ಕುಡಿವ ನೀರಿನ ಸಮಸ್ಯೆ ಆಗದಂತೆ ಕ್ರಮವಹಿಸಿ: ಶಾಸಕ ಹಂಪನಗೌಡ ಬಾದರ್ಲಿ

| Published : Jun 25 2025, 11:47 PM IST

ಕುಡಿವ ನೀರಿನ ಸಮಸ್ಯೆ ಆಗದಂತೆ ಕ್ರಮವಹಿಸಿ: ಶಾಸಕ ಹಂಪನಗೌಡ ಬಾದರ್ಲಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲ್ಲೂಕಿನ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಈಗಿನಿಂದಲೇ ಅಗತ್ಯ ಪೂರ್ವಸಿದ್ಧತಾ ಕ್ರಮಗಳನ್ನು ಸಂಬಂಧಿಸಿದ ಅಧಿಕಾರಿಗಳು ಕೈಗೊಳ್ಳಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ತಾಲ್ಲೂಕಿನ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಈಗಿನಿಂದಲೇ ಅಗತ್ಯ ಪೂರ್ವಸಿದ್ಧತಾ ಕ್ರಮಗಳನ್ನು ಸಂಬಂಧಿಸಿದ ಅಧಿಕಾರಿಗಳು ಕೈಗೊಳ್ಳಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಸೂಚಿಸಿದರು.

ಸ್ಥಳೀಯ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2025ರ ಡಿಸೆಂಬರ್‌ನಿಂದ 2026ರ ಜುಲೈ ತಿಂಗಳವರೆಗೆ ನೀರಿನ ಸಮಸ್ಯೆ ಉಲ್ಭಣಿಸದಂತೆ ನೋಡಿಕೊಳ್ಳಬೇಕು. ಹಳ್ಳದ ದಂಡೆಯ ಗ್ರಾಪಂಗಳ ಅಭಿವೃದ್ಧಿ ಅಧಿಕಾರಿ ಗಳು ಹಳ್ಳಗಳಲ್ಲಿ ರಿಂಗ್ ಬಂಡ್ ಹಾಕಿ ನೀರು ನಿಲ್ಲುವಂತೆ ಹಾಗೂ ಅಂತರ್ಜಲ ಪುನಶ್ಚೇತನಗೊಳಿಸಲು ಕ್ರಮವಹಿಸಬೇಕು. ಅಗತ್ಯವಿರುವೆಡೆ ಹೊಸಕೆರೆ ನಿರ್ಮಾಣ, ಇರುವ ಕೆರೆಗಳ ಅಗಲೀಕರಣ, ಆಳಗೊಳಿಸುವಿಕೆ ಮಾಡಬೇಕು. ಜೊತೆಗೆ ಖಾಸಗಿ ಕೆರೆಗಳನ್ನು ಗುರುತಿಸಿ ಮುಂಗಡ ಕರಾರು ಮಾಡಿಕೊಳ್ಳಬೇಕು. ಪ್ರತಿ ತಿಂಗಳು ಕುಡಿಯುವ ನೀರಿನ ಪರೀಕ್ಷೆ ಮಾಡಿಸಿ ವರದಿ ದಾಖಲೆಯಾಗಿ ಇಟ್ಟುಕೊಳ್ಳಬೇಕು. ಕುಡಿಯುವ ನೀರಿನ ಓಎಚ್ಟಿ, ಸಿಸ್ಟರ್ನ್ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಪೈಪ್ಲೈನ್ ದುರಸ್ತಿಗಳನ್ನು ತಕ್ಷಣವೇ ಮಾಡಬೇಕು ಎಂದು ಸೂಚಿಸಿದರು.

ಎಲೆಕೂಡ್ಲಗಿಯಲ್ಲಿ ಲಭ್ಯವಿರುವ ಸಾರ್ವಜನಿಕ ಜಾಗ ಗುರುತಿಸಿ ಕೆರೆ ನಿರ್ಮಾಣಕ್ಕೆ ಹಾಗೂ ಪಗಡದಿನ್ನಿಯಲ್ಲಿ ಲಭ್ಯವಿರುವ 14 ಎಕರೆ ಜಾಗ ಪರಿಶೀಲಿಸಿ ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಕೆರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಮುಳ್ಳೂರು ಕ್ಯಾಂಪ್ ಕೆರೆ ಪರಿಶೀಲಿಸಿ ಬಸಿ ತಡೆಗಟ್ಟುವಿಕೆ ಬಗ್ಗೆ ಅಂದಾಜು ಪಟ್ಟಿ ಸಲ್ಲಿಸಬೇಕು. ಚಿರತನಾಳ ಗ್ರಾಮದ 8 ಎಕರೆ ಸರ್ಕಾರಿ ಜಮೀನು ಪರಿಶೀಲಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಪ್ರಸ್ತಾವನೆ ಸಲ್ಲಿಸಬೇಕು. ಸಾಲಗುಂದ ಎಎಒ ಕೆರೆಗೆ ತೆರೆದ ಕಾಲುವೆ ಮಾಡಲು ಅಗತ್ಯ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.

ಗ್ರಾಮಗಳಲ್ಲಿ ಸಮುದಾಯ ಭವನಗಳಿಗೆ ಬೇಡಿಕೆ ಇದ್ದಲ್ಲಿ ನಿವೇಶನ ವಿವರಗಳನ್ನು ಸಲ್ಲಿಸಬೇಕು. ಸಿಎಸ್ಎಫ್ ಕ್ಯಾಂಪಿನಲ್ಲಿರುವ ಕೆರೆಗಳ ಮಾಹಿತಿ ಪಡೆದು ಗ್ರಾಮಗಳಿಗೆ ನೀರು ಒದಗಿಸುವ ಕುರಿತು ಪರಿಶೀಲನೆ ನಡೆಸಬೇಕು. ಬನ್ನಿಗನೂರು ನಿರ್ಮಾಣ ಹಂತದ ಕೆರೆ ಜಾಗವನ್ನು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ವಿಜಯ ಲಕ್ಷ್ಮೀ ಅವರಿಗೆ ಶಾಸಕರು ಸೂಚನೆ ನೀಡಿದರು.

ತಾಪಂ ಸಹಾಯಕ ನಿರ್ದೇಶಕರಾದ ಅಮರಗುಂಡಪ್ಪ, ಆಲಂ ಬಾಷಾ, ಪಿಆರ್‌ಡಿ ಸಹಾಯಕ ಕಾರ್ಯನಿವಾಹಕ ಎಂಜನಿಯರ್ ಪ್ರಕಾಶ ಪಾಂಡುರಂಗ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು, ಸಹಾಯಕ ಮತ್ತು ಕಿರಿಯ ಎಂಜನಿಯರ್‌ಗಳು ಉಪಸ್ಥಿತರಿದ್ದರು.