ಪಶ್ಚಿಮ ಘಟ್ಟ ಉಳಿಸುವ ಹೋರಾಟದಂತೆ ಕರಾವಳಿ, ಅಘನಾಶಿನಿ-ಬೇಡ್ತಿ ನದಿ, ಶರಾವತಿ ಕಣಿವೆ ಸಂರಕ್ಷಣೆಗೆ ಇನ್ನಷ್ಟು ವಿಸ್ತೃತ ಜನಾಂದೋಲನ ನಡೆಸಬೇಕಾಗಿದೆ.

ಬೇಡ್ತಿ-ಅಘನಾಶಿನಿ ಸಮಿತಿಯಿಂದ ಮೀನುಗಾರರು, ರೈತರು, ಸಂಘ ಸಂಸ್ಥೆಗಳು, ವಿಜ್ಞಾನಿಗಳ ವಿಶೇಷ ಸಭೆಕನ್ನಡಪ್ರಭ ವಾರ್ತೆ ಕುಮಟಾ

ಪಶ್ಚಿಮ ಘಟ್ಟ ಉಳಿಸುವ ಹೋರಾಟದಂತೆ ಕರಾವಳಿ, ಅಘನಾಶಿನಿ-ಬೇಡ್ತಿ ನದಿ, ಶರಾವತಿ ಕಣಿವೆ ಸಂರಕ್ಷಣೆಗೆ ಇನ್ನಷ್ಟು ವಿಸ್ತೃತ ಜನಾಂದೋಲನ ನಡೆಸಬೇಕಾಗಿದೆ ಎಂದು ಶ್ರೀಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಕರೆ ನೀಡಿದರು.

ತಾಲೂಕಿನ ಹೆಗಡೆ ಗ್ರಾಮದ ಶಾಂತಿಕಾಂಬಾ ದೇವಸ್ಥಾನದ ಸಭಾಗೃಹದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಬೇಡ್ತಿ-ಅಘನಾಶಿನಿ ಸಮಿತಿಯಿಂದ ಮೀನುಗಾರರು, ರೈತರು, ಸಂಘ ಸಂಸ್ಥೆಗಳು, ವಿಜ್ಞಾನಿಗಳ ವಿಶೇಷ ಸಭೆಯ ಸಾನಿಧ್ಯ ವಹಿಸಿ ಶ್ರೀಗಳು ಸಂದೇಶ ನೀಡಿದರು.

ಘಟ್ಟದ ಮೇಲೆ ನಡೆದ ಬೇಡ್ತಿ-ಅಘನಾಶಿನಿ ಸಮಾವೇಶ ಗಟ್ಟಿ ಸಂದೇಶವನ್ನು ಸರ್ಕಾರಕ್ಕೆ ನೀಡಿದೆ. ಅದೇ ರೀತಿ ಕರಾವಳಿ ಜನತೆ ಅಘನಾಶಿನಿ-ಗಂಗಾವಳಿ ನದಿ ತಿರುವು ಯೋಜನೆಗಳ ವಿರುದ್ಧ ಬೃಹತ್ ಜನಾಂದೋಲನ ನಡೆಸಬೇಕು. ಎಲ್ಲ ಸಮುದಾಯಗಳು ಒಟ್ಟಾಗಿ ಎದ್ದು ನಿಲ್ಲಬೇಕು ಎಂದರು.

ಬೇಡ್ತಿ-ಅಘನಾಶಿನಿ ನದಿ ಸಂರಕ್ಷಣೆ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮಾತನಾಡಿ, ಅಘನಾಶಿನಿ ನದಿ ತೀರದ ಪಂಚಾಯತ್ ಮಟ್ಟದಲ್ಲಿ ಸಂಪರ್ಕ ಜಾಥಾ ನಡೆಸುವ ಕುರಿತು ಪ್ರಸ್ತಾಪಿಸಿದರು. ಸಂಚಾಲಕರಾದ ಎಂ.ಜಿ. ಭಟ್ ಹಾಗೂ ಡಾ. ಸುರೇಶ ಹೆಗಡೆ ಮಾತನಾಡಿ, ಈಗಾಗಲೇ ಶಾಸಕರ ಉಪಸ್ಥಿತಿಯಲ್ಲಿ ಸಭೆ ಮಾಡಿದ್ದೇವೆ. ಫೆ. ೯ರಂದು ಧರಣಿ ನಡೆಸಲಿದ್ದೇವೆ ಎಂದು ಸಭೆಗೆ ಮಾಹಿತಿ ನೀಡಿದರು.

ವಿಜ್ಞಾನಿಗಳಾದ ಡಾ. ವಿ.ಎನ್. ನಾಯ್ಕ, ಡಾ. ಮಹಾಬಲೇಶ್ವರ, ಡಾ. ಪ್ರಕಾಶ, ವಿಕಾಸ ತಾಂಡೇಲ ಇತರರು ಅಘನಾಶಿನಿ ಕಣಿವೆ ಉಳಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಹಿರಿಯ ಜೀವವೈವಿಧ್ಯ ವಿಜ್ಞಾನಿ ಡಾ. ಸುಭಾಸ್‌ಚಂದ್ರನ್, ಅಘನಾಶಿನಿ ಕುರಿತು ವಿಜ್ಞಾನಿಗಳ ಕಾರ್ಯಾಗಾರವನ್ನು ಮಾರ್ಚ್‌ನಲ್ಲಿ ಮಾಡುತ್ತೇವೆ ಎಂದರು.

ಸಭೆಯಲ್ಲಿ ಶಿವರಾತ್ರಿಯಂದು ಅಘನಾಶಿನಿ ನದಿ ಪೂಜೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಮುರುಳೀಧರ ಪ್ರಭು, ಸುಬ್ರಾಯ ನಾಯ್ಕ, ಉಲ್ಲಾಸ ನಾಯ್ಕ, ವಿನೋದ ಪ್ರಭು, ಆನಂದು ನಾಯ್ಕ ಇತರರು ಪಾಲ್ಗೊಂಡಿದ್ದರು.