ಸಾರಾಂಶ
ರಾಣಿಬೆನ್ನೂರು:ರೈತರು ವಾಣಿಜ್ಯ ಬೆಳೆಗಳನ್ನು ಬೆಳೆದಾಗ ಸಿಗುವ ಲಾಭಕ್ಕಿಂತ ಬೀಜೋತ್ಪಾದನೆಯಲ್ಲಿ ಹೆಚ್ಚಿನ ಆದಾಯ ಪಡೆಯಲು ಸಾಧ್ಯ ಎಂದು ಕೃಷಿ ವಿಜ್ಞಾನ ಕೇಂದ್ರದ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಎ. ಎಚ್. ಬಿರಾದಾರ ಹೇಳಿದರು. ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲೆಯ ರೈತರಿಗೆ ಬೀಜೋತ್ಪಾದನೆ ಕುರಿತು ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಾವೇರಿ ಜಿಲ್ಲೆಯು ಬೀಜೋತ್ಪಾದನೆಗೆ ಅನುಕೂಲವಾದ ವಾತಾವರಣವನ್ನು ಹೊಂದಿರುವುದರಿಂದ ಏಷ್ಯಾ ಖಂಡದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ. ಆದ್ದರಿಂದ ಬೀಜೋತ್ಪಾದನೆಯಲ್ಲಿ ಹೆಚ್ಚಿನ ರೈತರು ಪಾಲ್ಗೊಂಡು ಉದ್ಯಮಶೀಲರಾಗಿ ಬೆಳೆಯಬೇಕು ಎಂದರು. ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ್ ಎಚ್. ಎಂ. ಮಾತನಾಡಿ, ಪ್ರತಿಯೊಬ್ಬ ರೈತನಿಗೆ ತಳಿಯ ಶುದ್ಧತೆ ಹೊಂದಿರುವ ಉತ್ತಮ ಮೊಳಕೆ ಒಡೆಯುವ ಸಾಮರ್ಥ್ಯ ಹೊಂದಿರುವ ಬೀಜಗಳು ಬಿತ್ತನೆಗೆ ದೊರಕಬೇಕು. ಬೀಜಗಳು ಕೃಷಿ ಮತ್ತು ತೋಟಗಾರಿಕೆಯಲ್ಲಿ ಅತಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತವೆ. ಪ್ರಸ್ತುತ, ಗುಣಮಟ್ಟದ ಪ್ರಮಾಣಿತ ಬೀಜಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ ಎಂದರು. ಇದಲ್ಲದೆ ಬೀಜೋತ್ಪಾದನೆಯಲ್ಲಿ ಸುರಕ್ಷಿತ ಬೇರ್ಪಡೆ ಅಂತರ, ಬೆರಕೆ ತೆಗೆಯುವುದು, ಬೀಜ ಪರೀಕ್ಷೆ ಮತ್ತು ಪ್ರಮಾಣೀಕರಣ ಕುರಿತು ಮಾಹಿತಿ ನೀಡಿದರು.ಶಿಗ್ಗಾವಿ ಬೈಪ್ ಸಂಸ್ಥೆಯ ಅಧಿಕಾರಿ ಈರಣ್ಣ ಬಾಗೇವಾಡಿ ಮಾತನಾಡಿದರು. ಸೋಯಾಬೀನ್ ಬೆಳೆಯ ಬೀಜೋತ್ಪಾದನೆಯಲ್ಲಿ ಕಳೆ ನಿರ್ವಹಣೆ ಕುರಿತು ಬೇಸಾಯಶಾಸ್ತ್ರದ ವಿಷಯ ತಜ್ಞೆ ಡಾ. ಸಿದ್ಧಗಂಗಮ್ಮ ಕೆ. ಆರ್. ತಿಳಿಸಿದರು. ಮಣ್ಣು ವಿಜ್ಞಾನದ ವಿಷಯ ತಜ್ಞೆ ಡಾ. ರಶ್ಮಿ ಸಿ.ಎಂ. ರೈತರಿಗೆ ಮಣ್ಣು ಮಾದರಿ ಸಂಗ್ರಹಣೆಯನ್ನು ಪದ್ಧತಿ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿ ಮಣ್ಣಿನ ಆರೋಗ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಕೇಂದ್ರದ ಎಲ್ಲಾ ವಿಜ್ಞಾನಿಗಳು, ಸಿಬ್ಬಂದಿ ವರ್ಗ ಹಾಗೂ ಶಿಗ್ಗಾಂವಿ ತಾಲೂಕಿನ ಬೆಳಗಲಿ, ಹಿರೇಬೆಂಡಿಗೇರಿ ಗ್ರಾಮದ ಸುಮಾರು 30 ರೈತರು ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))