ಶೃಂಗೇರಿಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ದೇಶದ ವಿಜಯದ ಇತಿಹಾಸವನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಹೇಳಿದರು.

ಕನ್ನಡಪ್ರಭ ವಾರ್ತೆ, ಶೃಂಗೇರಿ

ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ದೇಶದ ವಿಜಯದ ಇತಿಹಾಸವನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಹೇಳಿದರು.

ಪಟ್ಟಣದ ಮಾನಗಾರು ಜ್ಞಾನಭಾರತೀ ವಿದ್ಯಾಕೇಂದ್ರದ ಮುಂಬಾಗದಲ್ಲಿ ನಡೆದ ಶೃಂಗೇರಿ ಪಟ್ಟಣ ಹಾಗೂ ವಿದ್ಯಾರಣ್ಯಪುರ ಮಂಡಲ ಹಿಂದೂ ಸಮಾಜೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಕ್ಕಳಿಗೆ ಪರಾಜಯ ಇತಿಹಾಸದ ಕತೆ ಹೇಳುವ ಬದಲು ವಿಜಯದ ಇತಿಹಾಸದ ಕತೆ ಹೇಳಬೇಕು. ನಮ್ಮ ರಾಜ ಮಹಾರಾಜರ ಸಾಹಸಗಳನ್ನು ಹೇಳಿಕೊಡಬೇಕು. ಸೋಲಿನ, ಪರಾಜಯದ ಕತೆ ಹೇಳಿದರೆ ಅದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪರಾಜಯದ ಕತೆ ಷಡ್ಯಂತ್ರಗಳಿಂದ ಬಂದಿದೆ. ಇದು ರಾಮಾಯಣ ಕಾಲದಿಂದಲೇ ರಾವಣನಿಂದ ಷಡ್ಯಂತ್ರದ ಇತಿಹಾಸ ನಡೆದುಕೊಂಡು ಬಂದಿದೆ. ಸರಿಯಾದ ತಿಳುವಳಿಕೆ ಪಡೆದು ಒಳ್ಳೆಯ ಧಾರ್ಮಿಕ ಗ್ರಂಥಗಳನ್ನು ಓದಿ, ತಿಳಿದುಕೊಳ್ಳಬೇಕು . ಪರಂಪರೆ, ಮಾರ್ಗಗಳನ್ನು ಬಿಡಬಾರದು. ಪ್ರಶ್ನೆ ಕೇಳುವ ಜೊತೆಗೆ ಉತ್ತರ ತಿಳಿದುಕೊಳ್ಳಬೇಕು. ಪ್ರತಿಯೊಂದು ತಿಳುವಳಿಕೆ ಅರ್ಥಮಾಡಿ ಕೊಳ್ಳಬೇಕು.

ಧರ್ಮದ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ಹೆಚ್ಚಾಗುತ್ತಿದೆ. ಇದು ಧರ್ಮದ ಗಂಧಗಾಳಿ ಗೊತ್ತಿಲ್ಲದ ವ್ಯಕ್ತಿಗಳಿಂದ ಈ ಕೆಲಸ ನಡೆಯುತ್ತಿದೆ. ತಮಗೆ ಎಲ್ಲಾ ಗೊತ್ತಿದೆ. ತಾವೇ ಎಲ್ಲವನ್ನು ತಿಳಿದುಕೊಂಡವರು. ತಾವೇ ಪಂಡಿತರು ಎಂದುಕೊಂಡು ತಾವೇ ಧರ್ಮದ ಹೆಸರಲ್ಲಿ ಕಿರೀಟ ಹಾಕಿಕೊಳ್ಳುತ್ತಾರೆ. ಜನರನ್ನು ತಪ್ಪಿಸುವ ಕೆಲಸ ಮಾಡುತ್ತಾರೆ. ತಾವು ಹೇಳುವ ವಿಚಾರದ ಬಗ್ಗೆ ಅವರಿಗೆ ಗೊತ್ತಿರಬೇಕು.ತರ್ಕಕ್ಕೆ ತಕ್ಕಂತೆ ತಿಳುವಳಿಕೆಯೂ ಇರಬೇಕು.

