ಸಾರಾಂಶ
ಧಾರವಾಡ: ಜಿಲ್ಲೆಯಾದ್ಯಂತ ಐದು ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರದಿಂದ ನಿರ್ಜಲೀಕರಣ ಉಂಟಾಗಿ ಮಗುವಿಗೆ ಮಾರಣಾಂತಿಕವಾಗುವುದನ್ನು ತಡೆಗಟ್ಟಲು, ತೀವ್ರತರ ಅತಿಸಾರ ಕೊನೆಗೊಳಿಸುವ ಅಭಿಯಾನ ಈಗಾಗಲೇ ಜೂನ್ 16 ರಿಂದ ಶುರುವಾಗಿದ್ದು, ಜುಲೈ 31ರ ವರೆಗೆ ಹಮ್ಮಿಕೊಳ್ಳಲಾಗಿದೆ.
ಗುರುವಾರ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ದಿವ್ಯಾ ಪ್ರಭು, ಜಿಪಂ ಸಿಇಓ ಭುವನೇಶ ಪಾಟೀಲ ಈ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಮಾಡಿದ ಜಿಲ್ಲಾಧಿಕಾರಿ ದಿವ್ಯಪ್ರಭು, ಮಕ್ಕಳಲ್ಲಿ ಅತಿಸಾರದಿಂದ ನಿರ್ಜಲೀಕರಣ ಉಂಟಾಗಿ ಮಗುವಿಗೆ ಮಾರಣಾಂತಿಕವಾಗಬಹುದು. ಮಾತ್ರೆಯನ್ನು ನೀಡುವುದರ ಮೂಲಕ ತಡೆಗಟ್ಟಬಹುದು. ತೀವ್ರತರ ಅತಿಸಾರದಿಂದ ಮಕ್ಕಳ ಮರಣವನ್ನು ಶೂನ್ಯಕ್ಕೆ ತರುವುದು ಈ ಅಭಿಯಾನದ ಉದ್ದೇಶ ಎಂದರು.ಎಲ್ಲ ಆರೋಗ್ಯ ಕೇಂದ್ರ, ಉಪಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಈ ಅಭಿಯಾನ ಹಮ್ಮಿಕೊಂಡಿದ್ದು, ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಈ ಕುರಿತಂತೆ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಪಂ ಸಿಇಓ ಭುವನೇಶ ಪಾಟೀಲ ಮಾತನಾಡಿ, ಮಕ್ಕಳು ಅತಿಸಾರಕ್ಕೆ ಒಳಗಾದಾಗ ತಾಯಂದಿರು ವಿಶೇಷ ಕಾಳಜಿ ವಹಿಸಬೇಕು ಹಾಗೂ ಎದೆಹಾಲನ್ನು ಉಣಿಸುವುದುನ್ನು ನಿಲ್ಲಿಸಬಾರದು. ನಿಲ್ಲಿಸಿದಲ್ಲಿ ಮಗುವಿಗೆ ನಿರ್ಜಲೀಕರಣ ಉಂಟಾಗಬಹುದು ಎಂದು ತಿಳಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಐದು ವರ್ಷದ ಒಳಗಿನ ಮಕ್ಕಳ ಸಂಖ್ಯೆ 207837 ಇದ್ದು, ಈ ಮಕ್ಕಳಲ್ಲಿ ಅತಿಸಾರ ಉಂಟಾಗದಂತೆ ಜಾಗೃತಿ ಮೂಡಿಸಲು ತೀವ್ರತರ ಅತಿಸಾರ ಕೊನೆಗೊಳಿಸುವ ಅಭಿಯಾನ ಹಮ್ಮಿಕೊಂಡಿದೆ. ಶುಚಿತ್ವವನ್ನು ಕಾಪಾಡಿಕೊಳ್ಳುವುದರ ಮೂಲಕ, ಸ್ವಚ್ಚವಾಗಿ ಕೈತೊಳೆಯುದರ ಮೂಲಕ, ಅಹಾರ ತಯಾರಿಸುವಾಗ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದರ ಮೂಲಕ ಮಕ್ಕಳಲ್ಲಿ ಅತಿಸಾರ ಉಂಟಾಗದಂತೆ ನೋಡಿಕೊಳ್ಳಬಹುದು ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪಾ ಗಾಬಿ ಮಾತನಾಡಿದರು. ಮಕ್ಕಳ ತಜ್ಞರಾದ ಡಾ. ಟಿ.ಎ. ಶೇಪೂರ, ಡಾ. ವರ್ಷಾ ಹಾಗೂ ಡಾ. ಮೇಘಾ ಉಪನ್ಯಾಸ ನೀಡಿದರು. ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಸುಜಾತಾ ಹಸವೀಮಠ ವಂದಿಸಿದರು. ರೇಣುಕಾ ಮಲ್ಲನಗೌಡರ್ ನಿರೂಪಿಸಿದರು.