ಶ್ರೀರಂಗಪಟ್ಟಣ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‍ ಪಕ್ಷಗಳ ಬೆಂಬಲಿತರು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದು, ಅ.4 ರಂದು ನಡೆಯುವ ಮತದಾನಕ್ಕೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಪ್ರಚಾರದ ಬಿರುಸಿನಲ್ಲಿ ತೊಡಗಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‍ ಪಕ್ಷಗಳ ಬೆಂಬಲಿತರು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದು, ಅ.4 ರಂದು ನಡೆಯುವ ಮತದಾನಕ್ಕೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಪ್ರಚಾರದ ಬಿರುಸಿನಲ್ಲಿ ತೊಡಗಿದ್ದಾರೆ.

ಸಂಘದ ಎ ದರ್ಜೆಯಿಂದ ವಿವಿಧ ಸಂಘ ಸಂಸ್ಥೆಗಳಲ್ಲಿ ಆಯ್ಕೆಯಾದ ಪ್ರತಿನಿಧಿಗಳ 4 ಮಂದಿ ಆಯ್ಕೆಗೆ ಮೂರು ಪಕ್ಷಗಳಿಂದ ಒಟ್ಟು 12 ಮಂದಿ ಸ್ಪರ್ಧೆ ಮಾಡಿದ್ಧಾರೆ. ಬಿ ದರ್ಜೆ 8 ಮಂದಿ ಆಯ್ಕೆಗೆ ಕಾಂಗ್ರೆಸ್‍ 8 , ಜೆಡಿಎಸ್‍ 8, ಬಿಜೆಪಿ 7 ಮಂದಿಗಳನ್ನು ಕಣಕ್ಕಿಳಿಸಲಾಗಿದೆ.

ಮೂರು ಪಕ್ಷಗಳಿಂದ ಬೆಂಬಲಿತ ಅಭ್ಯರ್ಥಿಗಳ ಸ್ಪರ್ಧೆ ಜೊತೆಗೆ ಒಬ್ಬರು ಪಕ್ಷೇತರರಾಗಿ ಸ್ಪರ್ಧೆ ಬಯಸಿದ್ದಾರೆ. ಟಿಎಪಿಸಿಎಂಎಸ್‍ ನ ಷೇರುದಾರ ಒಟ್ಟು 3194 ಮಂದಿ ಮತದಾನದ ಹಕ್ಕು ಪಡೆದಿದ್ದು, ಮತ ಚಲಾಯಿಸಲಿದ್ದಾರೆ.

ತಹಸೀಲ್ದಾರ್ ಚೇತನಾ ಯಾದವ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಹಾಯಕರಾಗಿ ಸಿಡಿಒ ರವಿ ಇದ್ದಾರೆ.

ಮೂರು ಪಕ್ಷದ ಬೆಂಬಲಿಗರಿಗೆ ಪ್ರತಿಷ್ಠೆಯ ಕಣವಾಗಿರುವುದರಿಂದ ಆಡಳಿತ ಪಕ್ಷದ ಕಾಂಗ್ರೆಸ್ ಹಾಗೂ ಇತರೆ ವಿಕ್ಷಗಳ ಮುಖಂಡರು ಹಾಗೂ ಪದಾಧಿಕಾರಿಗಳು ಆಯಾ ಗ್ರಾಮಗಳಲ್ಲಿ ಮತದಾರರನ್ನು ಭೇಟಿ ತಮ್ಮ ಸ್ಪರ್ಧಿಗಳ ಪರ ಮತಯಾಚನೆಯಲ್ಲಿ ತೊಡಗಿದ್ದಾರೆ.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಈಗಾಗಲೆ ಪ್ರಚಾರ ಕಾರ್ಯ ನಡೆಯುತ್ತಿದೆ. ಕಾಂಗ್ರೆಸ್ ಬೆಂಬಲಿತರ ಪರ ಶಾಸಕ ರಮೇಶ ಬಂಡಿದ್ದೇಗೌಡ, ಬ್ಲಾಕ್‍ ಕಾಂಗ್ರೆಸ್‍ ಅಧ್ಯಕ್ಷ ನಗುವನಹಳ್ಳಿ ಪ್ರಕಾಶ್‍, ಜೆಡಿಎಸ್‍ ಬೆಂಬಲಿತರ ಪರ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ತಾಲೂಕು ಅಧ್ಯಕ್ಷ ದಶರಥ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರ ಮುಖಂಡ ಇಂಡವಾಳು ಸಚ್ಚಿದಾನಂದ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷ ಪಿ.ಹಳ್ಳಿ ರಮೇಶ್‍ ನೇತೃತ್ವದಲ್ಲಿ ಪ್ರಚಾರ ಕಾರ್ಯ ಬಿರುಸುಗೊಂಡಿದೆ.