ಜಗತ್ತಿನ ಶ್ರೇಯಸ್ಸಿಗೆ ಮಾರ್ಗ ತೋರಿಸುವ ಧರ್ಮ ಹಿಂದೂ ಧರ್ಮ. ಗೊತ್ತಿಲ್ಲದ, ತಿಳು‍ವಳಿಕೆ ಇಲ್ಲದ ಜನರು ಹಿಂದೂ ಧರ್ಮದ ಬಗ್ಗೆ ಏನೆಲ್ಲ ಹೇಳುತ್ತಿದ್ದಾರೆ. ಹಿಂದೂ ಧರ್ಮದ ಬಗ್ಗೆ ಆಕ್ಷೇಪ ಮಾಡುವುದೇ ಅವರ ಕೆಲಸ. ಹಿಂದೂ ಧರ್ಮದ ಆಚರಣೆ, ಹಬ್ಬಗಳು ಬಂದಾಗ ಇವರು ಪ್ರತ್ಯಕ್ಷರಾಗುತ್ತಾರೆ. ಇವರು ಹೇಳುವ ವಿಚಾರಗಳ ಬಗ್ಗೆ ಇವರಿಗೆ ಗೊತ್ತಿರುವುದಿಲ್ಲ. ಕೊನೆಗೆ ಇಂತವರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ.

ಶರಿರ, ಮನಸ್ಸು ಮತ್ತು ಮಾತು ಆರೋಗ್ಯಕರವಾಗಿರಬೇಕು. ಮನುಷ್ಯನ ಮೇಲೆ ಕುಟುಂಬ, ಸಾಮಾಜಿಕ ಹಾಗೂ ವೈಯಕ್ತಿ ಜವಾಬ್ದಾರಿಗಳೆಂಬ ಮುಖ್ಯವಾದ ಮೂರು ಜವಾಬ್ದಾರಿಗಳಿವೆ. ಪ್ರತಿಯೊಬ್ಬರೂ ಧ್ಯಾನ ಮಾಡಬೇಕು. ಒಳ್ಳೆಯ ಶಿಕ್ಷಣ, ಸಂಸ್ಕಾರ ಪಡೆದುಕೊಳ್ಳಬೇಕು. ನಮಗೆ ಒಳ್ಳೆ ಕೆಲಸ ಮಾಡುವವರು ನಮ್ಮ ಬಂಧುಗಳು, ನಮಗೆ ತೊಂದರೆ ನೀಡುವವರು ನಮ್ಮ ಶತ್ರುಗಳು.ಪ್ರತಿಯೊಬ್ಬರು ನಮ್ಮ ಧರ್ಮ,ಸಂಸ್ಕೃತಿ,ಪರಂಪರೆಯ ಉನ್ನತಿಗಾಗಿ ಶ್ರಮಿಸಬೇಕು ಎಂದರು.

ಆರ್ ಎಸ್ ಎಸ್ ಪ್ರಮುಖ್ ಶ್ರೀ ಕಜಂಪಾಡಿ ಸುಬ್ರಮಣ್ಯಭಟ್ ದಿಕ್ಸೂಚಿ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ಸಾಧಕರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಹಿಂದೂ ಸಮಾಜೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಪ್ರದೀಪ್ ಚೋಳರಮನೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

4 ಶ್ರೀ ಚಿತ್ರ 2-

ಶೃಂಗೇರಿ ಪಟ್ಟಣದ ಮಾನಗಾರು ಜ್ಞಾನಭಾರತೀ ವಿದ್ಯಾಕೇಂದ್ರ ಮುಂಬಾಗದಲ್ಲಿ ನಡೆದ ಶೃಂಗೇರಿ ಪಟ್ಟಣ ಹಾಗೂ ವಿದ್ಯಾರಣ್ಯಪುರ ಮಂಡಲ ಹಿಂದೂ ಸಮಾಜೋತ್ಸವದಲ್ಲಿ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಆಶೀರ್ವಚನ ನೀಡಿದರು.