ರಸ್ತೆಬದಿಯಲ್ಲಿ ತ್ಯಾಜ್ಯ ತಂದು ಹಾಕುವ ಕೈಗಾರಿಕೆಗಳ ವಿರುದ್ಧ ಕೂಡಲೇ ಕ್ರಮ : ಡಿಸಿ

| Published : Aug 17 2024, 01:04 AM IST / Updated: Aug 17 2024, 05:52 AM IST

ಸಾರಾಂಶ

 ಕಾರ್ಖಾನೆಗಳು ಅನಗತ್ಯವಾಗಿ ರಸ್ತೆಬದಿಯಲ್ಲಿ ತ್ಯಾಜ್ಯ ತಂದು ಹಾಕುವುದು ಕಂಡು ಬಂದಲ್ಲಿ ಅಂತಹ ಕೈಗಾರಿಕೆಗಳ ವಿರುದ್ಧ ಕೂಡಲೇ ಸಂಬಂಧಿಸಿದ ಇಲಾಖೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ನೀಡಿದರು.

 ಬೆಳಗಾವಿ :  ಕಾರ್ಖಾನೆಗಳು ಅನಗತ್ಯವಾಗಿ ರಸ್ತೆಬದಿಯಲ್ಲಿ ತ್ಯಾಜ್ಯ ತಂದು ಹಾಕುವುದು ಕಂಡು ಬಂದಲ್ಲಿ ಅಂತಹ ಕೈಗಾರಿಕೆಗಳ ವಿರುದ್ಧ ಕೂಡಲೇ ಸಂಬಂಧಿಸಿದ ಇಲಾಖೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೈಗಾರಿಕೆ ಇಲಾಖೆಯ ವಿವಿಧ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಾನಗರ ಪಾಲಿಕೆಯಿಂದ ಕೈಗಾರಿಕೆ ಪ್ರದೇಶದಲ್ಲಿನ ಕಚೇರಿಗಳ ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಬೇಕು. ಎಣ್ಣೆ, ಕ್ರಾಫ್ಟ್ ವಸ್ತು, ಮರಳು ಸೇರಿದಂತೆ ಇತರೆ ಮಾದರಿಯ ಘನತ್ಯಾಜ್ಯ ವಿಲೇವಾರಿಗೆ ಪಾಲಿಕೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳು ಕ್ರಮ ವಹಿಸುವಂತೆ ತಿಳಿಸಿದರು.

ಕೈಗಾರಿಕಾ ಪ್ರದೇಶದಲ್ಲಿರುವ ವಿವಿಧ ಕಾರ್ಖಾನೆಗಳ ತ್ಯಾಜ್ಯಗಳ ಮರುಬಳಕೆಗೆ ಅವಕಾಶ ಇಲ್ಲ. ಹಾಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿ ಪ್ರಕಾರ ಕಸ ವಿಲೇವಾರಿ ಮಾಡಬೇಕು. ತ್ಯಾಜ್ಯ ವಿಲೇವಾರಿಗೆ ಪಾಲಿಕೆ ಕ್ರಮ ವಹಿಸಬೇಕು ಎಂದು ಅವರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಅಧಿಕಾರಿಗಳು ಕೈಗಾರಿಕೆ ಪ್ರದೇಶದಲ್ಲಿ ಕ್ಯಾಂಟೀನ್, ಹೋಟೆಲ್‌ಗಳ ಕಸ ವಿಲೇವಾರಿಗೆ ಮಾತ್ರ ಪಾಲಿಕೆಯಿಂದ ಅವಕಾಶವಿದೆ. ಇತರೆ ಘನತ್ಯಾಜ್ಯ, ಮರಳು, ಕಟಾವು ಮಾಡಿದ ಇತರೆ ವಸ್ತುಗಳ ವಿಲೇವಾರಿಗೆ ಪಾಲಿಕೆಗೆ ಹೆಚ್ಚಿನ ಖರ್ಚು ವೆಚ್ಚ ತಗಲುವುದರಿಂದ ಅದನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಘಟಕಕ್ಕೆ ಬಂಡವಾಳ ಹೂಡಿ ಸೂಕ್ಷ್ಮ ಕೈಗಾರಿಕೆ ಸ್ಥಾಪಿಸುವ ನಿರುದ್ಯೊಗಿ ಯುವಕ/ಯುವತಿಯರು ಸ್ವಯಂ ಉದ್ಯೊಗ ಕೈಗೊಳ್ಳುವಂತೆ ಉತ್ತೇಜಿಸಲು ಯೋಜನೆಗಳ ಸಮರ್ಪಕ ಅನುಷ್ಠಾನ ಆಗಬೇಕು ಎಂದು ಅವರು ತಿಳಿಸಿದರು.

ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ, ಕಾರ್ಖಾನೆಗಳು ತ್ಯಾಜ್ಯ ವಿಲೇವಾರಿಗೆ ಗುರುತಿಸಿದ ಸ್ಥಳಗಳಲ್ಲಿ ಮಾತ್ರ ಕಸ ಹಾಕಬೇಕು. ಮಹಾನಗರ ಪಾಲಿಕೆ ವತಿಯಿಂದ ಬುಡಾ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿ ಸಮೀಕ್ಷೆ ನಡೆಸಿ ಕಸದ ಮಾದರಿ ಪರಿಶೀಲಿಸಿ ಸಂಬಂಧಪಟ್ಟ ಕಾರ್ಖಾನೆಗಳಿಗೆ ನಿರ್ದೇಶನ ನೀಡಬೇಕು. ಈ ಕುರಿತು ಸಭೆ ನಡೆಸಿ ಕಾರ್ಯಗಾರ ಹಮ್ಮಿಕೊಳ್ಳಬೇಕು. ಇದರಿಂದ ಸೂಕ್ತ ಸ್ಥಳಗಳಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಲು ಸಹಾಯವಾಗಲಿದೆ ಎಂದು ತಿಳಿಸಿದರು.

