ಸಾರಾಂಶ
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಉತ್ತಮ ಸಮಾಜ ಕಟ್ಟುವಲ್ಲಿ ಪತ್ರಕರ್ತರ ಸದಾ ಜಾಗೃತರಾಗಿರಬೇಕೆಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಹೇಳಿದರು.ತಾಪಂ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನಿತರಿಗೆ ಅಭಿನಂದನ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮುಖಾಂತರ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಪತ್ರಿಕೆಗಳಿಗೆ ಹಲವು ವರ್ಷಗಳ ಇತಿಹಾಸವಿದ್ದು, ತನ್ನದೇ ಆದ ಓದುಗರ ಬಳಗವನ್ನು ಸೃಷ್ಟಿಸಿಕೊಂಡಿದೆ, ಆದರೆ ಮುಂದುವರೆದ ಪ್ರಪಂಚದಲ್ಲಿ ಪತ್ರಿಕೆಗಳನ್ನು ಕೊಂಡು ಓದುವವರ ಸಂಖ್ಯೆ ಕ್ಷೀಣಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಇಂದಿನ ಕಾಲದಲ್ಲಿ ಮೊಬೈಲ್, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಅಗತ್ಯವಿರುವ ಮಾಹಿತಿಗಳನ್ನು ಕ್ಷಣಾರ್ಧದಲ್ಲೇ ಪಡೆಯಬಹುದು ಹಾಗೂ ಜಗತ್ತಿನ ವಿದ್ಯಮಾನಗಳನ್ನು ಬೆರಳು ತುದಿಯಲ್ಲೇ ವೀಕ್ಷಿಸುವುದರ ಮೂಲಕ ಇಂದು ಕನ್ನಡ ಪತ್ರಿಕೆಗಳು ಪ್ರಸಾರವು ಕಡಿಮೆಯಾಗುತ್ತಿರುವುದಕ್ಕೆ ಒಂದು ಕಾರಣವಾಗಿದೆ, ಜೊತೆಗೆ ಸುಸ್ಥಿರ ಸಮಾಜವನ್ನು ಕಟ್ಟುವಲ್ಲಿ ಪತ್ರಕರ್ತರು ಅಗತ್ಯವಿರುವ ಕ್ರಮಗಳನ್ನು ಅನುಸರಿಸಬೇಕು, ಈ ನಿಟ್ಟಿನಲ್ಲಿ ಪತ್ರಕರ್ತರಿಗೆ ಸಮಾಜದಲ್ಲಿ ಹೆಚ್ಚಿನ ಜವಾಬ್ದಾರಿಯಿದೆ. ಪತ್ರಿಕೆಗಳು ಸಮಾಜಕ್ಕೆ ಅತಿ ಮುಖ್ಯವಾದ ಸಾಧನಗಳಾಗಿವೆ. ಪತ್ರಿಕೆಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನ ಮತ್ತು ಪ್ರಪಂಚದ ವಿದ್ಯಮಾನಗಳನ್ನು ಅರಿಯಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಬೇಕೆಂದು ತಿಳಿಸಿದರು.ಮೈಸೂರು ಜಿಲ್ಲಾ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ಪತ್ರಕರ್ತರು ಸಾಮಾಜಿಕ ಜವಾಬ್ದಾರಿಯನ್ನು ಮೈಗೂಡಿಸಿಕೊಳ್ಳಬೇಕು. ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳದ ಪತ್ರಿಕೋದ್ಯಮವಿಲ್ಲ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಪತ್ರಕರ್ತ, ಪತ್ರಿಕೋದ್ಯಮ ಎರಡು ಬದಲಾಗಿದೆ, ಇದರಿಂದಾಗಿ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳನ್ನು ಕ್ಷಣ ಮಾತ್ರದಲ್ಲಿಯೇ ತಿಳಿಯುತ್ತಿದ್ದೇವೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮಾತನಾಡಿ, ಕಾಲ ಬದಲಾದಂತೆ ತಂತ್ರಜ್ಞಾನ ಬೆಳೆದು ಪತ್ರಿಕೋದ್ಯಮದಲ್ಲೂ ನಾನಾ ರೀತಿಯಲ್ಲಿ ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಆದರೆ, ನಮ್ಮ ಪತ್ರಿಕೋದ್ಯಮದ ಗುರಿ, ಉದ್ದೇಶ ಎಂದಿಗೂ ಬದಲಾಗುವುದಿಲ್ಲ, ಬದಲಾಗಲೂ ಬಾರದು, ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ವರದಿಗಾರರಿಗೆ ತಾಂತ್ರಿಕ ಸಮಸ್ಯೆ ಭಾಷಾ ಸಮಸ್ಯೆ ಕಾಡುತ್ತಿದೆ. ಈ ಗೊಂದಲಗಳಿಗೆ ಭಾಷಾ ಪತ್ರಿಕೋದ್ಯಮ ಅನುಕೂಲ. ಪತ್ರಕರ್ತರಲ್ಲಿ ಜಾಗೃತಿ ಮೂಡಿಸಲು ಕಾರ್ಯಾಗಾರ, ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಹೆಚ್ಚಿಗೆ ಹಮ್ಮಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಪತ್ರಕರ್ತರು ಭಾಗವಹಿಸಿ ವಿಷಯಗಳನ್ನು ತಿಳಿದುಕೊಳ್ಳುವ ಮೂಲಕ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿಕುಮಾರ್, ಪತ್ರಕರ್ತರಾದ ಸತ್ಯನಾರಾಯಣ್, ಗ್ರಾಮಾಂತರ ವರದಿಗಾರರಾದ ಪುನೀತ್, ಪವನ್ ಕುಮಾರ್, ಬಿ.ಆರ್. ಗಣೇಶ್, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ತಾಲೂಕಿನ ಪತ್ರಕರ್ತರ ಮಕ್ಕಳನ್ನು ಗೌರವಿಸಲಾಯಿತು.
ಪತ್ರಿಕಾ ದಿನಾಚರಣೆಯ ಅಂಗವಾಗಿ ಪತ್ರಕರ್ತರಿಗೆ ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಪತ್ರಕರ್ತರಿಗೆ ಉಡುಗೊರೆ ನೀಡಿದರು.ತಾಪಂ ಸಹಾಯಕ ನಿರ್ದೇಶಕ ಕರುಣಾಕರ್, ಜಿಲ್ಲಾ ಪತ್ರಕರ್ತರ ಸಂಘದ ಗ್ರಾಮಾಂತರ ಕಾರ್ಯದರ್ಶಿ ದಾ.ರಾ. ಮಹೇಶ್, ನಿರ್ದೇಶಕ ಹುಲ್ಲಹಳ್ಳಿ ಮೋಹನ್ , ನೇರಳಕುಪ್ಪೆ ಮಹದೇವ್, ಪಿರಿಯಾಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ. ರವಿಚಂದ್ರ, ಪ್ರಧಾನ ಕಾರ್ಯದರ್ಶಿ ಪಿ. ಮಲ್ಲೇಶ್, ಉಪಾಧ್ಯಕ್ಷ ಬಿ.ಎಂ. ಸ್ವಾಮಿ, ಕಾರ್ಯದರ್ಶಿ ಪಿ.ಎನ್. ದೇವೇಗೌಡ , ಜಿಲ್ಲಾ ನಿರ್ದೇಶಕ ಸಿ.ಎನ್. ವಿಜಯ್, ಸದಸ್ಯರಾದ ಕೆ.ಪಿ. ವೆಂಕಟೇಶ, ಕೆ.ಆರ್. ಮಹೇಶ್, ಪಿ.ಡಿ. ಪ್ರಸನ್ನ, ಶರತ್ ಕುಮಾರ್ , ಮುಕುಂದ, ರಾಮೇಗೌಡ, ಲೋಕೇಶ, ಪ್ರಸನ್ನಕುಮಾರ, ಪುನೀತ್, ವಿನಯ್ ಕುಮಾರ್, ಶಿವಣ್ಣ, ಅಶೋಕ, ಎಚ್.ಕೆ. ಮಹೇಶ್, ಸದಾಶಿವ , ಇಂತಿಯಾಜ್ ಅಹಮದ್, ನವೀನ್ ಕುಮಾರ್, ಸತೀಶ್ ಆರಾಧ್ಯ ಇದ್ದರು.