13ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

| Published : Oct 01 2024, 01:38 AM IST

ಸಾರಾಂಶ

ಜಮಖಂಡಿ ತಾಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಅ.13 ರಂದು ನಗರದ ಬಸವಭವನದಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ, ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ತಾಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಅ.13 ರಂದು ನಗರದ ಬಸವಭವನದಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ, ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ಸಮ್ಮೇಳನದ ಲಾಂಛನ ಹಾಗೂ ಪೊಸ್ಟರ್‌ಗಳನ್ನು ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್‌ ತಿಂಗಳಲ್ಲಿ ಸಮ್ಮೇಳನ ನಡೆಯಬೇಕಿತ್ತು. ಚುನಾವಣಾ ನೀತಿ ಸಂಹಿತೆ ಇದ್ದುದರಿಂದ ತಡವಾಗಿ ಸಮ್ಮೇಳನ ಏರ್ಪಡಿಸಲಾಗಿದೆ. ವೇದಾಂತ ಆಚಾರ್ಯ ಸಹಜಾನಂದ ಸ್ವಾಮಿಗಳು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲೂಕಿನ ಎಲ್ಲ ಸಾಹಿತಿಗಳು ಮತ್ತು ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ ಎಂದರು.ಸ್ವಾಗತ ಸಮಿತಿಯ ಸದಸ್ಯ ಟಿ.ಪಿ.ಗಿರಡ್ಡಿ ಮಾತನಾಡಿ, ಅ.13 ರಂದು ಬೆಳಗ್ಗೆ 7 ಗಂಟೆಗೆ ಧ್ವಜಾರೋಹಣ ನಡೆಯಲಿದ್ದು, ಭಾರತ ಸೇವಾದಳ ತಾಲೂಕು ಘಟಕದವರು ಧ್ವಜಾರೋಹಣದ ಜವಾಬ್ದಾರಿ ವಹಿಸಿದ್ದು, ಶಾಸಕರು ಧ್ವಜಾರೊಹಣ ನೆರವೇರಿಸಲಿದ್ದಾರೆ. 8 ಗಂಟೆಗೆ ಹಳೆಯ ತಹಸೀಲ್ದಾರ್‌ ಕಚೇರಿಯಿಂದ ಭುವನೇಶ್ವರಿ ದೇವಿ ಹಾಗೂ ಸಹಜಾನಂದ ಸ್ವಾಮಿಗಳ ಮೆರವಣಿಗೆ ನಡೆಯಲಿದೆ. ನಂತರ 10 ಗಂಟೆಗೆ ಸಮ್ಮೇಳನದ ಉದ್ಘಾಟನೆ ನಡೆಯಲಿದ್ದು ದಲಿತ, ಮಹಿಳೆ ಹಾಗೂ ಸಾಹಿತ್ಯದ ಕುರಿತು ಮೂರು ಗೋಷ್ಠಿಗಳು ನಡೆಯಲಿವೆ. ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಭಾಗವಹಿಸಲಿದ್ದಾರೆ. ಪುಸ್ತಕ ಮಳಿಗೆಗಳು ಮತ್ತು ವಿವಿಧ ಬಗೆಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಕೋಶಾಧ್ಯಕ್ಷ ಉಮೇಶ ಮಹಬಳ ಶೆಟ್ಟಿ ಮಾತನಾಡಿ, ಕನ್ನಡಭಾಷೆ, ನೆಲ ಜಲದ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಸೇವೆ ಮಾಡಬೇಕು. ಸ್ಮರಣ ಸಂಚಿಕೆ ಬಿಡುಗಡೆ ಮತ್ತು ನಿರ್ಣಯಗಳ ಮಂಡನೆಯ ಕಾರ್ಯಕ್ರಮವಿರುತ್ತದೆ. ಅಂದು ಕೈಗೊಂಡ ನಿರ್ಣಯಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಸಂತೋಷ ತಳಕೇರಿ, ಹಿರಿಯ ನ್ಯಾಯವಾದಿ ಎನ್‌.ಎಸ್‌.ದೇವರ, ಕಾರ್ಯದರ್ಶಿ ವಿನೋದ ಲೋಣಿ ಇದ್ದರು.