲ್ಲಿ 3 ವರ್ಷದ ಹೆಣ್ಣು ಮಗುವೊಂದು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ತೋಟಗುಡ್ಡದಹಳ್ಳಿ ನಿವಾಸಿ ನಿಕ್ಷಿತಾ (3) ಮೃತ ದುರ್ದೈವಿ. ಈ ಸಂಬಂಧ ಮೃತಳ ತಂದೆ ಜಗದೀಶ್ ಹಾಗೂ ಆತನ ಗೆಳತಿ ಗಿರಿಜಾ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ. ಮನೆಯಲ್ಲಿ ಬೆಳಗ್ಗೆ ಮಗು ಮೃತಪಟ್ಟಿತು. ಆದರೆ ಆಕೆಯ ಅಂತ್ಯಕ್ರಿಯೆಗೆ ಮೃತಳ ಪೋಷಕರು ಮುಂದಾಗಿದ್ದರು. ಅಷ್ಟರಲ್ಲಿ ಪೊಲೀಸರಿಗೆ ಮಗು ಸಾವಿನ ಕುರಿತು ಮೃತಳ ಸೋದರತ್ತೆ ಅಶಾ ಮಾಹಿತಿ ನೀಡಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್, ತನ್ನ ಕುಟುಂಬದ ಜತೆ ನೆಲೆಸಿದ್ದರು. ಅನಾರೋಗ್ಯದ ಹಿನ್ನಲೆಯಲ್ಲಿ ಅವರ ಮೊದಲ ಪತ್ನಿ ಮೃತಪಟ್ಟಿದ್ದರು. ಇದಾದ ನಂತರ ಗಿರಿಜಾ ಜತೆ ಜಗದೀಶ್ ಸಹ ಜೀವನ ನಡೆಸುತ್ತಿದ್ದರು. ಹಲವು ದಿನಗಳಿಂದ ಮಧುಮೇಹ ಕಾಯಿಲೆಯಿಂದ ನಿಕ್ಷಿತಾ ನರಳುತ್ತಿದ್ದಳು. ಈ ಅನಾರೋಗ್ಯ ಹಿನ್ನಲೆಯಲ್ಲಿ ಮಗು ಮೃತಪಟ್ಟಿರಬಹುದು ಎಂದು ಅನುಮಾನವಿದೆ.

ಮನೆಯಲ್ಲಿ ಬೆಳಗ್ಗೆ ಕುಸಿದು ಬಿದ್ದು ಮಗು ಸಾವನ್ನಪ್ಪಿದೆ. ಕೂಡಲೇ ತಮ್ಮ ಸಂಬಂಧಿಕರಿಗೆ ಮಗಳು ಸಾವನ್ನಪ್ಪಿದ್ದಾಳೆ ಎಂದು ತಿಳಿಸಿ ಅಂತ್ಯಕ್ರಿಯೆಗೆ ಜಗದೀಶ್ ಮುಂದಾಗಿದ್ದರು. ಆದರೆ ಮಗುವಿನ ಸೋದರತ್ತೆ ಅಶಾ ವಿರೋಧಿಸಿದ್ದಾರೆ. ಮನೆಯಲ್ಲಿ ಹೊಡೆದು ಮಗುವನ್ನು ಕೊಂದು ಅಂತ್ಯಕ್ರಿಯೆ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ಅವರು ತಿಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೃತದೇಹದ ಹಳೇ ಗಾಯದ ಗುರುತು

ಮೃತ ಮಗುವಿನ ಮೃತದೇಹ ಮೇಲೆ ಹಳೇ ಗಾಯದ ಗುರುತುಗಳು ಪತ್ತೆಯಾಗಿವೆ. ಹೀಗಾಗಿ ಮಗುವಿನ ಈ ಹಿಂದೆ ಹಲ್ಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.