ತುಂಗಭದ್ರಾ ನದಿಯಲ್ಲಿ 75 ಸಾವಿರ ಕ್ಯುಸೆಕ್‌ಗಿಂತಲೂ ಅಧಿಕ ನೀರು : ನದಿ ಪಾತ್ರಗಳಲ್ಲಿ ಮುನ್ನೆಚ್ಚರಿಕೆ ವಹಿಸಿ- ಡಿಸಿ

| Published : Jul 29 2024, 12:55 AM IST / Updated: Jul 29 2024, 12:42 PM IST

tungabhadra dam
ತುಂಗಭದ್ರಾ ನದಿಯಲ್ಲಿ 75 ಸಾವಿರ ಕ್ಯುಸೆಕ್‌ಗಿಂತಲೂ ಅಧಿಕ ನೀರು : ನದಿ ಪಾತ್ರಗಳಲ್ಲಿ ಮುನ್ನೆಚ್ಚರಿಕೆ ವಹಿಸಿ- ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ನದಿಯಲ್ಲಿ 75 ಸಾವಿರ ಕ್ಯುಸೆಕ್‌ಗಿಂತಲೂ ಅಧಿಕ ನೀರು ಹರಿಯುತ್ತಿದ್ದು, ಭದ್ರಾ ಜಲಾಶಯ ಭರ್ತಿಗೆ ಕೆಲವೇ ಅಡಿಗಳು ಬಾಕಿ ಇವೆ. 

 ದಾವಣಗೆರೆ :  ತುಂಗಭದ್ರಾ ನದಿಯಲ್ಲಿ 75 ಸಾವಿರ ಕ್ಯುಸೆಕ್‌ಗಿಂತಲೂ ಅಧಿಕ ನೀರು ಹರಿಯುತ್ತಿದ್ದು, ಭದ್ರಾ ಜಲಾಶಯ ಭರ್ತಿಗೆ ಕೆಲವೇ ಅಡಿಗಳು ಬಾಕಿ ಇವೆ. ಈ ಹಿನ್ನೆಲೆ ಯಾವುದೇ ಕ್ಷಣದಲ್ಲಿ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಲಿದ್ದು, ನದಿ ಪಾತ್ರದಲ್ಲಿನ ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.

ತುಂಗಾ ಜಲಾಶಯದಿಂದ 74105 ಕ್ಯುಸೆಕ್‌ ನೀರು ನದಿಯಲ್ಲಿ ಹರಿಯುತ್ತಿದೆ. ಭದ್ರಾ ಜಲಾಶಯ ಭರ್ತಿಯಾಗಲು 5 ಅಡಿ ಬಾಕಿ ಇದ್ದು, 35557 ಕ್ಯುಸೆಕ್‌ ಒಳಹರಿವು ಇದೆ. ಮಲೆನಾಡಿನಲ್ಲಿ ಉತ್ತಮ ಮಳೆ ಬರುತ್ತಿರುವುದರಿಂದ ನೀರಿನ ಒಳಹರಿವು ಹೆಚ್ಚಲಿದೆ. ಈ ಹಿನ್ನೆಲೆ ಭದ್ರಾ ಜಲಾಶಯ ಭರ್ತಿಯಾಗಿ ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡಬಹುದಾಗಿದ್ದು, ನದಿಪಾತ್ರದಲ್ಲಿನ ಜನರು ತಮ್ಮ ಆಸ್ತಿ, ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ತುಂಗಾ ಅಣೆಕಟ್ಟೆಯಿಂದಲೂ ಯತೇಚ್ಛ ನೀರು ಬರುತ್ತಿದ್ದು, ಭದ್ರಾ ಡ್ಯಾಂ ತುಂಬಿದ ನಂತರ ನದಿಯಲ್ಲಿನ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ. ಇದರಿಂದ ನದಿಯಲ್ಲಿನ ನೀರಿನಮಟ್ಟ ಅಪಾಯ ಮಟ್ಟದಲ್ಲಿದೆ. ಹೊನ್ನಾಳಿ, ನ್ಯಾಮತಿ, ಹರಿಹರ ತಾಲೂಕುಗಳಲ್ಲಿನ ನದಿಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಹೊನ್ನಾಳಿ ಪಟ್ಟಣದ ನದಿ ತೀರದ ಬಾಲರಾಜ್‌ ಘಾಟ್ ಪ್ರದೇಶದ 11 ಕುಟುಂಬದ 64 ಜನರನ್ನು ಅಂಬೇಡ್ಕರ್ ಭವನದಲ್ಲಿನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದಿದ್ದಾರೆ.

ಟಾಸ್ಕ್‌ ಫೋರ್ಸ್‌ ಸಮಿತಿ:

ಅಲ್ಲದೇ, ನದಿಗಳ ಪಾತ್ರದಲ್ಲಿನ ಎಲ್ಲ ಗ್ರಾಮಗಳಲ್ಲಿ ಜನ, ಜಾನುವಾರುಗಳನ್ನು ನದಿಗೆ ಇಳಿಯದಂತೆ ಎಚ್ಚರ ವಹಿಸಲು ಜಾಗೃತಿ ಮೂಡಿಸಲಾಗಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಗ್ರಾಮಮಟ್ಟದ ಟಾಸ್ಕ್‌ ಫೋರ್ಸ್‌ ಸಮಿತಿ ರಚಿಸಲಾಗಿದೆ. ಮತ್ತು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ತುರ್ತು ನಿಗಾ ಘಟಕಗಳನ್ನು ಸನ್ನದ್ಧವಾಗಿಡಲಾಗಿದೆ. ಅಧಿಕಾರಿಗಳು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.

ತುರ್ತು ಸಹಾಯವಾಣಿ ಸ್ಥಾಪನೆ ಜಿಲ್ಲಾಧಿಕಾರಿ ಕಚೇರಿ: 08192-234034, 1077, ಎಸ್‌ಡಿಆರ್‌ಎಫ್ ಘಟಕ, ದೇವರಬೆಳೆಕೆರೆ 7411308591, ದಾವಣಗೆರೆ ಅಗ್ನಿಶಾಮಕ ಇಲಾಖೆ 08192-258101, 112, ದಾವಣಗೆರೆ ಮಹಾನಗರ ಪಾಲಿಕೆ 08192-234444, 8277234444, ದಾವಣಗೆರೆ ತಾ. ಕಚೇರಿ 9036396101, ಹರಿಹರ 08192-272959, ಜಗಳೂರು 08196-227242, ಹೊನ್ನಾಳಿ 08188-252108, ನ್ಯಾಮತಿ 8073951245, ಚನ್ನಗಿರಿ 7892481962 ದೂರವಾಣಿ, ಮೊಬೈಲ್ ಸಂಖ್ಯೆಗೆ ಕರೆ ಮಾಡಲು ಕೋರಲಾಗಿದೆ.