ದಾವಣಗೆರೆ: ದಾವಣಗೆರೆಯ 31ನೇ ವಾರ್ಡ್ ಎಸ್‌ಒಜಿ ಕಾಲನಿಯ ಚರಂಡಿ, ಸ್ವಚ್ಛತೆ ಹಾಗೂ ಕೊಳಚೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ, ಅಲ್ಲಿನ ನಿವಾಸಿಗಳಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಡುವಂತೆ ಎಸ್‌ಒಜಿ ಕಾಲನಿ ನಿವಾಸಿ ಕೆ.ಎನ್‌.ಪ್ರಜ್ವಲ್ ಮಹಾನಗರ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಶ್ರೀರಾಮ ನಗರದ 10 ಸಾವಿರ ಜನರು ಬಳಸುವ ನೀರು ಎಸ್‌ಒಜಿ ಕಾಲನಿ, ಸೃಷ್ಟಿ ಕಾನ್ವೆಂಟ್, ಶಾರದಾ ಪಬ್ಲಿಕ್ ಶಾಲೆ, ನಿಸರ್ಗ ಕಾನ್ವೆಂಟ್ ಬಳಿ ಖಾಸಗಿ ಜಮೀನು ಮೂಲಕ ಹಾದು, ಭದ್ರಾ ನಾಲೆಗೆ ಸೇರುತ್ತಿರುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಎಸ್‌ಒಜಿ ಕಾಲನಿಯ ಸಮಸ್ಯೆಗಳನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ, ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕು ಎಂದರು.

ನೂರಾರು ವಿದ್ಯಾರ್ಥಿಗಳು ಓದುತ್ತಿರುವ ಶಾಲೆಗಳ ಪಕ್ಕದಲ್ಲಿ ನಿಲ್ಲುವ ಚರಂಡಿ, ತ್ಯಾಜ್ಯನೀರು ಈಗ ಚಿಕ್ಕ ಕೆರೆಯಂತಾಗಿದೆ. ಅದರಿಂದ ದುರ್ವಾಸನೆ, ಕ್ರಿಮಿಕೀಟಗಳು ಹೆಚ್ಚಾಗಿ, ಸ್ಥಳೀಯ ನಿವಾಸಿಗಳು ವಾಸ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. 8-10 ವರ್ಷದಿಂದಲೂ ಈ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ, ಮನವಿ ಕೊಟ್ಟರೂ ಪಾಲಿಕೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಚರಂಡಿ ನೀರು ಮುಂದೆ ಸಾಗಿ ಭದ್ರಾ ಕಾಲುವೆ ಪಾಲಾಗುತ್ತಿದೆ. ಇದೇ ನೀರು ಮುಂದೆ ಟಿವಿ ಸ್ಟೇಷನ್ ಕೆರೆ, ಕುಂದುವಾಡ ಕೆರೆಗೂ ಸಾಗುತ್ತದೆ ಎಂದರು.

ಶ್ರೀರಾಮ ನಗರದ ತ್ಯಾಜ್ಯ ನೀರು, ಮಲಿನ ನೀರು ಮುಂದೆ ಸಾಗಿ ಭದ್ರಾ ನಾಲೆ ಸೇರುತ್ತಿದ್ದು, ಜನಾರೋಗ್ಯ, ಪರಿಸರ, ಜಲಚರಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಭದ್ರಾ ನಾಲೆ ನೀರು ಬಳಕೆಗೂ ಯೋಗ್ಯವಾಗಿಲ್ಲದಂತಾಗಿದೆ. ಇದರಿಂದ ಜನಾರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಉಂಟಾಗುತ್ತಿದೆ. ಸಮಸ್ಯೆ ಪರಿಹರಿಸುವತ್ತ ಜಿಲ್ಲಾಡಳಿತ, ಪಾಲಿಕೆ ಅಧಿಕಾರಿಗಳು, ಸಂಸದರಿಗೆ ಮನವಿ ಅರ್ಪಿಸಿದ್ದರೂ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಿ ಎಂದು ಪ್ರಜ್ವಲ್‌ ಮನವಿ ಮಾಡಿದರು.

ಸ್ಥಳೀಯ ನಿವಾಸಿಗಳಾದ ಕೆ.ಎನ್.ಚಂದ್ರಶೇಖರ, ಕೆ.ಆರ್.ಜಯಪ್ರಕಾಶ ಇತರರು ಇದ್ದರು.


- - -

-16ಕೆಡಿವಿಜಿ5: