ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಮಧ್ಯಪ್ರಾಚ್ಯ ಯುದ್ಧ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆ ಮಾಡಿ ದೇಶವನ್ನು ಸಂಕಷ್ಟದಿಂದ ಪಾರು ಮಾಡಿ ಎಂದು ಕರೆಯ ಹಿನ್ನೆಲೆ ಅಮರೇಶ್ವರ ಬೃಹನ್ಮಠದ ಡಾ.ನೀಲಕಂಠ ಶಿವಾಚಾರ್ಯ ಸ್ವಾಮೀಜಿಗಳು ತಮ್ಮ ನಿತ್ಯದ ಕೆಲಸ, ಧಾರ್ಮಿಕ ಸಭೆ ಸಮಾರಂಭಗಳಿಗೆ ಹೋಗಲು ಕಾರು ಬಿಟ್ಟು ಟಂ ಟಂ ವಾಹನದಲ್ಲಿ ಸಂಚರಿಸಿ, ಇತರರಿಗೆ ಮಾದರಿಯಾಗಿದ್ದಾರೆ.

ಎರಡ್ಮೂರು ದಿನಗಳಿಂದ ಡಾ.ನೀಲಕಂಠ ಶ್ರೀಗಳು ಎಲ್ಲೆ ಸಭೆ-ಸಮಾರಂಭ, ಪೂಜೆ ಧಾರ್ಮಿಕ ಕಾರ್ಯಕ್ರಮಗಳಿಗೆ ಟಂ ಟಂ ವಾಹನವನ್ನೇ ಬಳಸುತ್ತಿದ್ದಾರೆ.

ಈ ಕುರಿತು ಮಾತನಾಡಿದ ಡಾ.ನೀಲಕಂಠ ಶ್ರೀಗಳು, ಮೋದಿಯವರು ಪೆಟ್ರೋಲ್, ಡಿಸೇಲ್ ಬಳಕೆ ಮಾಡಿ ದೇಶಪ್ರೇಮ ಮೆರೆಯಿಸಿ ಎಂದು ಕರೆ ನೀಡಿದ್ದಾರೆ. ನಮಗೂ ಸಹ ಅದು ನಿಜ ಎನಿಸಿತು. ಇಂತಹ ಸಂಕಷ್ಟದ ಸಮಯದಲ್ಲಿ ದೇಶದ ಆರ್ಥಿಕತೆ ಉಳಿಸುವ ಸಲುವಾಗಿ ಡೀಸೆಲ್‌, ಪೇಟ್ರೋಲ್ ಕಡಿಮೆ ಬಳಸಿದರೆ ಉತ್ತಮ. ಸಾರ್ವಜನಿಕರು, ಯುವಕರು ಸಹ ಅನವಶ್ಯಕವಾಗಿ ತಿರುಗಾಡಿ ಪೇಟ್ರೋಲ್ ಹಾಳು ಮಾಡದೇ ಮಿತವಾಗಿ ಬಳಸಿ ದೇಶದ ಆರ್ಥಿಕ ಭದ್ರತೆಗೆ ಸಹಕಾರ ನೀಡಬೇಕೆಂದರು.