ತೆರಿಗೆ ಸಂಗ್ರಹಕ್ಕೆ ಟಾರ್ಗೆಟ್‌ ಇಟ್ಟಕೊಳ್ಳಿ: ಬೆಲ್ಲದ

| Published : Sep 29 2024, 01:30 AM IST

ಸಾರಾಂಶ

ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 3.38 ಲಕ್ಷ ಆಸ್ತಿಗಳಿವೆ. ಆದರೆ, ಈ ಎಲ್ಲ ಆಸ್ತಿಗಳಿಂದ ತೆರಿಗೆ ಸಂಗ್ರಹವಾಗುತ್ತಿಲ್ಲ. ಅಕ್ರಮ ಸಕ್ರಮಗಳಲ್ಲಿ ಇರುವವರಿಂದ ತೆರಿಗೆ ಕಟ್ಟಿಸಿಕೊಂಡರೆ ಪಾಲಿಕೆಯ ಆದಾಯವೂ ಹೆಚ್ಚಲಿದೆ. ಇದರೊಂದಿಗೆ ವಾರ್ಡ್‌ಗಳ ಅಭಿವೃದ್ಧಿಗೂ ಹೆಚ್ಚಿನ ಅನುಕೂಲ.

ಹುಬ್ಬಳ್ಳಿ:

ಪಾಲಿಕೆ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಅಧಿಕಾರಿಗಳೊಂದಿಗೆ ಸೇರಿ ತೆರಿಗೆ ಸಂಗ್ರಹಿಸಿದರೆ ಪ್ರತಿವರ್ಷ ₹400 ಕೋಟಿಯಿಂದ ₹500 ಕೋಟಿಯ ವರೆಗೂ ಆದಾಯ ಸಂಗ್ರಹವಾಗಲಿದೆ. ಬಂದ ಆದಾಯದಿಂದ ಮಹಾನಗರವನ್ನು ಸಾಕಷ್ಟು ಅಭಿವೃದ್ಧಿ ಮಾಡಬಹುದು. ಕೇಂದ್ರ, ರಾಜ್ಯ ಸರ್ಕಾರಗಳ ದುಂಬಾಲು ಬೀಳುವುದು ತಪ್ಪಲಿದೆ ಎಂದು ಶಾಸಕ, ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಅವರು ಇಲ್ಲಿನ ಹು-ಧಾ ಮಹಾನಗರ ಪಾಲಿಕೆಯ ಸಭಾಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ತೆರಿಗೆ ಸಂಗ್ರಹ ಹಾಗೂ ಆದಾಯ ಕ್ರೋಡೀಕರಣ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 3.38 ಲಕ್ಷ ಆಸ್ತಿಗಳಿವೆ. ಆದರೆ, ಈ ಎಲ್ಲ ಆಸ್ತಿಗಳಿಂದ ತೆರಿಗೆ ಸಂಗ್ರಹವಾಗುತ್ತಿಲ್ಲ. ಅಕ್ರಮ ಸಕ್ರಮಗಳಲ್ಲಿ ಇರುವವರಿಂದ ತೆರಿಗೆ ಕಟ್ಟಿಸಿಕೊಂಡರೆ ಪಾಲಿಕೆಯ ಆದಾಯವೂ ಹೆಚ್ಚಲಿದೆ. ಇದರೊಂದಿಗೆ ವಾರ್ಡ್‌ಗಳ ಅಭಿವೃದ್ಧಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಟಾರ್ಗೆಟ್‌ ಇಟ್ಟುಕೊಳ್ಳಿ:

ಪ್ರತಿಯೊಂದು ಪಾಲಿಕೆ ಸದಸ್ಯರು ಟಾರ್ಗೆಟ್‌ ಇಟ್ಟುಕೊಂಡು ನಿರ್ದಿಷ್ಟ ಸಮಯದೊಳಗೆ ತಮ್ಮ ವಾರ್ಡ್‌ಗಳಲ್ಲಿ ತೆರಿಗೆ ಸಂಗ್ರಹಿಸಲು ಆದ್ಯತೆ ನೀಡಬೇಕು. ಹೆಚ್ಚು ತೆರಿಗೆ ಸಂಗ್ರಹವಾದರೆ ಅದರಲ್ಲಿನ ಶೇ. 80ರಷ್ಟು ಹಣವನ್ನು ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನವಾಗಿ ನೀಡಲಾಗುವುದು. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ನಿರೀಕ್ಷಿಸುವ, ದುಂಬಾಲು ಬೀಳುವ ಅವಶ್ಯಕತೆಯೂ ಬರುವುದಿಲ್ಲ. ಈ ಕುರಿತು ಪಾಲಿಕೆ ಸದಸ್ಯರು ಗಮನ ಹರಿಸುವಂತೆ ತಿಳಿಸಿದರು.

