ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರವನ್ನೂ ಕಲಿಸಿ

| Published : Sep 13 2025, 02:04 AM IST

ಸಾರಾಂಶ

ಕೆಟ್ಟವರ ಸಂಗ ಸೇರದಿರಿ, ಕೆಟ್ಟದ್ದು ಬೇಗ ಮನಸ್ಸಿಗೆ ಹಿತ ನೀಡುತ್ತದೆ ಆದರೆ ಒಳ್ಳೆಯದು ಹೆಚ್ಚು ಜನರಿಗೆ ಹಿತ ನೀಡದು ಅದರೆ ಅವುಗಳಿಂದ ಸಿಗುವ ಫಲಿತಾಂಶ ಮುಖ್ಯವಾಗಿದೆ, ಕೆಟ್ಟದ್ದನ್ನು ನಂಬಿದವರು ಜೀವನದಲ್ಲಿ ಸೋಲುತ್ತಾರೆ, ಒಳ್ಳೆಯ ಹಾದಿಯನ್ನು ಅನುಸರಿಸಿದವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ.

ಕನ್ನಡಪ್ರಭ ವಾರ್ತೆ ಕೋಲಾರಅಕ್ಷರ ಕಲಿಯುವುದರ ಜತೆಗೆ ಸಂಸ್ಕಾರ ಕಲಿತರೆ ಮಾತ್ರ ವಿದ್ಯೆಗೆ ಭೂಷಣ ಮತ್ತು ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ನಗರ ಹೊರವಲಯದ ಜಾಲಪ್ಪ ಆಸ್ಪತ್ರೆಯ ವೈದ್ಯ ಬ್ಯಾಲಹಳ್ಳಿ ಡಾ.ಬಿ.ಜಿ.ಮನೋಹರಗೌಡ ಹೇಳಿದರು. ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್ ವಿತರಿಸಿ ಮಾತನಾಡಿ, ಗುರುಹಿರಿಯರಿಗೆ ಗೌರವ ನೀಡುವ ಸಂಸ್ಕಾರ ನಮ್ಮನ್ನು ಜೀವನದಲ್ಲಿ ಯಶಸ್ಸಿನ ಶಿಖರಕ್ಕೇರಿಸುತ್ತದೆ ಎಂದರು.ಸ್ವಚ್ಛತೆಗೆ ಆದ್ಯತೆ ನೀಡಿ

ವಿದ್ಯಾರ್ಥಿ ಜೀವನದಲ್ಲಿ ಸ್ವಚ್ಛತೆ ಕಾಪಾಡಿಕೊಂಡರೆ ಉತ್ತಮ ಆರೋಗ್ಯ ಸಿಗುತ್ತದೆ, ಆರೋಗ್ಯದಿಂದ ಅಕ್ಷರ ಕಲಿಕೆಗೆ ಆಸಕ್ತಿ ಹೆಚ್ಚುತ್ತದೆ, ಓದಬೇಕೆಂಬ ಛಲ, ಶ್ರದ್ಧೆ ಜತೆಗೆ ಸಮಾಜದಲ್ಲಿ ಗೌರವ ತಾನಾಗಿಯೇ ನಿಮ್ಮ ಹೆಗಲೇರುವುದರಿಂದ ನಿಮ್ಮ ಸಾಧನೆಯ ದಾರಿ ಸುಲಭವಾಗುತ್ತದೆ ಎಂದು ಕಿವಿಮಾತು ಹೇಳಿದರು.ಜಾಲಪ್ಪ ಆಸ್ಪತ್ರೆಯ ವೈದ್ಯ ಡಾ.ಪ್ರದೀಪ್ ಮಾತನಾಡಿ, ಕೆಟ್ಟವರ ಸಂಗ ಸೇರದಿರಿ, ಕೆಟ್ಟದ್ದು ಬೇಗ ಮನಸ್ಸಿಗೆ ಹಿತ ನೀಡುತ್ತದೆ ಆದರೆ ಒಳ್ಳೆಯದು ಹೆಚ್ಚು ಜನರಿಗೆ ಹಿತ ನೀಡದು ಅದರೆ ಅವುಗಳಿಂದ ಸಿಗುವ ಫಲಿತಾಂಶ ಮುಖ್ಯವಾಗಿದೆ, ಕೆಟ್ಟದ್ದನ್ನು ನಂಬಿದವರು ಜೀವನದಲ್ಲಿ ಸೋಲುತ್ತಾರೆ, ಒಳ್ಳೆಯ ಹಾದಿಯನ್ನು ಅನುಸರಿಸಿದವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ ಎಂದರು.

ಕಲಿಕೆಗೆ ಆಸಕ್ತಿ ಬೆಳೆಸಿಕೊಳ್ಳಿ

ಜಾಲಪ್ಪ ಆಸ್ಪತ್ರೆಯ ಡಾ.ವಿಶಾಲ್ ಮಾತನಾಡಿ, ಪೋಷಕರ ಆಶಯ, ಶಿಕ್ಷಕರ ಪರಿಶ್ರಮ ವ್ಯರ್ಥವಾಗದಿರಲು ನಿಮ್ಮಲ್ಲಿ ಕಲಿಕೆಗೆ ಆಸಕ್ತಿ ಅಗತ್ಯವಿದೆ, ನೀವು ಜೀವನದಲ್ಲಿ ಸಾಧನೆ ಮಾಡಲೇಬೇಕು ಎಂಬ ಛಲದಿಂದ ಓದಿನ ಕಡೆ ಗಮನ ನೀಡಿ, ಗುರುಹಿರಿಯರೊಂದಿಗೆ ಗೌರವದಿಂದ ನಡೆದುಕೊಳ್ಳುವ ಸಂಸ್ಕಾರ ಕಲಿಯಿರಿ ಗೆಲುವು ನಿಮ್ಮನ್ನರಿಸಿ ಬರುತ್ತದೆ ಎಂದರು.ಡಾ.ಮೋಹನ್ ಮಾತನಾಡಿದರು. ಮುಖ್ಯಶಿಕ್ಷಕಿ ತಾಹೇರಾ ನುಸ್ರತ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ಸುಗುಣಾ, ಲೀಲಾ, ಶ್ವೇತಾ, ವೆಂಕಟರೆಡ್ಡಿ, ರಮಾದೇವಿ, ಚೈತ್ರಾ ಇದ್ದರು.