ಕಳೆದ ವರ್ಷ ಟೊಮೆಟೋಗೆ ಬಾಧಿಸುತ್ತಿದ್ದ ಭೀಕರ ಎಲೆ ಮುದುರು ರೋಗದಿಂದ ತತ್ತರಿಸಿರುವ ರೈತರು, ಟೊಮೇಟೊ ಬೆಳೆ ಎಂದರೆ ಭಯಭೀತರಾಗಿದ್ದಾರೆ, ಈ ಬಾರಿ ಜಿಲ್ಲಾಡಳಿತ, ಕೃಷಿ, ತೋಟಗಾರಿಕೆ ಮುಂಜಾಗ್ರತವಾಗಿ ಇಂತಹ ಕಂಪನಿಗಳ ನಿಯಂತ್ರಣ ಮಾಡದಿದ್ದರೆ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಟೊಮೆಟೋ ಬೆಳೆಯನ್ನೇ ನಿಷೇಧ ಮಾಡಬೇಕಾದ ಪರಿಸ್ಥಿತಿ ಬರುತ್ತದೆ.

ಕನ್ನಡಪ್ರಭ ವಾರ್ತೆ ಮುಳಬಾಗಲು

ನಕಲಿ ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರ ಕಂಪನಿ ಹಾಗೂ ಮಾರಾಟಗಾರರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಿ ನಕಲಿ ನಿಯಂತ್ರಣಕ್ಕೆ ವಿಶೇಷ ತಂಡ ರಚಿಸಬೇಕೆಂದು ರೈತಸಂಘದಿಂದ ಔಷಧಿ ಬಾಟಲಿಗಳ ಸಮೇತ ಕೃಷಿ ಇಲಾಖೆ ಅಧಿಕಾರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಪ್ರತಿವರ್ಷ ಟೊಮೆಟೋ ಋತುಮಾನ ಪ್ರಾರಂಭವಾದಾಗ ನೂರಾರು ಬಿತ್ತನೆ ಬೀಜ ವಿತರಿಸಲು ಜಿಲ್ಲಾದ್ಯಂತ ಜಾಹೀರಾತು ನೀಡುವ ಕೆಲ ನಕಲಿ ಔಷಧಿ ಕಂಪನಿಗಳ ಆರ್ಭಟ ನಿರಂತರ ನಡೆಯುತ್ತಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿರುವುದು ದುರಾದೃಷ್ಟಕರ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವರ್ಷ ಟೊಮೆಟೋಗೆ ಬಾಧಿಸುತ್ತಿದ್ದ ಭೀಕರ ಎಲೆ ಮುದುರು ರೋಗದಿಂದ ತತ್ತರಿಸಿರುವ ರೈತರು, ಟೊಮೇಟೊ ಬೆಳೆ ಎಂದರೆ ಭಯಭೀತರಾಗಿದ್ದಾರೆ, ಈ ಬಾರಿ ಜಿಲ್ಲಾಡಳಿತ, ಕೃಷಿ, ತೋಟಗಾರಿಕೆ ಮುಂಜಾಗ್ರತವಾಗಿ ಇಂತಹ ಕಂಪನಿಗಳ ನಿಯಂತ್ರಣ ಮಾಡದಿದ್ದರೆ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಟೊಮೆಟೋ ಬೆಳೆಯನ್ನೇ ನಿಷೇಧ ಮಾಡಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.

ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ, ಕೃಷಿ ಇಲಾಖೆಗೆ ಕೂಗಳತೆ ದೂರದಲ್ಲಿರುವ ಸಾಯಿಲಕ್ಷ್ಮೀ ಟ್ರೇಡರ್ಸ್ಸ್ ಮಾಲೀಕರು ಸುಬಿಟೋ ಕಂಪನಿ ಹೆಸರಿನಲ್ಲಿ ೯೪ ಔಷಧಿಗಳನ್ನು ಜಿ೨, ಜಿ೩ ನಕಲಿ ಫಾರಂ ಹೆಸರಿನಲ್ಲಿ ರೈತರನ್ನು ವಂಚಿಸುತ್ತಿದ್ದರೂ ಕೃಷಿ ಅಧಿಕಾರಿಗಳು ಏಕೆ ಕ್ರಮಕೈಗೊಳ್ಳುತ್ತಿಲ್ಲ? ಇದರ ಜೊತೆಗೆ ಗಡಿಭಾಗದ ಔಷಧಿ ವ್ಯಾಪಾರಸ್ಥರು ಆಂಧ್ರದಲ್ಲಿ ನಕಲಿ ಔಷಧಿಗಳನ್ನು ದಾಸ್ತಾನು ಮಾಡಿ ರೈತರಿಗೆ ಅವಧಿ ಮುಗಿದ ಔಷಧಿಗಳನ್ನು ಮಾರಾಟ ಮಾಡುವುದೇಕೆ? ಎಂದು ಪ್ರಶ್ನೆ ಮಾಡಿದರು.

ತಾಲೂಕಿನಾದ್ಯಂತ ನಕಲಿ ಬಯೋ ಔಷಧಿಗಳನ್ನು ಅಕ್ರಮ ದಾಸ್ತಾನು ಮಾಡಿ ರೈತರಿಗೆ ಮಾರುವ ಮೂಲಕ ವಂಚಿಸುತ್ತಿರುವವರ ವಿರುದ್ಧ ಕ್ರಮಕೈಗೊಂಡು ಗುಣಮಟ್ಟದ ಟೊಮೆಟೋ ಬಿತ್ತನೆ ಬೀಜ, ಕೀಟನಾಶಕ ವಿತರಣೆ ಮಾಡಬೇಕೆಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಅಧಿಕಾರಿ, ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಜಿಲ್ಲಾಧ್ಯಕ್ಷ ಕಂಬಳ್ಳಿ ಮಂಜುನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್ ಪಾಷ, ರಾಜ್ಯ ಕಾರ್ಯದರ್ಶಿ ಬಂಗಾರಿ ಮಂಜು, ಭಾಸ್ಕರ್, ರಾಜೇಶ್, ವಿಜಯ್‌ಪಾಲ್, ಶ್ರೀನಿವಾಸ್, ವಿಶ್ವ, ಹೆಬ್ಬಣಿ ಆನಂದರೆಡ್ಡಿ, ಸುಪ್ರೀಂ ಚಲ, ವಿನಯ್, ಶಿವು, ವೇಣು, ಕೇಶವ, ಪದ್ಮಘಟ್ಟ ಧರ್ಮ, ಗಿರೀಶ್, ಅಂಬ್ಲಿಕಲ್ ಮಂಜುನಾಥ್ ಇದ್ದರು.