ಸಾರಾಂಶ
-ಔರಾದ್ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಆಯುಧ ಪೂಜೆ, ರತನ್ ಟಾಟಾ ಶ್ರದ್ಧಾಂಜಲಿ ಕಾರ್ಯಕ್ರಮ
------ಕನ್ನಡಪ್ರಭ ವಾರ್ತೆ ಔರಾದ್
ಭಾರತೀಯ ಭವ್ಯ ಪರಂಪರೆಯಲ್ಲಿ ಅನೇಕ ಹಬ್ಬ ಹರಿದಿನಗಳು ಸಹಜ. ಆದರೆ, ಕೈಗಾರಿಕಾ ಕ್ಷೇತ್ರದಲ್ಲಿ ಆಯುಧ ಪೂಜೆ ಹಿನ್ನೆಲೆ ಇಡೀ ಕೈಗಾರಿಕಾ ಕ್ಷೇತ್ರ ಸ್ವಚ್ಛಗೊಳಿಸಿ ಅತಿ ಉಲ್ಲಾಸದೊಂದಿಗೆ ಆಚರಿಸುವ ಅಪರೂಪ ಸಂಭ್ರಮ ಇದಾಗಿದೆ ಎಂದು ಕ.ಸಾ.ಪ. ಕೋಶಾಧ್ಯಕ್ಷ ಶಿವಶಂಕರ ಟೋಕರೆ ನುಡಿದರು.ಬಸವನವಾಡಿ ಥಾಂಡಾ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯುಧ ಪೂಜೆ ಹಾಗೂ ರತನ್ ಟಾಟಾಜಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಟಾಟಾದಿಂದ ವಿಶೇಷವಾಗಿ ನಮ್ಮ ಕೌಶಲ್ಯ ಕ್ಷೇತ್ರಕ್ಕೆ ತುಂಬ ಸಹಕಾರ ಸಿಕ್ಕಿದೆ. ನಾಲ್ಕು ವರ್ಷಗಳ ಹಿಂದೆ ಕರ್ನಾಟಕ ಸರ್ಕಾರ ಹಾಗೂ ಟಾಟಾ ಸಹಯೋಗದೊಂದಿಗೆ ಔರಾದನಲ್ಲಿ 33 ಕೋಟಿ ಅನುದಾದಲ್ಲಿ ಪರಿಪೂರ್ಣ ಯಂತ್ರೋಪಕರಣಗಳು ಹಾಗೂ ಕಟ್ಟಡ ನಿರ್ಮಾಣವಾಗಿ ಪ್ರತಿವರ್ಷ 44 ಕುಶಲಕರ್ಮಿಗಳಿಗೆ ರೊಬೋಟ್ ಹಾಗೂ ಎಂ ಇ ವ್ಹಿ ತರಬೇತಿ ನಡೆಸಲಾಗುತ್ತಿದೆ ಎಂದರು.
ಇದಲ್ಲದೇ ಕ್ಷಿಪ್ರ ಅನುಷ್ಠಾನ, ಅಭಿವೃದ್ಧಿಯ ಹರಿಕಾರ ಶಾಸಕ ಪ್ರಭು ಬಿ ಚವ್ಹಾಣ ಅವರ ದೂರದೃಷ್ಟಿ ಸಹ ಇಲ್ಲಿ ಮರೆಯಲಾಗದು. ತಾಲೂಕಿನ ಅನೇಕ ಯೋಜನೆಗಳಲ್ಲಿ ಕೌಶಲ ಅಭಿವೃದ್ಧಿ ಮಾಡಿ ಹಿಂದುಳಿದ ಭಾಗಕ್ಕೆ ಕಾಯಕಲ್ಪ ನೀಡಿದ್ದಾರೆ ಎಂದರು.ಸಂಸ್ಥೆಯ ತರಬೇತಿ ಅಧಿಕಾರಿ ಯುಸೂಫ್ ಮಿಯ್ಯ ಜೋಜನಾ ಮಾತಾಡಿ, ಸರ್ಕಾರಿ ಐಟಿಐನಲ್ಲಿ ಕೌಶಲ ಕಲಿತ ಮಕ್ಕಳಿಗೆ ಟಾಟಾ ಯೋಜನೆಯಿಂದ ಬಹು ಕೌಶಲ್ಯ ಕಲಿಯಲು ಅನುಕೂಲವಾಗಿದೆ. ಯಂತ್ರೋಪಕರಣ ಹಾಗೂ ಸಂಪನ್ಮೂಲ ವ್ಯಕ್ತಿಗಳಿರುವುದರಿಂದಲೇ ಇಂದು ಉತ್ತಿರ್ಣರಾದ ನಮ್ಮ ಎಲ್ಲ ಮಕ್ಕಳಿಗೆ ಬೆಂಗಳೂರಿನ ಬಿ.ಇ.ಎಲ್ ಕಾರ್ಖಾನೆಯವರು ಅಪ್ರೆಂಟಿಷಿಪ್ ತರಬೇತಿಗೆ ಅಯ್ಕೆ ಮಾಡಿರುವುದು ಸಂತೃಪ್ತಿ ತಂದಿದೆ.
ನಮ್ಮ ಭಾಗಕ್ಕೆ ಟಾಟಾ ಅವರ ಬಹುದೊಡ್ಡ ಕೊಡುಗೆಯಾಗಿದ್ದು, ಅವರು ಇಂದು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರ ಆತ್ಮಕ್ಕೆ ಎರಡು ನಿಮಿಷಗಳ ಕಾಲ ಮೌನ ವಹಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.ಕಛೇರಿ ಅಧೀಕ್ಷಕ ಸುದರ್ಶನಕುಮಾರ ಮಂಗಲಗಿಕರ ಸ್ವಾಗತಿಸಿದರು, ಧನರಾಜ ಸ್ವಾಮಿ ನಿರೂಪಿಸಿದರೆ ಗಂಗಾರಾಮ ಯನಗುಂದಾ ವಂದಿಸಿದರು. ಕಾರ್ಯಕ್ರಮದಲ್ಲಿ ಚಂದ್ರಮೋಹನ ಬಂಗಾರೆ, ಮರಖಲೆ ಸಂಗಮೇಶ, ಸಲೀಮ, ರಾಣಿ ಸಿಬ್ಬಂದಿ ಜೊತೆಗೆ ವಿವಿಧ ವೃತ್ತಿಯ ತರಬೇತಿದಾರರು ಪಾಲ್ಗೊಂಡಿದ್ದರು.
----ಚಿತ್ರ 10ಬಿಡಿಆರ್51
ಔರಾದ್ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಆಯುಧ ಪೂಜೆ ಹಾಗೂ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಜರುಗಿತು.--