ಗುತ್ತಲ ಪಟ್ಟಣಕ್ಕೆ ನಿರಂತರ ಕುಡಿಯುವ ನೀರಿನ ಯೋಜನೆ: ರುದ್ರಪ್ಪ ಲಮಾಣಿ

| Published : Feb 06 2024, 01:31 AM IST

ಗುತ್ತಲ ಪಟ್ಟಣಕ್ಕೆ ನಿರಂತರ ಕುಡಿಯುವ ನೀರಿನ ಯೋಜನೆ: ರುದ್ರಪ್ಪ ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಗುತ್ತಲ ಪಟ್ಟಣಕ್ಕೆ ನಿರಂತರ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ.18ರಂದು ಶಂಕುಸ್ಥಾಪನೆ ಮಾಡಲಿದ್ದಾರೆ.

18ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ: ವಿಧಾನಸಭೆ ಉಪಾಧ್ಯಕ್ಷ

ಕನ್ನಡಪ್ರಭ ವಾರ್ತೆ ಗುತ್ತಲ

ಗುತ್ತಲ ಪಟ್ಟಣಕ್ಕೆ ನಿರಂತರ ಕುಡಿಯುವ ನೀರಿನ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ.18ರಂದು ಶಂಕುಸ್ಥಾಪನೆ ಮಾಡಲಿದ್ದಾರೆಂದು ವಿಧಾನಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ಪಟ್ಟಣದ 5-12ನೇ ವಾರ್ಡ್‌ ವ್ಯಾಪ್ತಿಯ ಹೇಮಗಿರಿಮಠದ ಹತ್ತಿರ ಸಿಸಿ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಾಗೂ 15ನೇ ಹಣಕಾಸು ಸಾಮಾನ್ಯ ಮೂಲ ಅನುದಾನ ₹112 ಲಕ್ಷ ಹಾಗೂ ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾಡಿ ₹40 ಲಕ್ಷ ಅನುದಾನದ ಅಡಿಯಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳ ಅಭಿವೃದ್ದಿ ಕಾರ್ಯಗಳಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಗುತ್ತಲ ಪಟ್ಟಣಕ್ಕೆ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಇದನ್ನು ಶಾಶ್ವತವಾಗಿ ನಿವಾರಣೆ ಮಾಡುವ ನಿಟ್ಟಿನಲ್ಲಿ 24x7 ಮಾದರಿಯಲ್ಲಿ ಗುತ್ತಲದ ಜನತೆಗೆ ನೀರು ಪೂರೈಸುವ ನಿಟ್ಟಿನಲ್ಲಿ ಈಗಾಗಲೇ ₹41.52 ಕೋಟಿ ಮಂಜೂರಾಗಿದ್ದು, ಒಂದು ಇಂಟೆಕ್ ವೆಲ್, ಜಾಕ್ ವೆಲ್, ಪಂಪಿಂಗ್ ಮಶನರಿ, ಫಿಲ್ಟರ್ ಹೌಸ್, 2 ನೀರಿನ ಟ್ಯಾಂಕ್ ನಿರ್ಮಾಣದ ಜೊತೆಗೆ ಒತ್ತಡ ಯುಕ್ತ ಕುಡಿಯುವ ನೀರಿನ ಪೈಪ್ ಲೈನ್‌ಗಳನ್ನು ಅಳವಡಿಸಲಾಗುವುದು. ಇದರಿಂದ ಪಟ್ಟಣದ ಎಲ್ಲ 18 ವಾರ್ಡ್‌ಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸಬಹುದಾಗಿದೆ ಎಂದರು.

ಪಟ್ಟಣದ ಅಭಿವೃದ್ದಿಗೆ ಅನೇಕ ಯೋಜನೆ ಹಾಕಿಕೊಳ್ಳಲಾಗಿದ್ದು ಗುತ್ತಿಗೆದಾರರು ಗುಣ ಮಟ್ಟದ ಕಾಮಗಾರಿ ಮಾಡಬೇಕು. ಕಳಪೆ ಕೆಲಸದ ಬಗ್ಗೆ ದೂರು ಬಂದಲ್ಲಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಪಟ್ಟಣದ ಬಸ್ ನಿಲ್ದಾಣದಿಂದ 2 ಕಿಮೀ ದೂರದ ಎಲ್ಲ 4 ದಿಕ್ಕಿನಲ್ಲೂ ದ್ವೀಪಥ ರಸ್ತೆ ನಿರ್ಮಾಣ ಮಾಡಲಾಗುವುದು ಎಂದರು.

ಈ ಸಂದರ್ಭಲ್ಲಿ ಪಪಂ ಸದಸ್ಯರಾದ ಭರಮಪ್ಪ ಹಾದಿಮನಿ, ಪ್ರದೀಪ ಸಾಲಗೇರಿ, ಬಸಣ್ಣ ನೆಗಳೂರ, ಮಹ್ಮದಹನೀಫ ರಿತ್ತಿ, ಜಿಪಂ ಮಾಜಿ ಸದಸ್ಯ ಸಿ.ಬಿ. ಕುರವತ್ತಿಗೌಡರ, ಆಶ್ರಯ ಕಮಿಟಿ ಮಾಜಿ ಅಧ್ಯಕ್ಷ ಶಹಜಾನಸಾಬ ಅಗಡಿ, ಪಪಂ ಮಾಜಿ ಉಪಾಧ್ಯಕ್ಷ ನಾಗರಾಜ ಎರಿಮನಿ, ಅರ್ಬನ್ ಬ್ಯಾಂಕ್ ನಿರ್ದೇಶಕ ರುದ್ರಪ್ಪ ಹಾದಿಮನಿ, ಲಿಂಗೇಶ ಬೆನ್ನೂರ, ಗುಡ್ಡಪ್ಪ ಗೊರವರ, ನಿಂಗರಾಜ ನಾಯಕ, ಶಿವಣ್ಣ ಬಂಡಿವಡ್ಡರ, ಮಂಜುನಾಥ ದಪ್ಪೇರ, ನಾಗರಾಜ ಕೋಣನವರ, ಸಂತೋಷ ನಾಯಕ, ವಿಜಯ ಚಲವಾದಿ, ವಿನೋದ ಗುತ್ತಲ, ಸೈಫುಲ್ಲಾ ಜಡದಿ, ಫೀರಸಾಬ ಹಾನಗಲ್, ನಾಗಪ್ಪ ಇಚ್ಚಂಗಿ, ಪಪಂ ಮುಖ್ಯಾಧಿಕಾರಿ ಡಾ. ದೇವಾನಂದ ದೊಡ್ಡಮನಿ, ಎಂಜಿನಿಯರ್ ಸುರೇಶ ಚಲವಾದಿ ಸೇರಿದಂತೆ ಅನೇಕರಿದ್ದರು.