ಮಕ್ಕಳು ತಂದೆ ತಾಯಂದಿರನ್ನು ನೋಡಿಕೊಳ್ಳದ ಕಾರಣ ವೃದ್ಧಾಶ್ರಮಗಳ ಪಾಲಾಗುತ್ತಿದ್ದಾರೆ. ಇದಕ್ಕೆ ಶಿಕ್ಷಣದಲ್ಲಿ ಸಂಸ್ಕಾರದ ಕೊರತೆಯೇ ಕಾರಣ. ಪೋಷಕರು ಮಕ್ಕಳ ಕಲಿಕೆಗೆ ನೀಡುವಷ್ಟೇ ಆಸಕ್ತಿಯನ್ನು ಸಂಸ್ಕಾರ ಕಲಿಕೆಗೂ ನೀಡಬೇಕು

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಕ್ಕಳಿಗೆ ವಿದ್ಯೆ ಜೊತೆಗೆ ಉತ್ತಮ ಸಂಸ್ಕಾರ ಕಲಿಸಿದರೆ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಪದವಿ ಪೂರ್ವ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಆಯೋಜಿಸಿದ್ದ ಪೋಷಕರ ಪಾದಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿಂದು ವಿದ್ಯಾವಂತರ ಸಂಖ್ಯೆ ಹೆಚ್ಚಿದಷ್ಟು ಸಾಮಾಜಿಕ ಆರೋಗ್ಯ ಹದಗೆಡುತ್ತಿದೆ. ಸಮಾಜ ಸೇವೆಯಲ್ಲಿ ಭಗವಂತನನ್ನು ಕಾಣಬೇಕಾದ ವಿದ್ಯಾವಂತರು ಭ್ರಷ್ಟರಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಮಕ್ಕಳು ತಂದೆ ತಾಯಂದಿರನ್ನು ನೋಡಿಕೊಳ್ಳದ ಕಾರಣ ವೃದ್ಧಾಶ್ರಮಗಳ ಪಾಲಾಗುತ್ತಿದ್ದಾರೆ. ಇದಕ್ಕೆ ಶಿಕ್ಷಣದಲ್ಲಿ ಸಂಸ್ಕಾರದ ಕೊರತೆಯೇ ಕಾರಣ. ಪೋಷಕರು ಮಕ್ಕಳ ಕಲಿಕೆಗೆ ನೀಡುವಷ್ಟೇ ಆಸಕ್ತಿಯನ್ನು ಸಂಸ್ಕಾರ ಕಲಿಕೆಗೂ ನೀಡಬೇಕು ಎಂದರು.

ಪಾದಪೂಜೆ ಅಂಗವಾಗಿ ಕಾಲೇಜು ಆವರಣದಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಡಾ. ಬಾಲಗಂಗಾಧರನಾಥ ಶ್ರೀಗಳ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವೇದ ಮಂತ್ರ ಘೋಷಗಳ ಮೂಲಕ ವಿದ್ಯಾರ್ಥಿಗಳಿಂದ ಅವರ ತಂದೆ ತಾಯಿಗೆ ಪಾದಪೂಜೆ ಮಾಡಿಸಿ ಮಕ್ಕಳಿಗೆ ಆಶೀರ್ವಾದ ಮಾಡಿಸಲಾಯಿತು.

ಗಣಪತಿ ವೇಷಧಾರಿ ಮೂಲಕ ಜಗತ್ತಿನ ಆದಿ ತಂದೆ ತಾಯಿಗಳಾದ ಶಿವ ಪಾರ್ವತಿಯವರಿಗೆ ಪಾದಪೂಜೆ ಮಾಡಿಸುವ ಮೂಲಕ ಪಾದಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರವಣ ಪಿತೃಭಕ್ತಿಯನ್ನು ವಿದ್ಯಾರ್ಥಿಗಳಿಗೆ ವೇಷದಾರಿಗಳ ಮೂಲಕ ಪರಿಚಯಿಸಲಾಯಿತು. ವಿದ್ಯಾರ್ಥಿನಿಯರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ತಾಲೂಕು ಕಸಾಪ ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ, ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಪುಟ್ಟರಾಜು, ಬಳ್ಳೇಕೆರೆ ಮಂಜುನಾಥ್ ಸೇರಿದಂತೆ ಹಲವರಿದ್ದರು.