ಬಾಕಿ ಉಳಿಯದಂತೆ ನೋಡಿಕೊಳ್ಳಿ:

ಪಾಲಿಕೆ ಅಧಿಕಾರಿಗಳು ಪ್ರತಿ ವಾರ್ಡ್ ಸದಸ್ಯರಿಗೆ ಆಸ್ತಿ ತೆರಿಗೆ ಬಗ್ಗೆ ಮಾಹಿತಿ ನೀಡಬೇಕು. ವಾರ್ಡ್ ವ್ಯಾಪ್ತಿಯಲ್ಲಿ ಯಾವುದು ವಸತಿ, ವಾಣಿಜ್ಯ ಆಸ್ತಿಗಳಿವೆ ಎಂಬುದು ತಿಳಿದರೆ ತೆರಿಗೆ ಸಂಗ್ರಹಿಸಲು ಅನುಕೂಲ ಆಗುತ್ತದೆ. ಹೆಸ್ಕಾಂ, ರೈಲ್ವೆ ಹಾಗೂ ಇನ್ನಿತರ ಸರ್ಕಾರಿ ಸಂಸ್ಥೆಗಳಿಂದ ತೆರಿಗೆ ಸಂಗ್ರಹಿಸಬೇಕು. ರೈಲ್ವೆ ಇಲಾಖೆಯಿಂದ ಕಳೆದ ಹಲವು ವರ್ಷಗಳಿಂದ ತೆರಿಗೆ ಸಂಗ್ರಹಿಸಿಲ್ಲ. ಈ ಬಗ್ಗೆ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಮಾತನಾಡಿದ್ದೇನೆ. ತೆರಿಗೆ ವಸೂಲಿಗೆ ಬಂದರೆ ಪಾವತಿಸುವುದಾಗಿ ಹೇಳಿದ್ದಾರೆ. ಪಾಲಿಕೆ ಅಧಿಕಾರಿಗಳು ಯಾವುದೇ ಆಸ್ತಿ ತೆರಿಗೆ ಬಾಕಿ ಉಳಿಯದಂತೆ ನೋಡಿಕೊಳ್ಳುವಂತೆ ಬೆಲ್ಲದ ಸೂಚನೆ ನೀಡಿದರು.

ಎಲ್ಲರೂ ಶ್ರಮಿಸಿ:ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹೆಚ್ಚಿನ ತೆರಿಗೆ ಸಂಗ್ರಹದಿಂದ ಮಹಾನಗರದ ಅಭಿವೃದ್ಧಿಯಾಗಲಿದೆ. ಸಭೆಯಲ್ಲಿ ನೀಡಿದ ಸಲಹೆಗಳನ್ನು ಅನುಷ್ಠಾನಗೊಳಿಸಿ ತೆರಿಗೆ ಸಂಗ್ರಹಿಸಲು ಎಲ್ಲರೂ ಶ್ರಮಿಸಬೇಕು. ತೆರಿಗೆ ಸಂಗ್ರಹಿಸಲು ಹೊರಗುತ್ತಿಗೆ ನೀಡಲು ಅವಕಾಶವಿದ್ದರೆ ಮುಂದಿನ ದಿನಗಳಲ್ಲಿ ಅದನ್ನು ಮಾಡಬಹುದು ಎಂದರು.ಇದೇ ವೇಳೆ ಕಂದಾಯ ಉಪ ಆಯುಕ್ತ ವಿಶ್ವನಾಥ ಅವರು ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟು ಆಸ್ತಿಗಳಿವೆ? ತೆರಿಗೆ ಸಂಗ್ರಹ ಹಾಗೂ ಪಾಲಿಕೆ ತೆರಿಗೆ ಸಂಗ್ರಹಿಸಲು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಈ ವೇಳೆ ಮೇಯರ್ ರಾಮಣ್ಣ ಬಡಿಗೇರ, ಉಪಮೇಯರ್ ದುರ್ಗಮ್ಮ ಬಿಜವಾಡ, ಸಭಾ ನಾಯಕ ವೀರಣ್ಣ ಸವಡಿ, ವಿರೋಧ ಪಕ್ಷದ ನಾಯಕ ರಾಜಶೇಖರ ಕಮತಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸೇರಿದಂತೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.