ಸಾರಾಂಶ
ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಕಡ್ಡಾಯವಾಗಿ ಉತ್ತಮ ಸಂಸ್ಕಾರ ಕಲಿಸಬೇಕು. ಸರ್ವರಿಗೂ ಉತ್ತಮ ಸಂಸ್ಕಾರ ದೊರೆತರೆ ಮಾತ್ರ ಸ್ವಾಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯ. ಸಂಪ್ರದಾಯದಂತೆ ಜಂಗಮವಟುಗಳಿಗೆ ನೀಡುವ ಅಯ್ಯಾಚಾರ ಪದ್ಧತಿ ಉಳಿಸಿಕೊಂಡು ಹೊಗಬೇಕು.
ಕನ್ನಡಪ್ರಭ ವಾರ್ತೆ ನಿಡಗುಂದಿ
ಶಿವದೀಕ್ಷೆ ಮೂಲಕ ಮಾಂಸಪಿಂಡದಿಂದ ಕೂಡಿದ ಶರೀರ ಮಂತ್ರಪಿಂಡವಾಗುತ್ತದೆ. ವೀರಶೈವ ಧರ್ಮದಲ್ಲಿ ಒಬ್ಬ ಜಂಗಮ ವಟುವಿಗೆ ದೀಕ್ಷೆ ಮಾಡಿದಾಗ ಪಾದೋದಕ ಸೇರಿದಂತೆ ಅನೇಕ ವಿಧಿ ವಿಧಾನಗಳಿಗೆ ಅರ್ಹನಾಗುತ್ತಾನೆ ಎಂದು ಆಲಮಟ್ಟಿಯ ಅನ್ನದಾನೇಶ್ವರ ಪುರವರ ಹಿರೇಮಠದ ರುದ್ರಮುನಿ ದೇವರು ಹೇಳಿದರು.ಪಟ್ಟಣದ ವಿರಕ್ತಮಠದ ಆವರಣದಲ್ಲಿ ನಡೆದ ಉಚಿತ ಸಾಮೂಹಿಕ ಅಯ್ಯಾಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಟುಗಳಿಗೆ ಶಿವದೀಕ್ಷೆ ನೀಡಿದ ಪಟ್ಟಣದ ರುದ್ರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಕಡ್ಡಾಯವಾಗಿ ಉತ್ತಮ ಸಂಸ್ಕಾರ ಕಲಿಸಬೇಕು. ಸರ್ವರಿಗೂ ಉತ್ತಮ ಸಂಸ್ಕಾರ ದೊರೆತರೆ ಮಾತ್ರ ಸ್ವಾಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯ. ಸಂಪ್ರದಾಯದಂತೆ ಜಂಗಮವಟುಗಳಿಗೆ ನೀಡುವ ಅಯ್ಯಾಚಾರ ಪದ್ಧತಿ ಉಳಿಸಿಕೊಂಡು ಹೊಗಬೇಕು. ಪೂರ್ವಜರ ಆಚಾರ, ವಿಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದರು.
ಹುನಗುಂದ ಗಚ್ಚಿನಮಠದ ಅಮರೇಶ್ವರ ದೇವರು, ಚಿಮ್ಮಲಗಿಯ ಸಿದ್ದರೇಣುಕ ಶ್ರೀಗಳು, ಇಟಗಿಯ ಗುರುಶಾಂತವೀರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಶಿಧರ ಹಿರೇಮಠ, ಬಸಲಿಂಗಯ್ಯ ಮಠಪತಿ, ರುದ್ರಯ್ಯ ಹಿರೇಮಠ, ಮಲ್ಲಿಕಾರ್ಜುನಯ್ಯ ತೋರಗಲ್ಲಮಠ, ಸಂಗಮೇಶ ಹಿರೇಮಠ, ಹೊಳಿಬಸಯ್ಯ ಹಿರೇಮಠ ಇತರರಿದ್ದರು. ಕಾರ್ಯಕ್ರಮಲ್ಲಿ ವಿರಕ್ತಮಠದ ಉಸ್ತುವಾರಿ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ತೋರಗಲ್ಲಮಠ ಅವರ ಪುತ್ರ ಶಿವಯೋಗಯ್ಯ ಸೇರಿದಂತೆ ನಾಲ್ಕು ಬಾಲಕರ ಅಯ್ಯಾಚಾರ ಮಾಡಲಾಯಿತು.