ಡಿ.28 ರಿಂದ 30ರವರೆಗೆ ಯಾದಗಿರಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ: ಸಿ.ಶಿವಲಿಂಗಯ್ಯ

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಹಾಗೂ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಡಿ.28 ರಿಂದ 30ರವರೆಗೆ ಯಾದಗಿರಿ ಜಿಲ್ಲೆಯ ಸರ್ಕಾರಿ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ 5ನೇ ರಾಜ್ಯ ವೈಜ್ಞಾನಿಕ ಸಮ್ಮೇಳನ ನಡೆಯಲಿದೆ ಎಂದು ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕರಸಿನಕೆರೆ ಸಿ.ಶಿವಲಿಂಗಯ್ಯ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮೇಳನದ ಅಧ್ಯಕ್ಷರಾಗಿ ಶರಣ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ ಆಯ್ಕೆಯಾಗಿದ್ದಾರೆ. ಲೋಕೊಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದರು.

ಮೌಢ್ಯಾಚರಣೆಗೆ ಹೆಸರಾದ ಯಾದಗಿರಿ ಜಿಲ್ಲೆಯಲ್ಲಿ ವೈಜ್ಞಾನಿಕ ವೈಚಾರಿಕ ಮನೋಭಾವನೆಯ ಜಾಗೃತಿಗೊಳಿಸಲು ಸಮ್ಮೇಳನ ಆಯೋಜಿಸಲಾಗಿದೆ. ಈ ಸಮ್ಮೇಳನಕ್ಕೆ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಪ್ರಾಧ್ಯಾಪಕರು ಮತ್ತು ಜಿಲ್ಲೆಯ ನಾಗರಿಕರು, ಪರಿಷತ್ತು ರಾಜ್ಯ ಘಟಕದ ಎಲ್ಲ ಜಿಲ್ಲೆಗಳಿಂದ ಸುಮಾರು 35 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದರು.

ಎಲ್ಲರಿಗೂ ಮೂರು ದಿನಗಳ ಕಾಲ ಉಚಿತವಾಗಿ ಊಟ, ವಸತಿ ಸೌಕರ್ಯವಿದೆ. ಪರಿಷತ್ತು ಮಂಡ್ಯ ಜಿಲ್ಲಾ ಘಟಕದ ವತಿಯಿಂದ 35 ಜನರ ತಂಡ ಯಾದಗಿರಿ ಸಮ್ಮೇಳನಕ್ಕೆ ಪ್ರಯಾಣ ಮಾಡಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯ ಮಟ್ಟದ ಎಚ್ಎನ್ ಪ್ರಶಸ್ತಿ ಕೊಡ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆಯಿಂದ ಈ ಬಾರಿ ನಿವೃತ್ತ ವಿಜ್ಞಾನ ವಿಷಯ ಪರಿವೀಕ್ಷಕ ನಂಜರಾಜು ಅವರನ್ನು ಆಯ್ಕೆ ಮಾಡಲಾಗಿದೆ ಎಂದರು. ರಾಜ್ಯ ಮಟ್ಟದ ಜೀವಮಾನ ಸಾಧನಾ ಪ್ರಶಸ್ತಿಗೆ ಪಾಂಡವಪುರದ ಪುಸ್ತಕ ಮನೆ, ಪುಸ್ತಕ ಪ್ರೇಮಿ ಅಂಕೇಗೌಡ ಆಯ್ಕೆಯಾಗಿದ್ದಾರೆ.

ಚೈತನ್ಯ ಶ್ರೀ ಪ್ರಶಸ್ತಿ ಗೆ ಕನ್ನಡ ಪ್ರಾಧ್ಯಾಪಕಿ, ವಿವಿಧ ಸಂಘಟನೆಗಳಲ್ಲಿ ಸಮಾಜ ಸೇವೆ ಮಾಡುತ್ತಿರುವ ವೈಜ್ಞಾನಿಕ ಚಿಂತಕಿ ಜಿ.ಉಷಾರಾಣಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪರಿಷತ್ತು ಉಪಾಧ್ಯಕ್ಷ ಗುರುಮೂರ್ತಿ, ಗೌರವಾಧ್ಯಕ್ಷೆ ವಸಂತಾ ವೆಂಕಟಾಚಲಯ್ಯ, ರಾಜ್ಯ ಸಮಿತಿ ಸದಸ್ಯೆ ಪುಷ್ಪಲತಾ, ಪ್ರಧಾನ ಕಾರ್ಯದರ್ಶಿ ಗೋಪನಹಳ್ಳಿ ಕೆಂಪರಾಜು, ಗೌರವಾಧ್ಯಕ್ಷ ಎಂ.ಸಿ.ಬಸವರಾಜು ಇದ್ದರು.