ಮೂಲ್ಕಿ: ಯುವ ಸಮುದಾಯಯ ದೇಶದ ಭವಿಷ್ಯವಾಗಿದ್ದು ತಮ್ಮ ಸೇವಾ ಸಂಸ್ಥೆಗಳ ಮೂಲಕ ಶಿಕ್ಷಣ, ಕ್ರೀಡೆ ಸಹಿತ ಅನೇಕ ಸಮಾಜಮುಖಿ ಕಾರ್ಯಗಳು ನಡೆಯುತ್ತಿದ್ದು ಕಿನ್ನಿಗೋಳಿಯ ವಿಶೇಷ ಚೇತನ ಶಾಲೆಗೆ ಪ್ರೇರಣಾ ಶಕ್ತಿಯಾಗಿ ನಿರಂತರವಾಗಿ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ಡಾ.ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಹೇಳಿದರು.

ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ ಕಿನ್ನಿಗೋಳಿ ಸೈಂಟ್ ಮೇರೀಸ್ ಸ್ಪೆಷಲ್ ಸ್ಕೂಲ್, ಚರ್ಚ್ ಬಳಿ ನಡೆದ ದಕ್ಷಿಣ ಕನ್ನಡ- ಉಡುಪಿ ಜಿಲ್ಲಾ ಮಟ್ಟದ ಪುರುಷರ ಮತ್ತು ಮಹಿಳೆಯರ ಹಗ್ಗ-ಜಗ್ಗಾಟ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕಿನ್ನಿಗೋಳಿ ಕೊಸಸಾಂವ್ ಚರ್ಚ್ ನ ಧರ್ಮ ಗುರುಗಳಾದ ಫಾ.ಜೋಕಿಂ ಫೆರ್ನಾಂಡಿಸ್ ಸ್ಪರ್ಧೆಯನ್ನು ಉದ್ಘಾಟಿಸಿದರು. ಸ್ಪರ್ಧೆಯ ಹಸಿರು ನಿಶಾನೆಯನ್ನು ಬಿಜೆಪಿಯ ದ.ಕ.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನೆರವೇರಿಸಿದರು. ಮೂಡುಬಿದಿರೆ ಕ್ಷೇತ್ರದ ಬಿಜೆಪಿಯ ಮಂಡಲಾಧ್ಯಕ್ಷ ದಿನೇಶ್‌ ಪುತ್ರನ್‌, ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಅಧ್ಯಕ್ಷ ಗುರುರಾಜ ಮಲ್ಲಿಗೆಯಂಗಡಿ, ಸದಸ್ಯರಾದ ಪ್ರಕಾಶ್ ಆಚಾರ್ಯ, ಪ್ರಣೀಕ್ ಕೋಟ್ಯಾನ್, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಜೋಸೆಫ್ ಕ್ವಾಡ್ರಸ್, ಕಿನ್ನಿಗೋಳಿ ರೋಟರಿ ಕ್ಲಬ್‌ ಅಧ್ಯಕ್ಷ ಸಾಯಿನಾಥ ಶೆಟ್ಟಿ, ನಿವೃತ್ತ ಉಪನ್ಯಾಸಕ ಸೋಂದಾ ಭಾಸ್ಕರ ಭಟ್, ನಿಡ್ಡೋಡಿ ದುರ್ಗಾದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭಾಸ್ಕರಾ ದೇವಸ್ಯ, ಉದ್ಯಮಿ ಅಭಿಲಾಶ್ ಶೆಟ್ಟಿ ಕಟೀಲು, ತೋಕೂರು ಶ್ರೀದೇವಿ ಮಹಿಳಾ ಮಂಡಳಿ, ಅಧ್ಯಕ್ಷೆ ವಿಲಾಸಿನಿ ಮೆಂಡನ್‌ , ಕಿನ್ನಿಗೋಳಿ ಸೈಂಟ್ ಮೇರೀಸ್ ಸ್ಪೆಷಲ್ ಸ್ಕೂಲ್ ಕಾರ್ಯದರ್ಶಿ ಶೈಲಾ ಸಿಕ್ವೇರಾ, ಜೆ ಬಿ ಫ್ರೆಂಡ್ಸ್‌ ಅಧ್ಯಕ್ಷ ಸಂತೋಷ್ ಶೆಟ್ಟಿ, ಸೇವಾ ಸಂಸ್ಥೆ ಸಂಚಾಲಕರಾದ ನರಸಿಂಹ ಮಡಿವಾಳ, ಮೂಲ್ಕಿ ಪ್ರೆಸ್‌ ಕ್ಲಬ್‌ ಪ್ರಧಾನ ಕಾರ್ಯದರ್ಶಿ ಪುನೀತ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಸೇವಾ ಸಂಸ್ಥೆಯ ಸಂಚಾಲಕ ಶರತ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು, ಶ್ರೀಶ ಸರಾಫ್ ಐಕಳ ವಂದಿಸಿದರು.