ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಯಿಂದ ಆಯ್ಕೆಯಾಗಿ ಸಂಸತ್ ಪ್ರವೇಶಿಸಿರುವ ನೂತನ ಸಂಸದ ರಾಧಾಕೃಷ್ಣ ದೊಡ್ಮನಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊಟ್ಟ ಮೊದಲ ಬಾರಿಗೆ ಈ ಭಾಗದಲ್ಲಿನ ದಶಕಗಳಿಂದ ನನೆಗುದಿಗೆ ಬಿದ್ದಿರುವ ರೇಲ್ವೆ ವಿಭಾಗೀಯ ಕಚೇರಿ ಯೋಜನೆಗೆ ಆದ್ಯತೆ ಮೇಲೆ ಕಾಯಕಲ್ಪ ಕೊಡುವಂತ ಕೋರಿ ಕೇಂದ್ರ ರೇಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.ಈ ಮೂಲಕ ಸಂಸದ ರಾಧಾಕೃಷ್ಣ ದೊಡ್ಮನಿಯವರು ಈ ಭಾಗದ ಮಹತ್ವದ, ಪ್ರತಿಷ್ಠಿತ ಹಾಗೂ ಬಹು ವರ್ಷಗಳಿಂದ ನೆನೆಗುದಿಗೆ ಬದ್ದಿರುವ ಯೋಜನೆಯೊಂದರ ಪರವಾಗಿ ಸಂಸತ್ನಲ್ಲಿ, ರೇಲ್ವೆ ಸಚಿವಾಲಯದ ಮಟ್ಟಿಗೆ ಕೊಂಡೊಯ್ಯುವ ಮೂಲಕ ಗಮನ ಸೆಳೆದಿದ್ದಾರೆ.
ದೆಹಲಿಯಲ್ಲಿ ರೇಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಭೇಟಿಯಾಗಿ ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವುದು ಸೇರಿದಂತೆ ಈ ಭಾಗದ ಹಲವಾರು ರೇಲ್ವೆ ಕಾಮಗಾರಿ / ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.2014-15ರ ಮಧ್ಯಂತರ ಬಜೆಟ್ನಲ್ಲಿ ಕಲಬುರಗಿ ಯಲ್ಲಿ ನೂತನ ರೇಲ್ವೆ ವಿಭಾಗೀಯ ಕಚೇರಿ ಮಂಜೂರಾಗಿ ಅದಕ್ಕೆ ಬೇಕಾಗುವ ರು. 5 ಕೋಟಿ ಅನುದಾನವನ್ನೂ ಕೂಡಾ ತೆಗೆದಿರಿಸಲಾಗಿತ್ತು. ಇದಲ್ಲದೇ, ಯೋಜನೆಗೆ ಅಗತ್ಯವಿರುವ ಜಮೀನನ್ನು ರಾಜ್ಯ ಸರ್ಕಾರ ಉಚಿತವಾಗಿ ಒದಗಿಸಿದೆ.
ಕಲಬುರಗಿ ಜಿಲ್ಲೆ ಹಿಂದುಳಿದ ಕಲ್ಯಾಣ ಕರ್ನಾಟಕದ ಭಾಗವಾಗಿದ್ದು ಈ ಭಾಗದ ಸಮಗ್ರ ಅಭಿವೃದ್ದಿಗಾಗಿ ಸಂವಿಧಾನದ ಆರ್ಟಿಕಲ್ 371(ಜೆ) ಜಾರಿಗೆ ತರುವ ಮೂಲಕ ಅನುದಾನ ಒದಗಿಸಲಾಗುತ್ತಿದೆ.ಈ ಯೋಜನೆ ಸ್ಥಾಪನೆಗೆ ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, ಜನರು ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಹಾಗಾಗಿ, ಕಲಬುರಗಿ ಯಲ್ಲಿ ರೇಲ್ವೆ ವಲಯ ಸ್ಥಾಪನೆ ಮಾಡುವ ಸಲುವಾಗಿ ಕೂಡಲೇ ರೇಲ್ವೆ ಪ್ರಾಧಿಕಾರ ಅಥವಾ ಸಂಬಂಧಿಸಿದವರ ಗಮನಕ್ಕೆ ತಂದು ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸಂಸದರು ಪತ್ರದಲ್ಲಿ ವಿನಂತಿಸಿದ್ದಾರೆ.
ಬಾಕಿ ರೇಲ್ವೆ ಕಾಮಗಾರಿಗಳ ಪೂರ್ಣಗೊಳಿಸಲು ಆಗ್ರಹ: ಯಾದಗಿರಿ ಜಿಲ್ಲೆಯ ಕಡೇಚೂರು ಬಾಡಿಯಾಳ ಕೈಗಾರಿಕ ಪ್ರದೇಶದಲ್ಲಿ ಸುಮಾರು 150 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾದ ರೇಲ್ವೆ ಬೋಗಿ ಕಾರ್ಖಾನೆಯಿಂದ ಅಗತ್ಯವಿರುವಷ್ಟು ಬೋಗಿ ತಯಾರಿಸಲು ಆಗುತ್ತಿಲ್ಲ. ಹಲವಾರು ವರ್ಷಗಳು ಕಳೆದರೂ ಕೂಡಾ ಈ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಹಾಗಾಗಿ, ಸದರಿ ಕಾರ್ಖಾನೆಯ ವಿಸ್ತರಣೆ ಅಗತ್ಯವಿದ್ದು ಕ್ರಮ ಕೈಗೊಳ್ಳುವುದು.ಕಲಬುರಗಿ ರೇಲ್ವೆ ನಿಲ್ದಾಣದ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಎರಡು ಪಿಟ್ ಲೈನ್ ನಿರ್ಮಾಣ ಕಾರ್ಯ ಮಂಜೂರಾಗಿದೆ. ದಕ್ಷಿಣ ಭಾಗದಲ್ಲಿ ಪಿಟ್ ಲೈನ್ ಕಾಮಗಾರಿ ಪೂರ್ಣಗೊಂಡು ಕಾರ್ಯನಿರ್ವಹಿಸುತ್ತಿದೆ. ಆದರೆ ಉತ್ತರ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ.
ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಮುಂಬೈ ಕರ್ನಾಟಕದೊಂದಿಗೆ ಸಂಪರ್ಕಿಸುವ ಗದಗ ವಾಡಿ ನೂತನ ರೈಲ್ವೆ ಮಾರ್ಗದ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಸದರಿ ಕಾಮಗಾರಿ ತೀವ್ರಗತಿಯಲ್ಲಿ ಪೂರ್ಣಗೊಳಿಸಬೇಕು.ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 150 ಪೂರ್ಣಗೊಂಡಿದ್ದು ಇಕ್ಕೆಲಗಳ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿವೆ. ಆದರೆ, ರೇಲ್ವೆ ಮೇಲ್ಸೇತುವೆ ಕಾಮಗಾರಿ ಇನ್ನೂ ಪ್ರಾರಂಭಗೊಂಡಿಲ್ಲ ಸದರಿ ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಭಿಸಬೇಕು.
ಕಲಬುರಗಿ ಹಾಗೂ ಬೆಂಗಳೂರು ಮಧ್ಯೆ ಹೆಚ್ಚಿನ ಸಂಖ್ಯೆಯ ರೇಲ್ವೆಗಳ ಓಡಾಟಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.