ಸಾರಾಂಶ
ತರೀಕೆರೆ ಪುರಸಭೆ ಕಾರ್ಯಾಲಯ ವತಿಯಿಂದ ಏರ್ಪಾಡಾಗಿದ್ದ ಪುರಸಭೆಯಲ್ಲಿ ಸಾಂಸ್ಕೃತಿಕ ನಾಯಕರಾದ ವಿಶ್ವಗುರು ಶ್ರೀ ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ದಿವ್ಯ ರವಿ, ಸದಸ್ಯರು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ತರೀಕೆರೆ
ಶ್ರೀ ಬಸವಣ್ಣನವರ ಆದರ್ಶ ರೂಢಿಸಿಕೊಳ್ಳಬೇಕು ಎಂದು ಪುರಸಭೆ ಉಪಾಧ್ಯಕ್ಷೆ ದಿವ್ಯಾ ರವಿ ಹೇಳಿದ್ದಾರೆ.ಅವರು, ಶನಿವಾರ ಪುರಸಭಾ ಕಾರ್ಯಾಲಯ ವತಿಯಿಂದ ಪಟ್ಟಣದ ಕನಕ ಕಲಾ ಭವನದಲ್ಲಿ ಏರ್ಪಾಡಾಗಿದ್ದ ಪುರಸಭೆಯಲ್ಲಿ ಸಾಂಸ್ಕೃತಿಕ ನಾಯಕರಾದ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆ ಮತ್ತು ಪುರುಷ ಇಬ್ಬರಲ್ಲೂ ಸಮಾನ ಭಾವನೆ ಇರಬೇಕು, ದೇವರು ನಮ್ಮೊಳಗೆ ಇದ್ದಾನೆ, ಕಾಯಕ ತತ್ವದಲ್ಲಿ ನಂಬಿಕೆ ಇಡಬೇಕು ಎಂದು ಬಸವಣ್ಣನವರು ಹೇಳಿದ್ದಾರೆ ಎಂದು ತಿಳಿಸಿದರು. ಪುರಸಭೆ ಸದಸ್ಯರು ಟಿ.ಎಂ.ಭೋಜರಾಜ್ ಅವರು ಮಾತನಾಡಿ, ಜಗಜ್ಯೋತಿ ಬಸವಣ್ಣನವರು ಈ ನಾಡು ಕಂಡ ಶರಣರಲ್ಲಿ ಅತ್ಯಂತ ಪ್ರಮುಖರು, ಕಾಯಕ ಯೋಗಿಗಳು, ಅನುಭವ ಮಂಟಪವು ಎಲ್ಲಾ ಜಾತಿ, ವರ್ಗಗಳನ್ನು ಒಳಗೊಂಡಿತ್ತು. ಬಸವಣ್ಣನವರು ಪ್ರೇರಕ ಶಕ್ತಿಯಾಗಿದ್ದರು, ವಚನಗಳನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿದ್ದಾರೆ ಎಂದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್.ವೆಂಕಟೇಶ್ ಅವರು ಮಾತನಾಡಿ, ಬಸವಣ್ಣನವರು ಸಾಮಾಜಿಕ ಪರಿವರ್ತನೆ ಹರಿಕಾರರು, ಸಮಾನತೆಗಾಗಿ ಹೋರಾಟ ಮಾಡಿದವರು. ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮಕ್ಕೆ ಸರ್ಕಾರ ಸೂಚನೆ ನೀಡಿರುವುದು ತುಂಬಾ ಸಂತೋಷದ ವಿಚಾರ ಎಂದರು.
ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ, ಬಸವಣ್ಣನವರು ವಿಶ್ವಕ್ಕೆ ಗುರುಗಳಾಗಿದ್ದಾರೆ. ಅವರ ಸಾಮಾಜಿಕ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಸಮ ಸಮಾಜದ ನಿರ್ಮಾತೃವಿನ ಜೀವನ ಸಂದೇಶ ಸ್ಮರಿಸಬೇಕು. ಪ್ರಜಾಪ್ರಭುತ್ವದ ಕಲ್ಪನೆಯ ತಂದುಕೊಟ್ಟವರು ಬಸವಣ್ಣನವರು ಎಂದು ಹೇಳಿದರು.ಪುರಸಭೆ ಸದಸ್ಯೆ ಗೀತಾ ಗಿರಿರಾಜ್, ಯಶೋದಮ್ಮ, ಶಮೀಮ್ ಬಾನು, ಪಾರ್ವತಮ್ಮ, ಕುಮಾರಪ್ಪ, ಪುರಸಭೆ ವ್ಯವಸ್ಥಾಪಕ ವಿಜಯಕುಮಾರ್, ಪುರಸಭೆ ಸಿಬ್ಬಂದಿ ಮತ್ತಿತರರಿದ್ದರು.
ಪುರಸಭೆ ವ್ಯವಸ್ಥಾಪಕ ವಿಜಯಕುಮಾರ್ ಸ್ವಾಗತಿಸಿ, ಹಿರಿಯ ಆರೋಗ್ಯ ನಿರೀಕ್ಷಕ ಮಹೇಶ್ ವಂದಿಸಿದರು.