ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಸಿ
ಶ್ರೀರಂಗಪಟ್ಟಣದ ಯಕ್ಷ ಕೌಮುದೀ ಟ್ರಸ್ಟ್ ಯಕ್ಷಗಾನ ತಾಳಮದ್ದಲೆ ಅಧ್ಯಯನ ಮತ್ತು ಪ್ರದರ್ಶನ ಕೇಂದ್ರದಿಂದ ಅ.1 ರಿಂದ 12 ರವರೆಗೆ ಜಿಲ್ಲೆಯ ವಿವಿಧೆಡೆ ತಾಳಮದ್ದಲೆ ಸರಣಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಗ.ನಾ. ಭಟ್ ಹೇಳಿದರು.ಸೋಮವಾರ ನಗರದ ನೆಮ್ಮದಿ ಕುಟೀರದಲ್ಲಿ ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಮಾತನಾಡಿ, ಒಟ್ಟೂ 11 ದಿನಗಳು ಈ ಸರಣಿ ನಡೆಯಲಿದೆ. ಅ.2 ರಂದು ನಗರದ ಟಿಎಂಎಸ್ ಸಭಾಂಗಣದಲ್ಲಿ ಹುಬ್ಬಳ್ಳಿಯ ಐಎಸ್ಆರ್ ಅಸಿಸ್ಟಂಟ್ ಕಮಿಷನರ್ ಶ್ರೀಕೃಷ್ಣ ಹೆಗಡೆ ಹೆಗಡೆ ಮರಿಯಜ್ಜನಮನೆ ಸರಣಿ ಉದ್ಘಾಟಿಸಲಿದ್ದಾರೆ. ಕಲಾವಿದರಾದ ಡಾ. ವಿಜಯನಳಿನಿ ರಮೇಶ, ದಿವಾಕರ ಕೆರೆಹೊಂಡ, ನಿರ್ಮಲಾ ಗೋಳಿಕೊಪ್ಪ, ಉದ್ಯಮಿ ಉಪೇಂದ್ರ ಪೈ, ಪತ್ರಕರ್ತ ಅಶೋಕ ಹಾಸ್ಯಗಾರ ಪಾಲ್ಗೊಳ್ಳಲಿದ್ದಾರೆ ಎಂದರು.
ಅ.2ರಂದು ಟಿಎಂಎಸ್ ಸಭಾಂಗಣದಲ್ಲಿ ದಕ್ಷ ಯಜ್ಞ, ಅ.3ರಂದು ಭೃಗು ಶಾಪ, ಅ.4 ರಂದು ಶ್ರೀರಾಮ ನಿರ್ಯಾಣ ತಾಳಮದ್ದಲೆ ನಡೆಯಲಿವೆ. ಅ.5ರಂದು ಹೆಗಡೆಕಟ್ಟಾದ ಸುವರ್ಣ ಸುರಭಿ ಸಭಾಭವನದಲ್ಲಿ ಶ್ರೀಕೃಷ್ಣ ಸಂಧಾನ, ಅ.6ರಂದು ಸಾಲ್ಕಣಿ ಲಕ್ಷ್ಮೀನರಸಿಂಹ ಮಾಧ್ಯಮಿಕ ಶಾಲೆಯಲ್ಲಿ ಸೀತಾಪಹಾರ, ಅ.7ರಂದು ಸಾಗರ ತಾಲೂಕು ಹಂಸಗಾರಿನಲ್ಲಿ ಸೌಗಂಧಿಕಾ ಹರಣ , ಅ.8ರಂದು ಸಿದ್ದಾಪುರದ ಟಿಎಂಎಸ್ ಸಭಾಂಗಣದಲ್ಲಿ ಕೌಶಿಕ ಪ್ರತಿಜ್ಞೆ, ಅ.9 ರಂದು ಹಾರ್ಸಿಕಟ್ಟಾದ ಗಜಾನನೋತ್ಸವ ಮಂಟಪದಲ್ಲಿ ಭೀಷ್ಮಾರ್ಜುನ, ಅ. 10ರಂದು ಕುಮಟಾದ ಯೋಗಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಜಾಂಬವತಿ ಪರಿಣಯ, ಅ. 11ರಂದು ಹೊನ್ನಾವರ ತಾಲೂಕು ಚಂದಾವರದ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಇಂದ್ರಜಿತು ಕಾಳಗ ಹಾಗೂ ಅ.12ರಂದು ಹಳದಿಪುರದ ಮಹಾಲಕ್ಷ್ಮೀದಾಮೋದರ ದೇವಸ್ಥಾನದಲ್ಲಿ ಭಾರ್ಗವ ವಿಜಯ ತಾಳಮದ್ದಲೆ ನಡೆಯಲಿವೆ ಎಂದರು.ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಕೇಶವ ಹೆಗಡೆ ಕೊಳಗಿ, ಅನಂತ ಹೆಗಡೆ ದಂತಳಿಕೆ, ಸರ್ವೇಶ್ವರ ಹೆಗಡೆ ಕೋಣಾರು ಭಾಗವಹಿಸಲಿದ್ದಾರೆ. ಅರ್ಥಧಾರಿಗಳಾಗಿ ಗಣರಾಜ ಕುಂಬ್ಳೆ, ಗ.ನಾ. ಭಟ್, ದಿವಾಕರ ಕೆರೆಹೊಂಡ, ಮಹೇಶ ಭಟ್, ವಾಸುದೇವ ರಂಗ ಭಟ್, ಗಣಪತಿ ಭಟ್ ಸಂಕದಗುಂಡಿ, ವಿ. ಉಮಾಪತಿ ಭಟ್ ಕೆರೆಕೈ, ಅಶೋಕ ಭಟ್, ರಾಧಾಕೃಷ್ಣ ಕಲ್ಚಾರ್, ಪವನ ಕಿರಣಕೆರೆ, ಹರೀಶ ಬಳಂತಿಮಗರು, ಈಶ್ವರ ಭಟ್ ಸರ್ಪಂಗಳ, ಡಾ. ವಿನಾಯಕ ಭಟ್ ಗಾಳಿಮನೆ, ಡಾ. ಶುಭಾ ಮರವಂತೆ ಶಿವಮೊಗ್ಗ ಇತರರು ಭಾಗವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ನಿವೃತ್ತ ಶಿಕ್ಷಕಿ ಗೀತಾ ಎಂ. ಹೆಗಡೆ ಮತ್ತಿತರರು ಇದ್ದರು.