ಸಾರಾಂಶ
ಉಡುಪಿಯಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೋಟಿ ಜಪ ಯಜ್ಞದ ಅಂಗವಾಗಿ ವಿಶ್ವಾದ್ಯಂತ ಇರುವ ಶ್ರೀಕೃಷ್ಣ ಭಕ್ತರಿಗೆ ಸಾಮೂಹಿಕ ‘ಸ್ವಾಮಿ ಶ್ರೀ ಕೃಷ್ಣಾಯ ನಮಃ’ ಮಂತ್ರೋಪದೇಶ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶುಕ್ರವಾರದಿಂದ ನಡೆಯುವ 48 ದಿನಗಳ ಮಂಡಲೋತ್ಸವದ ಪ್ರಯುಕ್ತ ಮುಂಜಾನೆ ಸೂರ್ಯೋದಯ ಕಾಲದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೋಟಿ ಜಪ ಯಜ್ಞದ ಅಂಗವಾಗಿ ವಿಶ್ವಾದ್ಯಂತ ಇರುವ ಶ್ರೀಕೃಷ್ಣ ಭಕ್ತರಿಗೆ ಸಾಮೂಹಿಕ ‘ಸ್ವಾಮಿ ಶ್ರೀ ಕೃಷ್ಣಾಯ ನಮಃ’ ಮಂತ್ರೋಪದೇಶ ನೀಡಿದರು. ಶ್ರೀಪಾದರ ಉಪದೇಶದ ನಂತರ ರಾಜಾಂಗಣದಲ್ಲಿ ನೆರೆದಿದ್ದ ಭಕ್ತರು 108 ಬಾರಿ ಶ್ರೀ ಕೃಷ್ಣ ಮಂತ್ರ ಪಠಣ ಮಾಡಿದರು. ಇದಕ್ಕೂ ಮುನ್ನ ಶ್ರೀ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಅವರು ದೀಪ ಬೆಳಗುವುದರ ಮೂಲಕ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಉದ್ಘಾಟಿಸಿದರು.ಮಂಡಲೋತ್ಸವದ ಅಂಗವಾಗಿ ವಿವಿಧ ಯೋಗ ಸಂಸ್ಥೆಗಳ ಯೋಗಾರ್ಥಿಗಳು 48 ಸೂರ್ಯ ನಮಸ್ಕಾರ ಮಾಡಿದರು. ಶ್ರೀ ರಾಘವೇಂದ್ರ ಭಟ್ ಪಣಿಯಾಡಿ ಯವರು ಸ್ವಾಗತಿಸಿದರು. ವಿದ್ವಾನ್ ಗೋಪಾಲಾಚಾರ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು. ರಮೇಶ್ ಭಟ್ ಧನ್ಯವಾದ ವಿತ್ತರು.ಇದೇ ಸಂದರ್ಭ ರಾಜಾಂಗಣದಲ್ಲಿ 48 ದಿನಗಳ ಕಾಲ ನಡೆಯುವ ಭಜನಾ ಮಂಡಲೋತ್ಸವ, ವೇಣು ವಾದನ ಮಂಡಲೋತ್ಸವ ಮತ್ತು ವಿದ್ವಾಂಸರಿಂದ ನಿರಂತರ ಪ್ರವಚನ - ಉಪನ್ಯಾಸಗಳ ಜ್ಞಾನ ಮಂಡಲೋತ್ಸವವೂ ಆರಂಭವಾಯಿತು.