ಸಾರಾಂಶ
ಕುಷ್ಟಗಿ ಪಟ್ಟಣದ ಶ್ರೀಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಶ್ರೀ ಕಾಳಿಕಾದೇವಿಯ ಮಹಾಪುರಾಣ ಹಾಗೂ 116ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಲೇಬಗೇರಿಮಠದ ಸದ್ಯೋಜಾತ ಸ್ವಾಮಿಗಳು ಭಾಗವಹಿಸಿದ್ದರು.
ಕುಷ್ಟಗಿ: ಇಂದಿನ ಆಧುನಿಕತೆಯ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರಯುತ ವಿಚಾರಗಳು ಕಡಿಮೆಯಾಗುತ್ತಿದ್ದು, ಮಕ್ಕಳಿಗೆ ಆಚಾರ, ವಿಚಾರ ಸಂಸ್ಕೃತಿ ಕಲಿಸಬೇಕು ಎಂದು ಲೇಬಗೇರಿಮಠದ ಸದ್ಯೋಜಾತ ಸ್ವಾಮಿಗಳು ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಶ್ರೀ ಕಾಳಿಕಾದೇವಿಯ ಮಹಾಪುರಾಣ ಹಾಗೂ 116ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಕ್ಕಳಿಗೆ ಆಚಾರ, ವಿಚಾರ ಸಂಸ್ಕೃತಿ ಕಲಿಸುವ ಮೂಲಕ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿದೆ ಎಂದರು.ಗಂಗಾಧರೇಂದ್ರ ಸ್ವಾಮಿಗಳು ಮಾತನಾಡಿ, ನಮ್ಮ ಜೀವನ ಚರಿತ್ರೆ ದೇಹದ ಪುರಾಣ ಇದ್ದಂತೆ. ದೇವಿ ಪುರಾಣದಲ್ಲಿ ದೇವಿಯು ದುಷ್ಟರನ್ನು ಸಂಹಾರ ಮಾಡುವಂತೆ, ನಮ್ಮ ದೇಹದ ಪುರಾಣದಲ್ಲಿ ನಾವು ನಮ್ಮ ದುರಾಸೆಯನ್ನು ಸಂಹಾರ ಮಾಡಬೇಕು. ಅರಿಷಡ್ವರ್ಗಗಳನ್ನು ನಾಶ ಮಾಡಿಕೊಳ್ಳಬೇಕು. ಮೌಲ್ಯಯುತವಾದ ಶಕ್ತಿ ಪಡೆಯಬೇಕಾದರೆ ನಾವು ಧರ್ಮ ಓದಬೇಕು, ದೇವಿ ಪಾರಾಯಣ ಮಾಡಬೇಕು ಎಂದರು.
ಫಕೀರಸ್ವಾಮಿ ಲಾಚನಕೇರಿ ಮಾತನಾಡಿ, ದೇವಿಯ ಆರಾಧನೆ ಜತೆಗೆ ದೇವರ ಪೂಜೆ-ಪುನಸ್ಕಾರ ಮಾಡಬೇಕು. ಶ್ರದ್ಧೆ, ಭಕ್ತಿಯಿಂದ ಇರಬೇಕು. ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಬೇಕು. ಅಂದಾಗ ಮಾತ್ರ ಜೀವನ ಸಾರ್ಥಕ ಆಗುತ್ತದೆ ಎಂದರು.ಮೆರವಣಿಗೆ: ಕುಷ್ಟಗಿ ಪಟ್ಟಣದ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದಿಂದ ಶ್ರೀ ಕಾಳಿಕಾದೇವಿ ಭಾವಚಿತ್ರದ ಮೆರವಣಿಗೆಯೂ ಸಕಲ ಮಂಗಳವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮಹಿಳೆಯರು, ಮಕ್ಕಳು ಕಳಸ ಹಿಡಿದು ಪಾಲ್ಗೊಂಡಿದ್ದರು.
ಚಿದಾನಂದಪ್ಪಜ್ಜನವರು, ಬಾಲಚಂದ್ರಪ್ಪ ಅಜ್ಜಮವರ, ಆನಂದ ಹಡಪದ, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಶರಣಪ್ಪ ಬಡಿಗೇರ, ಈಶಪ್ಪ ಬಡಿಗೇರ, ರಾಮಣ್ಣ ಬ್ಯಾಲಿಹಾಳ, ಯಂಕಪ್ಪ ಕಟ್ಟಿಮನಿ, ದೇವಪ್ಪ ಗಂಗನಾಳ, ಸಂಗಪ್ಪ ಸೂಡಿ, ವಿಜಯಕುಮಾರ ಕರೆಂಡಿ, ಮರಿಯಪ್ಪ, ಕಳಕಪ್ಪ ಪುರದ, ಅಜರತ್ ಅಲಿ ಲಿಂಗನಬಂಡಿ, ಶಿವಯೋಗಿ ಸಾಹುಕಾರ, ಗೋಪಾಲ ಚನ್ನದಾಸರ, ಆನಂದ, ಮರಿಯಪ್ಪ, ಸಂಜೀವಪ್ಪ, ಜಗದೀಶ ನವಲಹಳ್ಳಿ ಪಾಲ್ಗೊಂಡಿದ್ದರು. ಶ್ರೀದೇವಿ ಪ್ರಾರ್ಥಿಸಿದರು. ಶರಣಪ್ಪ ಲೈನದ ಸ್ವಾಗತಿಸಿದರು. ವಿದ್ಯಾಶ್ರೀ ಹನುಮಗಿರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಆನಂದ ದೊಡ್ಡಪ್ಪ ಹಡಪದ ಹಾಗೂ ಕುಟುಂಬದವರು ತುಲಾಭಾರ ಕಾರ್ಯಕ್ರಮ ನಡೆಸಿಕೊಟ್ಟರು.