ಕನ್ನಡಪ್ರಭ ವಾರ್ತೆ ಬೆಂಗಳೂರು

ಮದ್ಯದ ಅಮಲಿನಲ್ಲಿ ಯುವತಿ ಮನೆಗೆ ಮಧ್ಯರಾತ್ರಿ ಹೋಗಿ ಬಾಗಿಲು ಬಡಿದಾಗ ಆಕೆ ಪೋಷಕರು ಹೊರಬರುತ್ತಿದ್ದಂತೆ ಭಯದಿಂದ ಪರಾರಿಯಾಗುವ ಯತ್ನದಲ್ಲಿ ಮೊದಲನೇ ಮಹಡಿಯಿಂದ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಾರಕ್ಕಿ ನಿವಾಸಿ ಮಹದೇವಸ್ವಾಮಿ (21) ಮೃತ ಯುವಕ ಆದರೆ ತಮ್ಮ ಮಗನ್ನು ಯುವತಿಯ ಕುಟುಂಬದವರು ಹತ್ಯೆ ಮಾಡಿದ್ದಾರೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ.

ಘಟನೆ ವಿವರ:

ಮಹದೇವಸ್ವಾಮಿ, ಡೆಲವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದು, ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ. ಆದರೆ ಆತನ ಪ್ರೇಮವನ್ನು ವಿದ್ಯಾರ್ಥಿನಿ ನಿರಾಕರಿಸಿದ್ದಳು. ತನ್ನ ಮಗಳ ಹಿಂದೆ ಬಿದ್ದಿದ್ದಾನೆ ಎಂದು ಮಹದೇವಸ್ವಾಮಿ ವಿರುದ್ಧ ಯುವತಿ ಕುಟುಂಬದವರಿಗೆ ಸಿಟ್ಟಿತ್ತು.


ಆ.5ರಂದು ರಾತ್ರಿ ಮಹದೇವಸ್ವಾಮಿ ತನ್ನ ಸ್ನೇಹಿತನ ಹುಟ್ಟುಹಬ್ಬದ ಆಚರಣೆ ಇದೆ ಎಂದು ಗೆಳೆಯರ ಜತೆ ಆತ ಪಾರ್ಟಿ ಮಾಡಿದ್ದಾನೆ. ಕಂಠಮಟ ಮದ್ಯ ಸೇವಿಸಿದ ಮಹದೇವಸ್ವಾಮಿ, ಕುಡಿದ ಮತ್ತಿನಲ್ಲಿ ಯುವತಿ ಮನೆಗೆ ತೆರಳಿ ರಾತ್ರಿ 12.30ರ ಸುಮಾರಿಗೆ ಬಾಗಿಲು ಬಡಿದಿದ್ದಾನೆ. ಮೊದಲನೇ ಮಹಡಿಯಲ್ಲಿದ್ದ ಆಕೆಯ ಮನೆಗೆ ಪಕ್ಕದ ನಿರ್ಮಾಣ ಹಂತದ ಕಟ್ಟಡದ ಮೂಲಕೇ ಆತ ಪ್ರವೇಶಿಸಿದ್ದಾನೆ.

ತಮ್ಮ ಮನೆ ಬಾಗಿಲು ಮಧ್ಯೆ ರಾತ್ರಿಯಲ್ಲಿ ಯಾರು ಬಡಿದ್ದಾರೆ ಎಂದು ಆತಂಕಗೊಂಡು ಯುವತಿ ಹೊರ ಬಂದಿದ್ದಾರೆ. ಮನೆ ಬಾಗಿಲು ತೆರೆದು ಯುವತಿ ಪೋಷಕರು ಹೊರಗೆ ಬರುತ್ತಿದ್ದಂತೆ ಭೀತಿಗೊಂಡು ಮಹದೇವಸ್ವಾಮಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಮಹಡಿಯಿಂದ ಆಯ ತಪ್ಪಿ ಆತ ಬಿದ್ದಾಗ ಗಂಭೀರ ಪೆಟ್ಟಾಗಿ ಕೊನೆ ಉಸಿರೆಳೆದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಮಗನ ಕೊಲೆ-ಪೋಷಕರ ಆರೋಪ

ತಮ್ಮ ಮಗನನ್ನು ಯುವತಿಯ ಪೋಷಕರೇ ಕೊಂದು ಬೇರೆಡೆ ಮೃತದೇಹ ಬಿಸಾಡಿದ್ದಾರೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ. ನನ್ನ ಮಗನನ್ನು ಆ ಯುವತಿ ಪ್ರೀತಿಸುತ್ತಿದ್ದಳು. ಈ ಪ್ರೇಮ ವಿಚಾರಕ್ಕೆ ಆಕೆಯ ಪೋಷಕರು ವಿರೋಧಿಸಿದ್ದರು. ಅಂದು ಆ ಯುವತಿ ಕರೆ ಮೇರೆಗೆ ಅವರ ಮನೆಗೆ ಮಹದೇವಸ್ವಾಮಿ ಹೋಗಿದ್ದನು. ನನ್ನ ಮಗನನ್ನು ಕರೆಸಿ ಆಕೆಯ ಪೋಷಕರು ಹತ್ಯೆ ಮಾಡಿರಬಹುದು ಎಂದು ಮೃತನ ಮಹದೇವಸ್ವಾಮಿ ಕುಟುಂಬದವರು ದೂರಿದ್ದಾರೆ.