ಆಟೋನಗರ, ಉದ್ಯಮಭಾಗ, ನಾವಗೆ ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ನಿರಂತರ ಪರಿಶೀಲನೆ ನಡೆಸಬೇಕು. ಜನವಸತಿ ಪ್ರದೇಶಗಳಲ್ಲಿ ಇದರಿಂದ ತುಂಬಾ ತೊಂದರೆ ಎದುರಾಗುತ್ತಿದೆ. ಈ ಬಗ್ಗೆ ಸಾಕಷ್ಟು ದೂರು ಬರುತ್ತಿವೆ. ಕೂಡಲೇ ಸಂಬಂಧಿಸಿದ ಕಾರ್ಖಾನೆಗಳಿಗೆ ಸೂಚನೆ ನೀಡಬೇಕು ಎಂದ ಅವರು, ಹೊನಗಾ, ನಾವಗೆ, ಕಿಣಯೆ, ವಾಗವಾಡೆ, ದೇಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆಗಳಿಗೆ ಸರ್ಕಾರದ ಮಾರ್ಗಸೂಚಿಯ ಅನ್ವಯ ತೆರಿಗೆ ನಿಗದಿಪಡಿಸಬೇಕು. ಗ್ರಾಮ ಪಂಚಾಯತಿಗಳಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಹೆಚ್ಚಿನ ತೆರಿಗೆ ವಸೂಲಿ ಕಂಡು ಬಂದಲ್ಲಿ ಅಂತಹ ಗ್ರಾಪಂ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಮಚ್ಛೆಯಿಂದ ಮಾರ್ಕಂಡೇಯ ನಗರದವರೆಗೆ ಕಾರ್ಖಾನೆಗಳಿಗೆ ಬರುವ ರಸ್ತೆಗಳು ಸರಿಯಾಗಿಲ್ಲ. ಸಾಕಷ್ಟು ಕಾರ್ಮಿಕರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಾರೆ. ಅಂತಹ ರಸ್ತೆಗಳನ್ನು ದುರಸ್ತಿ ಕಾರ್ಯ ಕೈಗಳ್ಳಬೇಕು ಎಂದು ಕಾರ್ಖಾನೆಗಳ ಮಾಲೀಕರು ಮನವಿ ಮಾಡಿದರು.

ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಸೂರ್ಯನಾರಾಯಣ ಭಟ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರಿಗೆ ಆರ್ಥಿಕ ಸಬಲತೆ ಹೊಂದಲು ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನ ಯೋಜನೆ ವರದಾನವಾಗಿದೆ. ಆರ್ಥಿಕವಾಗಿ ಸದೃಢವಾಗಿರುವ ಎಲ್ಲ ಉತ್ಪಾದನಾ ಮತ್ತು ಸೇವಾ ಚಟುವಟಿಕೆಗಳು ಈ ಯೋಜನೆ ಅಡಿ ಅರ್ಹವಾಗಿವೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಉಪ ಆಯುಕ್ತ ವಿಜಯಕುಮಾರ ತಳವಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ಹೆಸ್ಕಾಂ ಅಧಿಕಾರಿಗಳು, ವಿವಿಧ ಕಾರ್ಖಾನೆಗಳ ಮಾಲೀಕರು ಸಭೆಯಲ್ಲಿ ಹಾಜರಿದ್ದರು.ಮಾಲಿನ್ಯ ಮುಕ್ತ ತರಕಾರಿ ಹಾಗೂ ಸೊಪ್ಪುಗಳು ಸಾರ್ವಜನಿಕರಿಗೆ ಲಭ್ಯವಾಗಲು ಕ್ರಮ ತೆಗೆದುಕೊಳ್ಳಲು ಸರ್ಕಾರದ ನಿರ್ದೇಶನದಂತೆ ಸಮಿತಿ ರಚಿಸಬೇಕು. ಹಾಲು ನೀಡುವ ಜಾನುವಾರುಗಳಿಗೆ ಮಾಲಿನ್ಯಕರ ತರಕಾರಿಗಳನ್ನು ಹಾಕದಂತೆ ನಿಗಾವಹಿಸಬೇಕು. ಬಳ್ಳಾರಿ ನಾಲಾ ಮೂಲಕ ಸಾಕಷ್ಟು ಕಲುಷಿತ ನೀರು ಹರಿದು ಹೋಗುತ್ತದೆ, ರೈತರು ಬೆಳೆ ಬೆಳೆಯಲು ಈ ನೀರು ಬಳಕೆ ಮಾಡುತ್ತಾರೆ. ಇಂಥವುಗಳನ್ನು ಗಮನಿಸಿ ಸೂಕ್ತ ತಿಳವಳಿಕೆ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ಸಮಿತಿ ರಚನೆ ಮಾಡಲಾಗುವುದು.

-ಮೊಹಮ್ಮದ್‌ ರೋಷನ್‌ ಜಿಲ್ಲಾಧಿಕಾರಿ