ಸಾರಾಂಶ
ತುಳುನಾಡಿನ ಕಾರ್ಣಿಕ ಸ್ಥಳ, ಮೂಲ್ಕಿ ತಾಲೂಕು ಪಕ್ಷಿಕೆರೆ ಸಮೀಪದ ಹರಿಪಾದೆ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಮಂಗಳವಾರ ರಾತ್ರಿ ನಡೆದ ನೇಮೋತ್ಸವದಲ್ಲಿ ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಭಾಗಿಯಾಗಿದ್ದಾರೆ. ಈ ಸಂದರ್ಭ ಅವರು ತುಲಾಭಾರ ಸೇವೆ ಹರಿಕೆ ಹೊತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮೂಲ್ಕಿ
ತುಳುನಾಡಿನ ಕಾರ್ಣಿಕ ಸ್ಥಳ, ಮೂಲ್ಕಿ ತಾಲೂಕು ಪಕ್ಷಿಕೆರೆ ಸಮೀಪದ ಹರಿಪಾದೆ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಮಂಗಳವಾರ ರಾತ್ರಿ ನಡೆದ ನೇಮೋತ್ಸವದಲ್ಲಿ ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಭಾಗಿಯಾಗಿದ್ದಾರೆ.ರಾತ್ರಿ ಪಕ್ಷಿಕೆರೆ ಸಮೀಪದ ಹರಿಪಾದೆ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಜಾರಂದಾಯ ದೈವದ ವಾರ್ಷಿಕ ನೇಮ ನಡೆಯುತ್ತಿರುವ ಸಂದರ್ಭದಲ್ಲಿ ಆಗಮಿಸಿದ ಅವರು, ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ, ಸುಮಾರು ಮೂರು ಗಂಟೆಗಳ ಕಾಲ ದೈವದ ನೇಮ ವೀಕ್ಷಿಸಿದರು.
ಇತ್ತೀಚೆಗೆ ವಿಶಾಲ್ ಆರೋಗ್ಯದಲ್ಲಿ ಏರು ಪೇರಾದ ಸಂದರ್ಭ ದೈವಕ್ಕೆ ಪ್ರಾರ್ಥನೆ ಸಲ್ಲಿಸಿದ್ದು, ಸಂಪೂರ್ಣ ಗುಣಮುಖವಾಗಿ ಬಂದು ಶ್ರೀ ಕ್ಷೇತ್ರದಲ್ಲಿ ತುಲಾಭಾರ ಸೇವೆ ಕೊಡಲು ಅರ್ಚಕರು ಸೂಚಿಸಿದ್ದು ಇದಕ್ಕೆ ವಿಶಾಲ್ ಒಪ್ಪಿದ್ದಾರೆ.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶಾಲ್, ಕಾಂತಾರ ಸಿನಿಮಾದಲ್ಲಿ ದೈವ ಮತ್ತು ಇಲ್ಲಿನ ನೇಮೋತ್ಸವದ ಬಗ್ಗೆ ತಿಳಿದಿದ್ದೇನೆ. ಇದೀಗ ಪ್ರಥಮ ಬಾರಿಗೆ ತುಳುನಾಡಿನ ನೇಮೋತ್ಸವ ನೋಡುತ್ತಿದ್ದು ತುಂಬಾ ಖುಷಿ ನೀಡಿದೆ ಎಂದರು.
ಸೋಮವಾರ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದು ಬಳಿಕ ಮಂಗಳವಾರ ಹರಿಪಾದೆಗೆ ಭೇಟಿ ನೀಡಿದ್ದೇನೆ ಎಂದ ಅವರು, ಬೆಳೆಯುತ್ತಿರುವ ತುಳು ಚಿತ್ರರಂಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮಿಳುನಲ್ಲಿ ಹಲವು ಸಿನಿಮಾಗಳ ಮಾತುಕತೆ ನಡೆಯುತ್ತಿದೆಯೆಂದು ತಿಳಿಸಿದರು.ಹರಿಪಾದೆಯ ಜಾರಂದಾಯ ದೈವ ಅತ್ಯಂತ ಕಾರಣಿಕದ ದೈವವಾಗಿದ್ದು ನಂಬಿದವರಿಗೆ ಇಂಬು ನೀಡುವ ದೈವವಾಗಿದೆ. ಇಲ್ಲಿನ ನೇಮೋತ್ಸವ ಸಂದರ್ಭ ಜಾರಂದಾಯನ ಪಲ್ಲಕ್ಕಿಗೆ ಆವೇಶ ಬರುತ್ತದೆ, ಸುಮಾರು 15 ಜನ ಸೇವಕರು ನಿಯಂತ್ರಣಕ್ಕೆ ಪ್ರಯತ್ನಿಸಿದರೂ ನಿಯಂತ್ರಣಕ್ಕೆ ಸಿಗುವುದಿಲ್ಲ. ಇಂತಹ ಕಾರಣಿಕ ಹೊಂದಿರುವ ಶ್ರೀ ಕ್ಷೇತ್ರದ ಬಗ್ಗೆ ತಿಳಿದು ವಿಶಾಲ್ ಭೇಟಿ ನೀಡಿರುವ ಸಾದ್ಯತೆ ಇದೆ.