ಅಭಿಯಾನದ ಮೂಲಕ ಎಲ್ಲ ಮಕ್ಕಳಿಗೆ ಜಂತುಹುಳು ನಿವಾರಕ ಔಷಧಿ ನೀಡಲಾಗುತ್ತದೆ. ದೇಶದ ಅಭಿವೃದ್ಧಿ ಹಾಗೂ ಆರೋಗ್ಯವಂತ ಸಾಮಾಜದ ದೃಷ್ಟಿಯಿಂದ ಮಕ್ಕಳಿಗೆ ಉತ್ತಮ ಆಹಾರ, ಅಗತ್ಯ ಔಷಧಿ ನೀಡಬೇಕು.
ಧಾರವಾಡ:
ಜಿಲ್ಲೆಯಲ್ಲಿ ಫೆ. 10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಆಚರಿಸುತ್ತಿದ್ದು ಜಿಲ್ಲೆಯಲ್ಲಿ 1ರಿಂದ 19 ವರ್ಷದೊಳಗಿರುವ 5,63,638 ಮಕ್ಕಳಿಗೆ ಜಂತುಹುಳು ನಿವಾರಕ ಔಷಧಿ ಅಥವಾ ಅಲ್ಬೆಂಡಜೋಲ್ ಮಾತ್ರೆ ನೀಡುವ ಗುರಿ ಹೊಂದಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಹೇಳಿದರು.ಜಿಪಂ ಸಭಾಂಗಣದಲ್ಲಿ ಬುಧವಾರ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಜಂತುಹುಳು ನಿವಾರಣಾ ದಿನಾಚರಣೆಯ ಕುರಿತ ಪೋಸ್ಟರ್ ಬಿಡುಗಡೆ ಮಾಡಿದ ಅವರು, ಕಾರ್ಯಕ್ರಮ ಯಶಸ್ವಿಗೊಳಿಸಲು ತಂಡ ರಚಿಸಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ಮಕ್ಕಳಿಗೂ ಮಾತ್ರೆ ತಲುಪುವಂತೆ ಕ್ರಮವಹಿಸಬೇಕೆಂದರು.
ಅಭಿಯಾನದ ಮೂಲಕ ಎಲ್ಲ ಮಕ್ಕಳಿಗೆ ಜಂತುಹುಳು ನಿವಾರಕ ಔಷಧಿ ನೀಡಲಾಗುತ್ತದೆ. ದೇಶದ ಅಭಿವೃದ್ಧಿ ಹಾಗೂ ಆರೋಗ್ಯವಂತ ಸಾಮಾಜದ ದೃಷ್ಟಿಯಿಂದ ಮಕ್ಕಳಿಗೆ ಉತ್ತಮ ಆಹಾರ, ಅಗತ್ಯ ಔಷಧಿ ನೀಡಬೇಕು. ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ಜಂತುಹುಳು ಆಗುವುದರಿಂದ ಅತಿಸಾರ, ಹೊಟ್ಟೆನೋವು, ಸುಸ್ತು, ವಾಂತಿ, ಹಸಿವೆ ಇಲ್ಲದಿರುವುದು ಮುಂತಾದ ರೋಗ ಲಕ್ಷಣಗಳು ಕಂಡು ಬರುತ್ತವೆ ಎಂದರು.ಮಕ್ಕಳಲ್ಲಿ ಉಂಟಾಗುವ ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಗಟ್ಟಲು ಹಾಗೂ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆ ಕುಂಠಿತವಾಗದಂತೆ ಮುನ್ನಚ್ಚರಿಕೆ ವಹಿಸಲು ಪ್ರತಿ ಮಗುವಿಗೆ ಜಂತುಹುಳು ನಿವಾರಕ ಔಷಧಿ ಅಥವಾ ಅಲ್ಬೆಂಡಜೋಲ್ ಮಾತ್ರೆ ನೀಡುವ ಅಗತ್ಯವಿದೆ. ಜಂತುಹುಳು ರಹಿತ ಮಕ್ಕಳು ಆರೋಗ್ಯವಂತ ಮಕ್ಕಳಾಗಿರುತ್ತಾರೆ ಎಂದು ಹೇಳಿದರು.
ಅಲ್ಬೆಂಡಜೋಲ್ ಮಾತ್ರೆಯನ್ನು 1ರಿಂದ 2 ವರ್ಷದ ಮಕ್ಕಳಿಗೆ ಅರ್ಧ ಮಾತ್ರೆ, 2ರಿಂದ 3 ವರ್ಷದ ಮಕ್ಕಳಿಗೆ ಒಂದು ಪೂರ್ತಿ ಮಾತ್ರೆ, 3ರಿಂದ 19 ವರ್ಷದ ಮಕ್ಕಳಿಗೆ ಒಂದು ಪೂರ್ತಿ ಮಾತ್ರೆ ನೀಡಬೇಕು ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಂ. ಹೊನಕೇರಿ ಸ್ವಾಗತಿಸಿದರು. ಡಾ. ಸುಜಾತಾ ಹಸವಿಮಠ, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ತೇಲಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಅಜೀಜ್ ದೇಸಾಯಿ ಮತ್ತು ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿ ಇದ್ದರು.