ಡೆಂಘೀ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

| Published : May 25 2024, 01:32 AM IST

ಡೆಂಘೀ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ದಿನೇ ದಿನೆ ಡೆಂಘೀ ಪ್ರಕರಣಗಳು ಹೆಚ್ಚುತ್ತಿವೆ. ಪ್ರತಿಯೊಬ್ಬ ಆರೋಗ್ಯಾಧಿಕಾರಿಗಳು ಡೆಂಘೀ ನಿಯಂತ್ರಣ ಕ್ರಮಕ್ಕೆ ಆದ್ಯತೆ ನೀಡಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು. ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗಟ್ಟಲು ಲಾರ್ವಹಾರಿ ಮೀನುಗಳಾದ ಮೀನುಗಳ ಕೆರೆ, ಬಾವಿ ಮತ್ತು ಕೃಷಿ ಹೊಂಡಗಳಲ್ಲಿ ಬಿಡಬೇಕು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಡೆಂಘೀ ನಿಯಂತ್ರಣಕ್ಕೆ ಕಠಿಣ ಕ್ರಮದ ಜೊತೆಗೆ ತಾಲೂಕು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಿವು ಕಾರ್ಯಕ್ರಮ ಹೆಚ್ಚು ಮಾಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಾಕೀತು ಮಾಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ವತಿಯಿಂದ ನಡೆದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ದಿನೇ ದಿನೆ ಡೆಂಘೀ ಪ್ರಕರಣಗಳು ಹೆಚ್ಚುತ್ತಿವೆ. ಪ್ರತಿಯೊಬ್ಬ ಆರೋಗ್ಯಾಧಿಕಾರಿಗಳು ಡೆಂಘೀ ನಿಯಂತ್ರಣ ಕ್ರಮಕ್ಕೆ ಆದ್ಯತೆ ನೀಡಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು. ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗಟ್ಟಲು ಲಾರ್ವಹಾರಿ ಮೀನುಗಳಾದ ಮೀನುಗಳ ಕೆರೆ, ಬಾವಿ ಮತ್ತು ಕೃಷಿ ಹೊಂಡಗಳಲ್ಲಿ ಬಿಡಬೇಕು. ಗಪ್ಪಿ, ಗ್ಯಾಂಬೂಸಿಯ ಮೀನುಗಳ ಗ್ರಾಮ ಪಂಚಾಯಿತಿಗಳಲ್ಲಿ ನೀಡಬೇಕು. ಮನೆಗಳಲ್ಲಿ ತೊಟ್ಟಿ, ಡ್ರಮ್‍ಗಳನ್ನು ವಾರಕ್ಕೆ 2 ಬಾರಿ ಸ್ವಚ್ಛಗೊಳಿಸುವುದು, ಟಯರುಗಳು ಮತ್ತು ವಾಹನದ ಅನುಪಯುಕ್ತ ಬಿಡಿ ಭಾಗಗಳ ಸೂಕ್ತ ಸ್ಥಳದಲ್ಲಿ ಶೇಖರಿಸಿ, ಆಸ್ಪತ್ರೆ, ಶಾಲೆ ಮತ್ತು ಮನೆಯ ಸುತ್ತಮುತ್ತ ಘನ ತ್ಯಾಜ್ಯದಲ್ಲಿ ಮಳೆನೀರು ಸಂಗ್ರಹವಾಗದಂತೆ ತಡೆಗಟ್ಟಲು ನಿಯಮಿತ ವಿಲೇವಾರಿ ಮಾಡುವುದು. ಇದರಿಂದ ಸೊಳ್ಳೆ ಉತ್ಪತ್ತಿ ಕಡಿಮೆ ಮಾಡುವುದರಿಂದ ತಡೆಯಬಹುದು. ಈ ಕ್ರಮಗಳನ್ನು ಪ್ರತಿಯೊಬ್ಬರು ಮಾಡುವ ಹಾಗೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಹೆರಿಗೆ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಬೇಕು. ಕೋವಿಡ್-19 ಮತ್ತು ಕೆಎಫ್ ಡಿ ತಪಾಸಣೆ ಕಡ್ಡಾಯವಾಗಿ ಮಾಡಿಸಬೇಕು. ನಾಯಿ ಕಡಿತದಿಂದ ರೇಬಿಸ್ ಬಗ್ಗೆ ಬರುವ ಬಗ್ಗೆ ನಿರ್ಲಕ್ಷ್ಯ ವಹಿಸದಂತೆ ಮಾಹಿತಿ ನೀಡಬೇಕು. ಎಲ್ಲಾ ಆಸ್ಪತ್ರೆಗಳಲ್ಲಿ ಆಂಬ್ಯುಲೆನ್ಸ್‌ಗಳನ್ನು ಸರಿಯಾಗಿ ಕ್ರಮವಹಿಸಬೇಕು ಎಂದು ತಿಳಿಸಿದರು.

ತಂಬಾಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ:

ತಂಬಾಕು ನಿಯಂತ್ರಣ ಹಿನ್ನೆಲೆ ಘೋಷಣೆ ಮತ್ತು ಪ್ರತಿಜ್ಞೆ ಮೂಲಕ ಹೆಚ್ಚು ಅರಿವು ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಕಡ್ಡಾಯವಾಗಿ ತಡೆಯಿರಿ. ಯಾವುದೇ ಹುಕ್ಕ ಬಾರ್ ಇದ್ದರು ಅದನ್ನು ಶೀಘ್ರವೇ ಮುಚ್ಚಿಸುವಂತೆ ಆದೇಶ ನೀಡಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ದಾಸೆ ಗೌಡ, ಡಿಎಚ್ ಒ ಡಾ.ನಟರಾಜ್, ಆರ್.ಸಿ.ಎಚ್.ಓ ಡಾ.ನಾಗರಾಜ್ ನಾಯ್ಕ್, ಮಲೇರಿಯಾ ಆಫೀಸರ್ ಡಾ. ಗುಡದಪ್ಪ ಮತ್ತಿತರರಿದ್ದರು. ಡೆಂಘೀ ನಿಯಂತ್ರಣದ ಕ್ರಮದ ತರಬೇತಿ ನೀಡಿ

ಗ್ರಾಮೀಣ ಮಟ್ಟದ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರಿಗೆ ಡೆಂಘೀ ನಿಯಂತ್ರಣ ಕ್ರಮಗಳ ತರಬೇತಿ ನೀಡಿ, ಇದು ಪ್ರತಿಯೊಂದು ಗ್ರಾಮಗಳ ತಲುಪಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಸೊಳ್ಳೆಗಳ ನಿಯಂತ್ರಣದ ಬಗ್ಗೆ ಅರಿವು ಕಾರ್ಯಕ್ರಮಗಳ ಮಾಡಬೇಕು. ಮಾನ್ಸೂನ್ ಕಾರಣ ಮುಂದಿನ ದಿನಗಳಲ್ಲಿ ಸೊಳ್ಳೆ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ತೋಟ ಮತ್ತು ಕೃಷಿ ಭೂಮಿಯಲ್ಲಿ ಬಿದ್ದಿರುವ ತ್ಯಾಜ್ಯಗಳಲ್ಲಿ ನೀರು ಶೇಖರಣೆಯಾಗದಂತೆ ವಿಲೇವಾರಿ ಮಾಡಿಸಿ. ಸಾರ್ವಜನಿಕ ತೊಟ್ಟಿ, ತೆರೆದ ಟ್ಯಾಂಕ್‍ಗಳು ಮತ್ತು ಚರಂಡಿಗಳ ಸರಿಯಾದ ರೀತಿಯಲ್ಲಿ ಸ್ವಚ್ಛ ಮಾಡಬೇಕು ಎಂದು ಡಿಸಿ ಗುರುದತ್ತ ಹೆಗಡೆ ತಿಳಿಸಿದರು.