ಕನ್ನಡಪ್ರಭವಾರ್ತೆ ತುರುವೇಕೆರೆ

ರಾಷ್ಟ್ರೀಯ ಕೃಷಿ ಪರಿಕರ ಮಾರಾಟಗಾರರ ಸಂಘ ನೀಡಿದ ಕರೆಯ ಮೇರೆಗೆ ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಸಂಘ ತಮ್ಮ ವ್ಯಾಪಾರ ವಹಿವಾಟನ್ನು ಸೋಮವಾರ ಬಂದ್ ಮಾಡಿದರು.

ತಾಲೂಕು ಮಾರಾಟಗಾರರ ಸಂಘದ ಅಧ್ಯಕ್ಷ ರಂಗನಾಥ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಸಗೊಬ್ಬರ ಉತ್ಪಾದಕರು ವ್ಯಾಪಾರಸ್ಥರಿಗೆ ಲಿಂಕ್ ಪ್ರಾಡಕ್ಟ್ ಗಳನ್ನು ಕಡ್ಡಾಯಗೊಳಿಸಬಾರದು. ರಸಗೊಬ್ಬರ ಉತ್ಪಾದಕರು ಸಾಗಾಣಿಕೆ ಮತ್ತು ಸರಕುಗಳ ವೆಚ್ಚವನ್ನು ಭರಿಸಬೇಕು. ರಸಗೊಬ್ಬರಗಳ ಮೇಲಿನ ಗರಿಷ್ಠ ಮೊತ್ತಕ್ಕೆ ಕನಿಷ್ಠ ಶೇಕಡಾ 8 ರಷ್ಟು ಲಾಭಾಂಶ ನೀಡಬೇಕು. ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರಗಳಿಗೆ ಕನಿಷ್ಠ 50 ರು. ಲಾಭಾಂಶ ನೀಡಬೇಕು. ರಸಗೊಬ್ಬರದ ಚೀಲಗಳನ್ನು ಭದ್ರಪಡಿಸಬೇಕು. ಈಗ ಜಾರಿಗೆ ತಂದಿರುವ ಎಫ್ ಐ ಡಿ ವ್ಯವಸ್ಥೆ ಜಾರಿಗೊಳಿಸಲು ಸಮಯಾವಕಾಶ ನೀಡಬೇಕು. ತಾಂತ್ರಿಕ ತೊಂದರೆ ಆಗ್ಗಾಗ್ಗೆ ಸಂಭವಿಸುತ್ತಿವೆ. ಇದಕ್ಕೆ ಪರಿಹಾರ ಕಂಡು ಹಿಡಿಯಬೇಕು. ಪರಿಕರಗಳ ಸ್ಯಾಂಪಲ್ ಡ್ರಾ ಮಾಡಿದ ವೇಳೆ ಒಂದನೇ ಪಾರ್ಟಿಯಾಗಿ ಕಂಪನಿಗಳನ್ನೇ ಹೊಣೆ ಮಾಡಬೇಕು. ಗಣಕ ಯಂತ್ರದಲ್ಲಿ ಆಗುತ್ತಿರುವ ಸಮಸ್ಯೆಯನ್ನು ಕೂಡಲೇ ಶಮನ ಮಾಡಬೇಕು. ರಸಗೊಬ್ಬರದ ಮಾರಾಟ ದರ ಕಡಿಮೆಯಾದಲ್ಲಿ ಗೊಬ್ಬರ ತಯಾರಿಕಾ ಕಂಪನಿ ಮಾರಾಟಗಾರರಿಗೆ ಆಗುವ ನಷ್ಟವನ್ನು ತುಂಬಿಕೊಡಬೇಕೆಂದು ಆಗ್ರಹಿಸಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಬಿ.ಪೂಜಾ ಮತ್ತು ಕಂದಾಯ ಇಲಾಖೆಯ ಶಿರಿಸ್ತೇದಾರ್ ಸುನಿಲ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಸಂಘದ ಅಧ್ಯಕ್ಷ ರಂಗನಾಥ್, ಉಪಾಧ್ಯಕ್ಷ ಬಸವರಾಜು, ಖಜಾಂಚಿ ಜವರೇಗೌಡ ಸೇರಿದಂತೆ ಹಲವು ವ್ಯಾಪಾರಸ್ಥರು ಇದ್ದರು.